ಸ್ಮಾರ್ತರು ನಾಮವ ಧರಿಸಿ ಯಥಾರ್ಥವು

ಸ್ಮಾರ್ತರು ನಾಮವ ಧರಿಸಿ ಯಥಾರ್ಥವು

(ರಾಗ :ಮುಖಾರಿ ಅಷ್ಟತಾಳ ) ಸ್ಮಾರ್ತರು ನಾಮವ ಧರಿಸಿ ಯಥಾರ್ಥವು ಹರಿನಾಮವ ಬಹಳ ವಿಸ್ತರಿಸಿ ||ಪ|| ಕಣ್ಣಿಗೆ ಕಾಣದೆ ಪೂರ್ಣವಾಗಿಹ ನಾಮ ಚನ್ನಕೇಶವ ರಾಯನೆಂದೆಂಬ ನಾಮ ಉನ್ನತವಾಗಿಹ ನಾರಾಯಣ ನಾಮ ಮನ್ಮಥನಯ್ಯನು ಮಾಧವ ನಾಮವ ||೧|| ಅಂತರಂಗದಿ ಗೋವಿಂದನ ನಾಮವ ಚಿಂತಿಸಿ ವಿಷ್ಣುವ ಸಿರಿನಾಮವ ಸಂತತ ಮಧುಸೂಧನನೆಂಬ ನಾಮವ ಪಂಥವಿಡಿದು ತ್ರಿವಿಕ್ರಮ ನಾಮವ ||೨|| ಮನದೊಳು ಅನುದಿನ ವಾಮನನಾಮವ ವನಜಾಕ್ಷ ಶ್ರೀಧರಗುಣ ನಾಮವ ವಿನಯದಿ ಹೃಷಿಕೇಶನೆನುತಿಹ ನಾಮವ ತನುವಾದ ಪದುಮನಾಭನ ನಾಮವ ||೩|| ಅಂದದೊಳು ಧರಿಸಿರುವ ದಾಮೋದರ ನಾಮ ಚಂದದಿ ವಾಸುದೇವನ ನಾಮವ ಕುಂದದೆ ಸಂಕರ್ಷಣನೆಂಬ ನಾಮವ ಬಂಧನ ಪರಿಹಾರ ಪ್ರದ್ಯುಮ್ನ ನಾಮವ ||೪|| ಅರ್ಥಿಯಿಂದಲೆ ಅನಿರುದ್ಧನ ನಾಮವ ಉತ್ತಮ ಪುರುಷೋತ್ತಮ ನಾಮವ ಭಕ್ತಿಯಿಂದಲೆ ಅಧೋಕ್ಷಜನೆಂಬ ನಾಮವ ಮೃತ್ಯುವು ಕಾಣದ ನರಹರಿ ನಾಮವ ||೫|| ಆಶ್ಚರ್ಯವಾಗಿಹ ಅಚ್ಯುತನಾಮವ ನಿಶ್ಚಯಿಸಿ ಜನಾರ್ಧನನಾಮವ ಬಚ್ಚಿಡಬೇಡ ಉಪೇಂದ್ರನ ನಾಮವ ಹಚ್ಚಿರೊ ಹರಿಯೆಂಬ ಸಿರಿನಾಮವ ||೬|| ದುಷ್ಟನಿಗ್ರಹವಾದ ಕೃಷ್ಣನ ನಾಮವ ಬೆಟ್ಟದ ವರಾಹತಿಮ್ಮಪ್ಪನ ನಾಮವ ಇಟ್ಟುಕೊಂಡರೆ ಅನುದಿನ ಘನನಾಮವ ಸೃಷ್ಟಿಯೊಳು ಉತ್ತಮ ಸ್ಮಾರ್ತನೆ ವೈಷ್ಣವ ||೭|| ---ರಚನೆ- ನೆಕ್ಕರ ಕೃಷ್ಣದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು