ಸಾಕು ಸಂಸಾರ ತೆರೆಯ ನೂಕಲಾರೆನು

ಸಾಕು ಸಂಸಾರ ತೆರೆಯ ನೂಕಲಾರೆನು

( ರಾಗ ಹಿಂದುಸ್ತಾನ್ ದೇಶಿ ರೂಪಕತಾಳ) ಸಾಕು ಸಂಸಾರ ತೆರೆಯ ನೂಕಲಾರೆನು ಬೇಕು ನಿನ್ನ ಚರಣಕಮಲ ಬೇರನ್ಯತ್ರ ಗತಿಯ ಕಾಣೆ ||ಪ|| ಹುಟ್ಟಿದಂದಿನಿಂದ ಕಷ್ಟಪಟ್ಟು ಕಂಗೆಟ್ಟು ಮನದಿ ಗುಟ್ಟು ಪೇಳ್ವೆನಯ್ಯ ಒಂದಿಷ್ಟು ಲಾಲಿಸೊ ಕೊಟ್ಟ ಕಳತ ಕಣ್ಣ ನೆಲಕೆ ತಟ್ಟಿದಲ್ಲದೆ ಬಿಡದು ಮೊರೆ- ಯಿಟ್ಟೆ ಕಾಯದಿರೆ ದೂರು ಮುಟ್ಟುವುದು ಶ್ರೀ ಲಕ್ಷ್ಮೀರಮಣ || ತಂದೆ ತಾಯಿ ಬಂಧು ಬಳಗವೆಂದು ಪಾಶಕ್ಕೆ ಸಿಲ್ಕಿ ಒಂದು ದಿನದ ದಿನದ ಸುಖವನು ಬಂದು ಕಾಣೆನೊ ಕಂದರ್ಪಜನಕ ನೀನು ಕರುಣವಿಟ್ಟು ಕಾಯದಿರೆ ಕುಂದು ನಿಂದೆ ಬಂದರೆ ದೂರು, ತಂದು ಕೊಡುವರು ಲಕ್ಷ್ಮೀರಮಣ || ತುಂಡು ತುತ್ತು ಕೂಳಿಗಾಗಿ ಕಂಡವರ ಕಾಡಿ ಬೇಡಿ ಹಿಂಡಿ ಹಿಪ್ಪೆ ಮಾಡಿ ಮನವ ಹೀನಗೊಳಿಸಿದೆ ಉಂಡು ಬಾರದ ಊಟವನ್ನು ಕಾಣಬಾರದ ಕರ್ಮವನ್ನು ಗುಂಡೆಗಾರರ ಕೇರಿಗೆ ಸಿಕ್ಕಿ ಚೆಂಡಿಗಿಂತ ಹಗುರವಾದೆ || ವಾಸಿಬಂಧನಾಗಿ ಎನ್ನ ಭಾಷೆಯನ್ನು ಜನರು ನೋಡಿ ಆಶೆ ಮಾಡಿಕೊಂಡರೆ ನಿರಾಶೆಯಾಯಿತೊ ಮೋಸದಿಂದ ಮಡುವ ಧುಮುಕಿ ಈಸಲಾರೆ ಮುಳುಗಿ ಮುಳುಗಿ ಘಾಸಿಯಾಗುತೇನೆ ಕೇಳು ವಾಸುದೇವ ಸುಪ್ರಸನ್ನ || ಇಷ್ಟು ದಿನದಿ ಜನರ ಕೈಯ ನಿಷ್ಠುರಾದ ಮಾತ ಕೇಳಿ ಕಷ್ಟಕಾಲ ಬಂತು ಘಳಿಗೆ ಕಳೆಯಲಾರೆನು ಇಷ್ಟರ ಮೇಲಿನ್ನು ಮನಸು ಎರಕವಿಲ್ಲದೆ ಕೇಳು ಇಷ್ಟ ನೀನಹುದು ಪುರಂದರವಿಟ್ಠಲ ನೀನಲ್ಲದಿಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು