ಯಾಕೆನ್ನ ಎಬ್ಬಿಸಿದೆ

ಯಾಕೆನ್ನ ಎಬ್ಬಿಸಿದೆ

(ರಾಗ ಭೂಪಾಳಿ ಝಂಪೆತಾಳ) ಯಾಕೆನ್ನ ಎಬ್ಬಿಸಿದೆ ಶ್ರೀಹರಿಯ ಸೇವೆ ಧ್ಯಾನದ ಒಳಗಿದ್ದೆನೆ ||ಪ|| ಉದಯಕಾಲಕೆ ಎದ್ದು , ನದಿಯ ತೀರಕೆ ಹೋಗಿ ಮೃತ್ತಿಕೆ ಶೌಚದಿಂದ ಮಲಮೂತ್ರ ಆತ್ಮ ಶುದ್ಧಿಗಳ ಮಾಡಿ ನದಿಯಲಿ ನಿಂತು ಸ್ತೋತ್ರಂಗಳನೆ ಮಾಡಿ ತೀರ್ಥಾಭಿಮಾನಿ ಪ್ರಾರ್ಥನಂಗಳನೆ ಮಾಡಿ ಸ್ನಾನ ಸಂಧ್ಯಾನ ಜಪತಪಂಗಳನೆ ಮಾಡಿ ಶ್ರೀಹರಿಯ ಧ್ಯಾನದಲಿ ನಾ ಮನೆಗೆ ಬರುತಲಿದ್ದೆ || ಆಕಳ ಸೆಗಣಿಯಲಿ ಭಾಗೀರಥಿ ಉದಕದಲಿ ದೇವರ ಜಗುಲಿಯನು ಸಾರಿಸಿ ನಾನು ಕಾರಣೆಗಳನು ತೆಗೆದು ಶಂಖಚಕ್ರ ಸ್ವಸ್ತಿಕ ಪದ್ಮದಿಂದ ಬಗೆಬಗೆ ಬೃಂದಾವನ ರಂಗವಲಿಯನಿಟ್ಟು ಶ್ರೀಹರಿಯ ವಂದಿಸಿ ನಾನು ಕೈಯ ಮುಗಿಯುತಲಿದ್ದೆ || ಸುವರ್ಣದ ಮಣೆ ಕುಂದಣದ ಕೀಲು ಬೆಳ್ಳಿಪೀಠದ ಮಣೆಗಳು ಭಂಗಾರದ ರಾಜವರ್ಣದ ಮಣೆಗಳು ಈ ಪರಿ ಮಣೆಗಳ ತಾರತಾರಕೆ ಇಟ್ಟು ಶ್ರೀಹರಿಗೆ ವಂದಿಸಿ ನಾನು ಕೈಯ ಮುಗಿಯುತಲಿದ್ದೆ || ಸುವರ್ಣವಾದ ಛತ್ರಿಯ ಮಂಟಪ , ಬೆಳ್ಳಿಚೂಡದ ಮಂಟಪ ಭಂಗಾರದ ರಾಜವರ್ಣದ ಮಂಟಪ ಕಂಭವ ನಿಲಿಸಿ ಸಂದು ಸಂದು ಬೋದಿಗೆ ದುಂಡು ಮುತ್ತಿನ ಕುಚ್ಚು ನಾನಿಡುತಲಿದ್ದೆ || ಸೂರ್ಯಪೀಠದ ಮುಖ, ಮೇಲೆ ಹಾಸಿಗೆಗಳು ರತ್ನದ ಹುವ್ವುಗಳೆ ಬುಟ್ಟಿದಾರಿ ಜರತಾರಿ ಹುವ್ವುಗಳೆ ಎಡೆಗೆಡೆಗೆ ಬೋದಿಗ್ಗೆ ಬಿಗಿದು ಮುತ್ತಿನ ಸುತ್ತಿ ಜಗದೊಡೆಯನಾದಗೆ ಅಣಿಮಾಡುತಲಿದ್ದೆ || ಕಂಚು ಹಿತ್ತಾಳೆ ಸುವರ್ಣದಮಯ ಕುಂದಣದ ಕೀಲು ಸಾಲುದೀವಿಗೆಗಳೆ ಸಾಲುದೀವಿಗೆ ಕಟ್ಟು ದೀವಿಗೆಗಳ ಹಚ್ಚಿಟ್ಟು ತುಪ್ಪದ ದೀವಿಗೆಯೆ ಬಗೆಬಗೆ ತುಂಬಿಟ್ಟ ಹಲಿಗಾರತಿ ಸಾಲುದೀವಿಗೆಯನ್ನು ಲಕ್ಷದೀವಿಗೆಯನ್ನು ವಿಷ್ಣುಮೂರುತಿಗೆ ನಾ ಕೈಯ ಮುಗಿಯುತಲಿದ್ದೆ || ಉತ್ತಮವಾಗೋದು ಮೊದಲೆತ್ತೋದು ಧೂಪಾರತಿ ಒಡನೇ ಏಕಾರತಿಯೇ ಪಂಚವರ್ಣದಾರತಿ ಕರ್ಪೂರದಾರತಿ ಶ್ರೀಹರಿಗೆ ಅರ್ಪಿಸಿ ನಾನು ಕೈಯ ಮುಗಿಯುತಲಿದ್ದೆ || ಮಂಡಲಂಗಳ ಮಾಡಿ ರಂಗವಲ್ಲಿಯ ಹಾಕಿ ಹಂಡಾಹಂಡದಲಿಯಿಳಿವಿ ಭೂಮಂಡಲಾಧಿಪತಿ ನಿನಗೆ ಅರ್ಪಿತವೆಂದು ತಂದು ನೈವೇದ್ಯಿಟ್ಟು ಶ್ರೀಹರಿಗೆ ಅರ್ಪಿಸುತಲಿದ್ದೆ || ಅರವತ್ತು ಜಿನಸಿನ ಪರಿಪರಿ ಶಾಕಗಳು ಕರಿದು ಸಾತಾಳಿಸಿದ ಬಗೆಬಗೆ ಲವಣಶಾಕಗಳು ಈ ಪರಿಯಿಂದಲಿ ಎಡೆಗಳನೆ ಮಾಡಿ ತಂದು ನೈವೇದ್ಯಿಟ್ಟು ಶ್ರೀಹರಿಗೆ ಅರ್ಪಿಸುತಲಿದ್ದೆ || ಐದು ಜಿನಸಿನ ಪರಮಾನ್ನವ ಮಾಡಿ ಸಣ್ಣಕ್ಕಿ ಶಾಲ್ಯನ್ನ ಚಿತ್ರಾನ್ನ ದಧ್ಯನ್ನ ಮೊಸರುಅನ್ನ ಮೊಸರು ಅನ್ನವ ಮಾಡಿ ಮಧುರೆಯ ಕೃಷ್ಣ ನಿನಗೆ ಅರ್ಪಿತವೆಂದೆ || ಕರಿ ಆಕಳ ಹಾಲು ಕೆನೆಮೊಸರುಗಳು ನೊರೆಹಾಲು ಘೃತಗಳನು ಸಕ್ಕರೆ ಬೆರೆಸಿದ ನೊರೆಹಾಲುಗಳನೆ ತಂದು ಉಡುಪಿಯ ಕೃಷ್ಣ ನಿನಗೆ ಅರ್ಪಿತವೆಂದೆ || ಅಷ್ಟಭೋಗದ ಅಡಿಕೆ ಕರ್ಪೂರದ ವೀಳ್ಯ ಹೆಚ್ಚಿನ ಬಿಡಿಎಲೆಯೇ ಸುಣ್ಣ ಸಹಿತವಾದ ಲವಂಗವು ಏಲಕ್ಕಿ ಶ್ರೀ ಹರಿಗೆ ಅರ್ಪಿಸಿ ನಾನು ಕೈಯ ಮುಗಿಯುತಲಿದ್ದೆ || ಉತ್ತಮದ ರಾಮ, ಅಯೋಧ್ಯೆಯ ರಾಮ ಪಟ್ಟಾಭಿರಾಮನೆ ಸೀತಾಪತಿ ಜಾನಕೀಮನೋಹರ ಹಾಸಿಗೆಯನು ಹಾಕಿ ಅಣಿಮಾಡುತಲಿದ್ದೆ || ಬೆಣ್ಣೆಕಳ್ಳನು ಕೃಷ್ಣ ,ಚಿನ್ನಮಾಯದ ಕೃಷ್ಣ ವದನ ತೋರಿದ ಕೃಷ್ಣನೇ ರುಕ್ಮಿಣೀವಲ್ಲಭ ಜಾನಕೀಮನೋಹರ ಇಂದು ಶ್ರೀಕೃಷ್ಣಗೆ ಕೈಯ ಮುಗಿಯುತಲಿದ್ದೆ || ಪ್ರಳಯಕಾಲದಲ್ಲಿ ಆಲದೆಲೆಯ ಮೇಲೆ ಚತುರ್ಮುಖ ಪರಬ್ರಹ್ಮನೇ ಮಲಗಿಹ ವಿರಾಟರೂಪನಾಗಿ ಈರೇಳು ಭುವನದ ಉದರದಲ್ಲಿ ಇಟ್ಟ ಪುರಂದರವಿಠಲನ್ನ ಧ್ಯಾನದೊಳಗೆ ಇದ್ದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು