ಸ್ವಾಮಿ ವೇಂಕಟರಮಣ ಭೂಮಿಪಾಲಕ ದೇವ

ಸ್ವಾಮಿ ವೇಂಕಟರಮಣ ಭೂಮಿಪಾಲಕ ದೇವ

( ಶಂಕರಾಭರಣ ರಾಗ ಆದಿತಾಳ)

 

ಸ್ವಾಮಿ ವೇಂಕಟರಮಣ ಭೂಮಿಪಾಲಕ ದೇವ

ಕಾಮಿತಾರ್ಥವನೀವ ಕರುಣ ಸಂಜೀವ ||ಪ||

 

ಸುರರು ಅಸುರರೆಲ್ಲ ಶರಧಿಯ ಮಥಿಸಲು

ಸಿರಿಯು ಜನಿಸಿ ಬಂದು ಹರಿಯ ಸೇರಿದಳು ||೧||

 

ಪತಿ ನೀನೆ ಗತಿಯೆಂದು ಸತಿ ಕುಸುಮಮಾಲೆಯನು

ಅತಿ ಹರುಷದಿ ಜಗತ್ಪತಿಗೆ ಇಕ್ಕಿದಳು ||೨||

 

ವಾರಿಧಿಯಾಕ್ಷಣ ಧಾರೆಯನೆರೆಯಲು

ವಾರಿಜಾಂಬಕಲಕ್ಷ್ಮಿ ಒಡನೆ ನಿಂದಿರಲು ||೩||

 

ಫಣ್ಫಿಹ್ತ್ರಸೆಮೆಣೆಯೊಳು ರಮಣಿಯನೊಡಗೊಂಡು

ಗುಣನಿಧಿಯ ಒಪ್ಪಿರಲು ತರುಣಿಯರೆಲ್ಲ ||೪||

 

ಪಚ್ಚವ ಧರಿಸಿ ನವ ಸ್ವಚ್ಛವಾಗಿಯೆ ತುಳಿದು

ಅಚ್ಯುತ ಮಹಾಲಕ್ಷ್ಮಿಗ್ಹಚ್ಚಬೇಕೆನುತ ||೫||

 

ಸಣ್ಣ ಮಲ್ಲಿಗೆ ಎಣ್ಣೆ ಬಣ್ಣವಾದರಿಸಿನವ

ಪುಣ್ಯವಂತೆಗೆ ಕೈಗರ್ಣವ ಕೊದಲು ||೬||

 

ಮೊದಲು ಪಾದವ ತೊಳೆದು ಜಲವನ್ನು ಸಿರಿ ತನ್ನ

ತಲೆಗೆ ಪ್ರೋಕ್ಷಿಸಿಕೊಳಲು ಹರಿಯು ಮೆಚ್ಚಿದನು ||೭||

 

ಗಟ್ಟಿಯಾದರಿಸಿನವ ಬಟ್ಟಲೆಣ್ಣೆಯಗೂಡಿ

ಮುಟ್ಟಲಂಜಿಯೆ ನಿಲಲು ಸೃಷ್ಟಿಪಾಲಕನ ||೮||

 

ಅಂಗೈಯ ಅರಿಸಿಣವ ಮುಂಗೈಗೆ ಒರೆಸುತ್ತ

ರಂಗನ ಸಿರಿಮೊಗವ ಕಂಗಳಿಂದೀಕ್ಷಿಸುತ ||೯||

 

ಅಭಯ ಹಸ್ತವನಿತ್ತ ತ್ರಿಭುವನದೊಡೆಯನು

ಅಬುಜಲೋಚನೆ ಮುಖಾಂಬುಜಕೆ ತಿಮುರಿದಳು ||೧೦||

 

ಅತಿಹರುಷವ ತಾಳಿ ಸತಿ ಕೈಯ ಅರಿಷಿಣವ

ಪತಿ ಆದಿಕೇಶವನ ನುತಿಸಿ ಊರಿದಳು ||೧೧||

 

ಸಿರಿಯನೆತ್ತಿದ ಕೈಯ ಹರಿ ತಾನು ತೋರಿಸಲು

ಸಿರಿ ನಾರಾಯಣ ಎಂದು ಅರಿಷಿಣವ ತಿಮುರೆ ||೧೨||

 

ಶಂಖವ ಧರಿಸಿದ ಪಂಕಜಾಕ್ಷನೆ ವಿಷ್ಣು

ವೇಂಕಟೇಶನ ಕರಪಂಕಜಕೆ ತಿಮುರೆ ||೧೩||

 

ಕದನದೊಳ್ ಖಳರನು ಸದೆದು ಮರ್ದಿಸಿ ಗೆಲಿದು

ಮಧುಸೂಧನ ಶ್ರೀ ವತ್ಸದೆದೆಯ ತೋರೆನುತ ||೧೪||

 

ಚಕ್ರವ ಪಿಡಿದು ಪರಾಕ್ರಮಿಯೆನಿಸಿಯೇ

ಅಕ್ರೂರಗೊಲಿದ ತ್ರಿವಿಕ್ರಮಗೆ ತಿಮುರೆ ||೧೫||

 

ವಾಮನನಾಗೆ ಶ್ರಮವನು ಪಟ್ಟೆ(ಎ)ನುತ

ಭೂಮಿಯ ಅಳೆದ ಪಾದವಿತ್ತನು ತಾರೆನುತ ||೧೬||

 

ಕಾದಲನು ಕಾಣುತ್ತ ಪಾದವನಿತ್ತನು

ಶ್ರೀಧರನೆನುತಲಿ ಅರಸಿನವ ತಿಮುರೆ ||೧೭||

 

ವಾಮಪಾದವ ಕಂಡು ಭಾಮಿನಿ ತಾರೆನಲು

ಸೋಮಸನ್ನಿಭ ಹೃಷಿಕೇಶ ತಾನಿತ್ತ ||೧೮||

 

ಪದ್ಮ ಬಾಂಧವ ತೇಜ ಸಂಭವ ಪೂಜ

ಪದ್ಮನಾಭಗೆ ಪದ್ಮಗಂಧಿ ತಾ ತಿಮುರೆ ||೧೯||

 

ಆ ಮಹಾನಾಮದ ದಾಮೋದರನ ಕಂಡು

ಭಾವೆ ಲಕ್ಷುಮಿ ವೀಳ್ಯವ ಕೊಡಲು ||೨೦||

 

ವಾಸುದೇವನು ತನ್ನ ಅರಸಿ ಮಾಲಕ್ಷ್ಮಿಗೆ

ಪೂಸಿದನರಿಸಿನವ ಎಣ್ಣೆಯ ಮೊಗಕೆ ||೨೧||

 

ಪಂಕಜಾಕ್ಷನ ಕಂಡು ಕಂಕಣದ ಹಸ್ತವ ನೋಡಿ

ಕುಂಕುಮದೆಣ್ಣೆಯ ಸಂಕರ್ಷಣ ತಿಮುರೆ||೨೨||

 

ಬುದ್ಧಿವಂತೆಯ ಎಡದ ಮುದ್ದು ಹಸ್ತವ ನೋಡಿ

ಉದ್ಧರಿಸಿ ನವ ಪ್ರದ್ಯುಮ್ನ ನಗುತ ||೨೩||

 

ಮುನಿಜನ ವಂದ್ಯನು ಅನಿರುದ್ಧ ನಗುತಲೆ

ಘನಕುಚಮಂಡಲಕೆ ಅರಿಸಿನವ ತಿಮುರೆ ||೨೪||

 

ಪುರುಷರೊಳು ಉತ್ತಮನು ಹರುಷವನು ತಾಳಿಯೆ

ಅರಸಿ ಮಹಾಲಕ್ಷುಮಿಗೆ ಅರಿಸಿನವ ತಿಮುರೆ ||೨೫||

 

ಅಧೋಕ್ಷಜನು ತನ್ನ ತುದಿವೆರಳ ಅರಿಸಿನವ

ಪದುಮನೇತ್ರೆಯ ಪದದೊಳಗೆ ಮಿಡಿದಿರ್ದ ||೨೬||

 

ನಾರಸಿಂಹನು ಸತಿಯ ಮೋರೆಯಿಂದಾರಭ್ಯ

ಓರಣವಾಗಿಯೆ ಅರಿಸಿನವ ತಿಮುರೆ ||೨೭||

 

ನೆಚ್ಚಿಯೆ ಹರಿ ತಾನು ಅಚ್ಚಕರ್ಪುರದೆಲೆಯ

ಆಶ್ಚರ್ಯವಾಗಿಯೆ ಅಚ್ಯುತ ಕೊಡಲು ||೨೮||

 

ಮನದಿ ಲಜ್ಜಿತೆಯಾಗಿ ಘನಮಹಿಮ ಮುನಿವಂದ್ಯ

ತನಗೆ ವಲ್ಲಭ ನಿಜನಾದನೆನುತ ||೨೯||

 

ಆ ಪರಮಹಿಮನು ರೂಪಸಂಪನ್ನ ದ-

ಯಾಪರನಾಗಿಯೆ ಉಪೇಂದ್ರ ತಾನೊಲಿದು ||೩೦||

 

ಹರ ಎಂಬ ನಾಮದಿ ಹರದಿ ಮಾಲಕ್ಷ್ಮಿಯ

ವರಿಸಿದ ಶ್ರೀಹರಿಯು ಹರದಿಯರ್ಪೊಗಳೆ ||೩೧||

 

ಬೆಟ್ಟದೊಡೆಯನೆನಿಸಿ ದೃಷ್ಟಿಗೋಚರವಾದ

ಶ್ರೀಕೃಷ್ಣ ಮಾಲಕ್ಷುಮಿಗೆ ಆರತಿಯ ತಿಮುರೆ ||೩೨||

 

ವರಮಹಾಲಕ್ಷುಮಿಗೆ ವರಾಹ ತಿಮ್ಮಪ್ಪಗೆ

ಅರಸಿನದೆಣ್ಣೆಯ ರಚಿಸಿದ ಪರಿಯು ||೩೩||

 

---ರಚನೆ- ನೆಕ್ಕರ ಕೃಷ್ಣದಾಸರು

ದಾಸ ಸಾಹಿತ್ಯ ಪ್ರಕಾರ
ಬರೆದವರು