ಮಹೀಪತಿದಾಸರು

ಸ್ಮರಿಸು ಮನವೆ ನೀ ದೇವಕಿಕಂದನ

( ಯಮನ್ ರಾಗ ಕೇರವಾ ತಾಳ) ಸ್ಮರಿಸು ಮನವೆ ನೀ ದೇವಕಿಕಂದನ ||ಧ್ರುವ|| ಶರಣರ ಪಾಲನ ದುರುಳರ ನಾಶನ ||೧|| ಉರಗಶಯನ ಗರುಡವಾಹನನ ||೨|| ಸಿರಿಯಲೋಲನ ಪರಮಪಾವನನ ||೩|| ಸುರರಾಜವಂದ್ಯನ ಕರಿರಾಜಪ್ರಿಯನ ||೪|| ಗಿರಿಯನೆತ್ತಿದನ ತುರುಗಳಗಾಯ್ದವನ ||೫|| ಹರಿನಾಮಧ್ಯೇಯನ ಸಾರಸಂಜೀವನ ||೬|| ದಾರಿದ್ರ್ಯಭಂಜನ ದುರಿತನಿವಾರಣ ||೭|| ಸರ್ವಾರ್ಥಕಾರಣ ಹರುಷದ ಜೀವನ ||೮|| ಪರಿಪೂರ್ಣವಿಹನ ಪೂರಿತಕಾಮನ ||೯|| ಗುರುಶಿರೋರತ್ನನ ಕರುಣಲೋಚನನ ||೧೦|| ಸ್ಮರಿಸು ಮನವೆ ನೀ ಮಹಿಪತಿ ಈಶನ ||೧೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೃಷ್ಣ ಎಂಥಾದೋ ನಿನ್ನ ಕರುಣಿ

( ಭೈರವಿ ರಾಗ ಧುಮಾಳಿ) ಕೃಷ್ಣ ಎಂಥಾದೋ ನಿನ್ನ ಕರುಣಿ ಶಿಷ್ಟ ಜನರುದ್ದೇಶ ಬಂದ್ಯೊ ನೀ ಕರುಣಿ ದುಷ್ಟಜನರ ಮಾಡಿದ್ಯೊ ನೀ ಮರ್ದನಿ ದೃಷ್ಟಿಸಿ ಮಾಡುವೆ ಸಾಧು ಸಂರಕ್ಷಣಿ ||೧|| ಹುಟ್ಟಿ ವಸುದೇವನಲ್ಲಿ ಬಂದು ಹೊಳೆದ್ಯೊ ದಿಟ್ಟತನದಲಿ ನಂದಗೋಕುಲದಲಿ ಬೆಳೆದ್ಯೊ ಮೆಟ್ಟಿ ವಿಷದ ಹಾವಿನ ಹೆಡೆಯ ತುಳಿದ್ಯೊ ಕುಟ್ಟಿ ಕಂಸಾಸುರನ ಪ್ರಾಣವಳಿದ್ಯೊ ||೨|| ಮೊಲಿಯನುಂಡು ಕೊಂದಿ ಪೂತನಿ ಪ್ರಾಣ ಕಾಲಿಲೊದ್ದು ಕೊಂದಿ ಶಕಟಾಸುರನ ಬಾಲತನದಲಿ ಕೆಡಹಿದ್ಯೊ ಮಾವನ ನೆಲೆಯು ತಿಳಿಯದು ಇನ್ನೊಬ್ಬರಿಗೆ ಪೂರ್ಣ ||೩|| ತುರುಗಳ ಕಾಯ್ದ್ಯೊ ನೀ ಗೋವಿಂದ ಬೆರಳಲೆತ್ತಿದ್ಯೊ ಗಿರಿಯ ಮುಕುಂದ ಮರುಳು ಮಾಡಿದ್ಯೊ ಗೋಪಿಕೆಯರ ವೃಂದ ಹರುಷಗೈಸಿದೆ ಅನೇಕ ಪರಿಯಿಂದ ||೪|| ಹಾಲುಬೆಣ್ಣೆ ಕದ್ದು ತಿಂಬುವ ನಿನ್ನಾಟ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂಥಾ ಮಗನೇ ನಿಮ್ಮ ಗೋಪೆಮ್ಮಾ

(ಪಹಾಡಿ (ಮಿಶ್ರ) ರಾಗ ಕೇರವಾ ತಾಳ) ಎಂಥಾ ಮಗನೇ ನಿಮ್ಮ ಗೋಪೆಮ್ಮಾ ||ಪ|| ಸವಿಸುಖ ಬಲ್ಲಿವ ನವನೀತ ಚೋರಾ ಎವಿ ಹಾಕುತ ಬಾಹ ಪರನಾರೀ ಜಾರಾ ||೧|| ಎಳೆವನು ಹಾದಿಯೊಳಗ ಸೆರಗಾ ಸುಳುಹು ಕಂಡಾರೆಂದರ ತಾ ತಿರಗಾ ||೨|| ಹಿಡಿದೇನಂದರ ಕೈಯೊಳು ಸಿಲುಕಾ ಮಾಡಿ ಮಾಡರಿಧಾಂಗ ಇವ ಬಲು ಠಕ್ಕಾ ||೩|| ಹೇಳಬೇಕಿನ್ನಾರಿಗೆ ಈ ದೂರಾ ತಿಳಿದುಕೊಳ್ಳಮ್ಮಾ ಮಗನ ವಿಚಾರಾ ||೪|| ಬಿಡ ಇವನೆಂದೂ ಪಿಡಿದವರ ಕೈಯ್ಯಾ ಬಿಡದೆ ಸಲಹುತಿಹ ಮೂಢ ಮಹಿಪತಿಯಾ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡೆ ಕಂಗಳಲೆನ್ನ ಮಂಗಳಾತ್ಮನ

(ಮಾಂಡ್ ರಾಗ ಕೇರವಾ ತಾಳ) ಕಂಡೆ ಕಂಗಳಲೆನ್ನ ಮಂಗಳಾತ್ಮನ ಮಂಗಳಾಂಗ ಶ್ರೀಗುರು ರಂಗನ ಕಂಡೆ ||ಧ್ರುವ|| ಬಾಲಲೀಲೆ ತೋರಿದ ನೀಲವರ್ಣನ ಕಂಡೆ ಪಾಲಗಡಲಲಿಹ ಗೋಪಾಲನ ಕಂಡೆ ಮೂಲರೂಪದಲಿ ಫಲ್ಗುಣಗೊಲಿದನ ಕಂಡೆ ಕುಲಕೋಟಿ ಬಂಧುವಾದ ಬಳಗನ ಕಂಡೆ ||೧|| ಕೊಳಲನೂದುವ ಮೂರ್ತಿ ನಳಿನನಾಭನ ಕಂಡೆ ಥಳಥಳಿಸುವ ಪದ ಹೊಳೆವನ ಕಂಡೆ ಕಳಲ ಮೊಸರ ಬೆಣ್ಣೆ ಮೆಲುವ ಚೆಲುವನ ಕಂಡೆ ಇಳೆಯೊಳು ಗೋಕುಲದಿ ಸುಳಿದನ ಕಂಡೆ ||೨| ಕಿರೀಟಕುಂಡಲಕರ್ಣ ಕೌಸ್ತುಭಧರನ ಕಂಡೆ ಪರಿಪರಿಭೂಷಣ ಸರ್ವಾಂಗನ ಕಂಡೆ ಗರುಡವಾಹನ ಸ್ವಾಮಿ ಉರಗಶಯನನ ಕಂಡೆ ಸಿರಿಯ ಲೋಲಲಿಹ ಸರ್ವೋತ್ತಮನ ಕಂಡೆ ||೩|| ವಿದುರವಂದಿತ ದೇವ ಮದನಮೋಹನ ಕಂಡೆ ಸಾಧುಹೃದಯ ಪ್ರಾಣ ಶ್ರೀಮಾಧವನ ಕಂಡೆ ಯದುಕುಲೋತ್ತಮ ಮಧುಸೂದನನ ಕಂಡೆ ಆದಿ ಅವಿನಾಶ ಶ್ರೀಧರನ ಕಂಡೆ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇವನೋಡಮ್ಮಾ ನವನೀತ ಚೋರಾ

(ಬಹಾರ್ ರಾಗ ತ್ರಿತಾಳ)

 

ಇವನೋಡಮ್ಮಾ ನವನೀತ ಚೋರಾ

ದೇವ ದೇವ ಮಾಮನೋಹರಾ ||ಪ||

 

ಗೋವನಿವ ಗೋಪಾಲ ಶ್ರೀಧರಾ

ಗೋವಿಸುವ ಈವ ದಾಮೋದರಾ

ಸಾವಿರ ನಾಮದೊಡೆಯಾ ಸಹಕಾರಾ

ಹಾವಿನ ಫಣಿ ಮೆಟ್ಟಿದ ವೀರಾ ||೧||

 

ಸಿರಿಯ ಲೋಲನಿವ ನಂದಕುಮಾರಾ

ಉರಗಶಯನ ಕೌಸ್ತುಭಧರಾ

ಪರಮಪುರುಷ ಹರಿಯೆ ಸುರವರಾ

ಮರುಳು ಮಾಡಿದವ ಗೊಲ್ಲತೇರಾ ||೨||

 

ಬೆಣ್ಣಿಮೊಸರು ಕದ್ದು ಒಯ್ವನಾ

ಕಣ್ಣಿಲೆ ಕಟ್ಟಬೇಕು ಇವನಾ

ಪುಣ್ಯ ಉಳ್ಳ ಯಶೋದೆ ಕಂದನಾ

ಬಣ್ಣಿಸೋ ಮಹಿಪತಿಯನುದಿನಾ ||೩||

ದಾಸ ಸಾಹಿತ್ಯ ಪ್ರಕಾರ
ಬರೆದವರು

ತಿಳಿದುಕೊಳ್ಳಿ ಖೂನ ಬಲ್ತು ನಿಜ ಜ್ಞಾನ

(ಸೋಹನಿ ರಾಗ ತೀನ್ ತಾಳ) ತಿಳಿದುಕೊಳ್ಳಿ ಖೂನ ಬಲ್ತು ನಿಜ ಜ್ಞಾನ ||ಧ್ರುವ|| ಹಾದಿ ಅದೆ ಹಿಂದೆ ಗಾದ ಅದೆ ಮುಂದೆ ಭೇದಿಸಿನ್ನು ತಿಳಿದುಕೊಳ್ಳಿ ಗುರುಕೃಪೆಯಿಂದೆ ||೧|| ಲಬ್ಧ ಅದೆ ಹಿಂದೆ ಶಬ್ದ ಅದೆ ಮುಂದೆ ಲುಬ್ಧವಾಗಿ ಕೇಳಿಕೊಳ್ಳಿ ಗುರುದಯದಿಂದೆ ||೨|| ಅರ್ಥ ಅದೆ ಹಿಂದೆ ಸ್ವಾರ್ಥ ಅದೆ ಮುಂದೆ ಅರ್ತು ಇದೇ ಕೇಳಿಕೊಳ್ಳಿ ಗುರುಪಾದಕೊಂದೆ ||೩|| ಗುಂಭ ಅದೆ ಹಿಂದೆ ಡಂಭ ಅದೆ ಮುಂದೆ ಇಂಬು ಇದೆ ತಿಳಿದುಕೊಳ್ಳಿ ಗುರುಜ್ಞಾನದಿಂದೆ ||೪|| ನೋಟ ಅದೆ ಮುಂದೆ ಕೂಟ ಅದೆ ಹಿಂದೆ ತನುವಿನೊಳು ಮಾಡಿಕೊಳ್ಳಿ ಖೂನ ನಿಜ ಒಂದೆ ||೫|| ದೇಹ ಅದೆ ಮುಂದೆ ನೋವು ಅದೆ ಹಿಂದೆ ಸೋಹ್ಯ (ಸೋಹಂ ) ದೋರಿಕೊಡುವ ಮಹಿಪತಿಗುರು ತಂದೆ ||೬||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡೆನು ಕೌತುಕವ ಏನೆಂದ್ಹೇಳಲಿ ಸೋಜಿಗವ

( ಭೈರವಿ ರಾಗ ದಾದರಾ ತಾಳ) ಕಂಡೆನು ಕೌತುಕವ ಏನೆಂದ್ಹೇಳಲಿ ಸೋಜಿಗವ ||ಧ್ರುವ || ಅಜ ನುಂಗಿತು ಗಜವ ವಾಜಿ ನುಂಗಿತು ಈ ಮೂಜಗವ ರಾಜ್ಯ ನುಂಗಿತು ಪ್ರಜರ ಸಂಜೀವ ನುಂಗಿತು ಸಂಜೀವ ||೧|| ಇಲಿಯು ನುಂಗಿತು ಮೊಲವ ಹಲ್ಲಿ ನುಂಗಿತು ಹಲವು ಕುಲವ ಜಲ ನುಂಗಿತು ಜಲವ ಹುಲಿ ನುಂಗಿತು ಈ ಮಾರ್ಬಲವ ||೨|| ಅರಿಯು ನುಂಗಿತು ಮರವ ನೊರಜ ನುಂಗಿತು ಗಿರಿಪರ್ವತವ ಇರಹು ನುಂಗಿತು ಸರ್ವ ಬೆರಗಾಯಿತು ಮಹಿಪತಿಜೀವ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಣಬಹುದಕೆ ಕನ್ನಡಿ ಯಾಕೆ

(ಭೈರವಿ ರಾಗ ದಾದರಾ ತಾಳ) ಕಾಣಬಹುದಕೆ ಕನ್ನಡಿ ಯಾಕೆ , ಭಿನ್ನವಿಲ್ಲದೆ ನೋಡಿ ತನ್ನೊಳು ಘನಬ್ರಹ್ಮವಿರಲಿಕ್ಕೆ ಅನುಮಾನವು ಬ್ಯಾಡಿ ||ಧ್ರುವ|| ಕುಂಭಿನಿಯೊಳು ಘನಹೊಳೆಯುತ ತುಂಬಿ ತುಳುಕುತಲ್ಯಾದೆ ಉಂಬವರಿಗಿದಿರಿಡುತ ಬಿಂಬಿಸುತಲ್ಯಾದೆ ಹಂಬಲಿಸಿದರೆ ತನ್ನೊಳಗೆ ತಾ ಗುಂಭಗುರುತವಾಗ್ಯಾದೆ ಡಿಂಬಿನೊಳಗೆ ನಿಜದೋರುತ ಇಂಬು ತಾನೆ ಆಗ್ಯಾದೆ ||೧|| ಹೇಳುವ ಮಾತಿನ ಮಾತಿಲ್ಲ ಕೇಳಿರಯ್ಯ ಚೆನ್ನಾಗಿ ಒಳಹೊರಗಿದು ಭಾಸುತಿಹುದೆಲ್ಲಾ ಸುಳುವು ಬಲ್ಲಾತ ಯೋಗಿ ಕಳೆಕಾಂತಿಗಳ ಅನುಭವವೆಲ್ಲಾನು ತಿಳಿಯಬಲ್ಲವ ಭೋಗಿ ಹೊಳೆವುತಿಹುದು ಸರ್ವಮಯವೆಲ್ಲಾ ಮೊಳೆಮಿಂಚು ತಾನಾಗಿ ||೨|| ಇಲ್ಲೆವೆ ಎರಡು ಹಾದಿಯ ಕಟ್ಟಿ , ಗುಲ್ಲುಮಾಡದೆ ನೋಡಿ ಮ್ಯಾಲಿಹ ಸ್ಥಾನಸ್ಥಾನವ ಮುಟ್ಟಿ ಮೂಲಸ್ಥಾನವ ಕೂಡಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೊಂಡಿರ್ಯಾ ನೀವು ಕೊಂಡಿರ್ಯಾ

