ಯಾಕೆ ನಿರ್ದಯನಾದೆ

ಯಾಕೆ ನಿರ್ದಯನಾದೆ

( ರಾಗ ಕಾಂಭೋಜ ಝಂಪೆತಾಳ) ಯಾಕೆ ನಿರ್ದಯನಾದೆ ಎಲೊ ದೇವನೆ ||ಪ|| ಶ್ರೀಕಾಂತ ಎನ ಮೇಲೆ ಎಳ್ಳಷ್ಟು ದಯವಿಲ್ಲ ||ಅ|| ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು ಹಿಂಗದೆ ಪ್ರಹ್ಲಾದನಪ್ಪಿಕೊಂಡೆ ಮಂಗಳಪದವಿತ್ತು ಮನ್ನಿಸಿದೆ ಅವ ನಿನಗೆ ಭಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ || ಸಿರಿದೇವಿಗ್ಹೇಳದೆ ಸೆರಗು ಸಂವರಿಸದೆ ಗರುಡನ ಮೇಲೆ ಗಮನವಾಗದೆ ಭರದಿಂದ ನೀ ಬಂದು ಕರಿಯನುದ್ಧರಿಸಿದೆ ಕರಿರಾಜ ಎಷ್ಟು ಕನಕವ ಕೊಟ್ಟ ಹರಿಯೆ || ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೇ ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೆ ಭಜನೆಗವರೇ ಹಿತರೆ ನಾ ನಿನಗೆ ಅನ್ಯನೇ ತ್ರಿಜಗಪತಿ ಸಲಹೆನ್ನ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು