ಹುಚ್ಚು ಕುನ್ನಿ ಮನವೇ ನೀ

ಹುಚ್ಚು ಕುನ್ನಿ ಮನವೇ ನೀ

( ರಾಗ ಶಂಕರಾಭರಣ ಆದಿ ತಾಳ) ಹುಚ್ಚು ಕುನ್ನಿ ಮನವೇ ನೀ , ಹುಚ್ಚುಗೊಂಬುದು ಘನವೆ ಕಚ್ಚುಕದನತನವ ಬಿಟ್ಟು , ಅಚ್ಯುತನ ಪಾದ ಮುಟ್ಟು ||ಪ|| ಸ್ನಾನ ಮಾಡಿದರೇನು, ಸಂಧ್ಯಾನ ಮಾಡಿದರೇನು ಹೀನತನವ ಬಿಡಲಿಲ್ಲ ನೀ , ಸ್ವಾನುಭವವ ಕೂಡಲಿಲ್ಲ || ಜಪ ಮಾಡಿದರೇನು ನೀ, ತಪ ಮಾಡಿದರೇನು ಕಪಟ ಕಲ್ಮಷ ಕಳೆಯಲಿಲ್ಲ, ನಿಪುಣತನ ಪಡೆಯಲಿಲ್ಲ || ಮೂಗು ಪಿಡಿದರೇನು ನೀ , ಮುಸುಕನಿಕ್ಕಿದರೇನು ಭೋಗಿಶಯನನ ಭಜಿಸಲಿಲ್ಲ, ಬೇಗ ಪೂಜೆ ಮಾಡಲಿಲ್ಲ || ಗುರುವು ನೀನಾದರೇನು ಅತಿ-ಗರುವನಾದಡೇನು ಗುರುಮಹಿಮೆ ತಿಳಿಯಲಿಲ್ಲ ಗುರೂಪದೇಶವ ಪಡೆಯಲಿಲ್ಲ || ಹೋಮ ಮಾಡಿದರೇನು ನೀ, ನೇಮ ಮಾಡಿದರೇನು ರಾಮನಾಮ ಸ್ಮರಿಸಲಿಲ್ಲ, ರಾ(/ಧಾ?)ಮಪಥವ ಹಿಡಿಯಲಿಲ್ಲ || ನವರಂಧ್ರಗಳ ಕಟ್ಟು ನೀ, ನಡೆವ ದಾರಿ ಮುಟ್ಟು ಕವಿದ ಕಾಮ ಕ್ರೋಧಗಳಟ್ಟು, ರವಿಮಂಡಲ ಮುಟ್ಟು || ಏನು ಮಾಡಿದರೇನು ನೀ-ನೆಂತು ಮಾಡಿದರೇನು ಜ್ಞಾನದಿಂದ ಪುರಂದರವಿಠಲನ, ಧ್ಯಾನಿಸಲಿಲ್ಲ ಮನವೆ || ( ಎರಡನೇ ಸಾಲಿನಲ್ಲಿರುವ 'ಕಚ್ಚುಕದನತನ' ಮೋಗ್ಲಿಂಗ್ ಸಂಪಾದಿಸಿದ ದಾಸರ ಕೀರ್ತನೆಗಳ ಸಂಗ್ರಹದಲ್ಲಿದೆ . ನಂತರ ಬಂದ ಸಂಗ್ರಹಕಾರರು ಅದನ್ನು ತಪ್ಪಾಗಿ ಕಚ್ಚುಕದತನ ಎಂದು ಗುರುತಿಸಿ , ಚಾಂಚಲ್ಯ ಎಂಬ ಅರ್ಥವನ್ನು ಕೊಟ್ಟಿದ್ದಾರಂತೆ. ಕಚ್ಚುಕದತನ , ಕದತನ ಎಂಬ ಶಬ್ದಗಳು ಕನ್ನಡ ಭಾಷಾಪರಂಪರೆಯಲ್ಲೇ ಇಲ್ಲ ಎನ್ನಲಾಗಿದೆ )
ದಾಸ ಸಾಹಿತ್ಯ ಪ್ರಕಾರ
ಬರೆದವರು