(ಕಾಲಿಂಗಡಾ ರಾಗ ದೀಪಚಂದಿ ತಾಳ) ಕೊಂಡಿರ್ಯಾ ನೀವು ಕೊಂಡಿರ್ಯಾ ಮಂಡಲದೊಳು ವಸ್ತು ಕೊಂಡಿರ್ಯಾ ||ಧ್ರುವ|| ಕೊಳಬೇಕಾದರೆ ನೀವು ತಿಳಿದುಕೊಂಡು ಬನ್ನಿ ||೧|| ತಿಳಿಯದಿದ್ದರೆ ಖೂನ ಕೇಳಿ ಸದ್ಗುರುವಿನ ||೨|| ಬೆಲೆಯು ಹೇಳುವದಲ್ಲ ನೆಲೆಯು ತಿಳಿಯುವದಲ್ಲ ||೩|| ಅಳೆದು ಕೊಡುವುದಲ್ಲ ಕೊಳಗ ಎಣಿಸುವುದಲ್ಲ ||೪|| ತೂಕ ಮಾಡುವದಲ್ಲ ಲೆಕ್ಕ ಇಡುವುದಲ್ಲ ||೫|| ಇಟ್ಟು ಮಾರುವುದಲ್ಲ ಕೊಟ್ಟರ್ಹೋಗುವುದಲ್ಲ ||೬|| ಪಂಡಿತರಿಗೆ ಪ್ರಾಣ ಕೊಂಡವರಿಗೆ ತ್ರಾಣ ||೭|| ಹೇಳಿದೆ ನಾ ನಿಮಗೊಂದು ಸುಲಭವಾಗಿಂದು ||೮|| ಒಮ್ಮನವಾದರೆ ಸುಮ್ಮನೆ ಬಾಹುದು ||೯|| ಸಾಧು ಸಜ್ಜನರಿಗೆ ಸಾಧ್ಯವಾಗದಿದು ||೧೦||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೋಡಿ ನೋಡಿ ನಿಮ್ಮೊಳು ನಿಜ ಘನವ

(ಕಾಫಿ ರಾಗ ತೀನ್ ತಾಳ) ನೋಡಿ ನೋಡಿ ನಿಮ್ಮೊಳು ನಿಜ ಘನವ ||ಧ್ರುವ|| ಆಧಾರ ಧೃಡದಿಂದ ಆರು ಸ್ಥಳವ ಮುಟ್ಟಿ ಆದಿ ಅನಾದಿಯ ಪಥವ ನೋಡಿ ||೧|| ಭೂಚರ ಖೇಚರ ಜಲಚರ ಗೋಚರ ಅಲಕ್ಷ ಮುದ್ರೆಯ ಸ್ಥಾನ ನೋಡಿ ||೨|| ಪರಾಪಶ್ಯಂತಿಯ ಮಧ್ಯಮ ವೈಖರಿ ವೇದಾಂತಾಕರದ ಸಾರ ನೋಡಿ ||೩|| ಪಂಚತತ್ವದ ಗತಿ ಪಂಚಪ್ರಾಣದ ಸ್ಥಿತಿ ಪಂಚ ಕರುಣಾಕೃತಿ ಗತಿ ನೋಡಿ ||೪|| ಸ್ಥೂಲಸೂಕ್ಷ್ಮ ಕಾರಣ ಮಹಾಕಾರಣ ನೋಡಿ ಆನಂದಗತಿಯಲಿ ಬೆರೆದಾಡಿ ||೫|| ಅಕ್ಷರಕ್ಷರವು ಶಬ್ದನಿಶ್ಶಬ್ದವು ಶೂನ್ಯ ಮಹಾ- ಶೂನ್ಯ ನಿಶ್ಶೂನ್ಯ ನೋಡಿ ||೬|| ಮಹಿಪತಿ ಸ್ವಾಮಿ ಶ್ರೀಗುರು ಸರ್ವೋತ್ತಮನ ನೋಡಿ ಆನಂದಗತಿಯಲಿ ಬೆರೆದಾಡಿ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು