ಮಲವ ತೊಳೆಯಬಲ್ಲರಲ್ಲದೆ

ಮಲವ ತೊಳೆಯಬಲ್ಲರಲ್ಲದೆ

(ರಾಗ ಕಾಪಿ. ಏಕ ತಾಳ) ಮಲವ ತೊಳೆಯಬಲ್ಲರಲ್ಲದೆ ಮನವ ತೊಳೆಯಬಲ್ಲರೆ ||ಪ|| ಹಲವು ತೀರ್ಥಂಗಳಲಿ ಮುಳುಗಿ ಹಲುಬಿದರೆ ಫಲವೇನು ||ಅ.ಪ|| ಭೋಗ ವಿಷಯ ಫಲವನುಂಡು ರಾಗ ಲೋಭದಿಂದ ಮತ್ತ- ನಾಗಿ ಮೆರೆಯುತಿರೆ ಅವನ ಭಾಗ್ಯವಂತನೆಂಬರೆ ಯೋಗಿಯಂತೆ ಜನರು ಮೆಚ್ಚೋ ಹಾಗೆ ಹೋಗಿ ನೀರಿನಲ್ಲಿ ಕಾಗೆಯಂತೆ ಮುಳುಗೆ ಮಾಘಸ್ನಾನ ಫಲವು ಬಾಹೊದೆ || ಪರರ ಕೇಡ ಬಯಸಿ ಗುರು ಹರಿಯರನ್ನು ನಿಂದಿಸುತ್ತ ಪರಮಸೌಖ್ಯವೆಂದು ಪರಸ್ತ್ರೀಯರನ್ನು ಬಯಸುತ ಪರಮನಿಷ್ಠ ಮೌನಿಯಂತೆ ಧರೆಯ ಮೇಲೆ ಡಂಭ ತೋರಿ ಹರಿವ ನೀರಿನ ತೀರದಿ ಕುಳಿತರೇನು ಬಕಧ್ಯಾನದಿ || ಕಾಸು ವೀಸಕಾಗಿ ಹರಿಯ ದಾಸನೆಂದು ತಿರುಗಿ ತಿರುಗಿ ದೇಶ ದೇಶಗಳಲಿ ತೊಳಲಿ ಕಾಶಿಯಾತ್ರೆ ಪೋಗಲು ಆಸೆಪಾಶ ಬಿಡದೆ ಮನಸ ಹೇಸಿ ವಿಷಯ ಬಯಸುವಂಥ ವೇಷಧಾರಿಗಳಿಗೆ ಕಾಶೀ ಯಾತ್ರೆ ಫಲವು ಬಾಹೊದೆ || ತಂದೆ ತಾಯಿ ತಿರಿದು ತಿನಲು ಒಂದು ದಿನ ಕೇಳಲಿಲ್ಲ ಮಂದಗಮನೆರೊಡನೆ ಆನಂದದಿಂದಲಿರುವರು ತಂದೆ ಸತ್ತ ಮೇಲೆ ನೂರು ಮಂದಿ ವಿಪ್ರರಿಗುಣಿಸಿ ತಮ್ಮ ತಂದೆ ತೃಪ್ತನಾದನೆಂಬರು ಮಂದ ಮತಿಯ ಜನಗಳು || ಏನು ಓದಲೇನು ಫಲ ಏನು ಕೇಳಲೇನು ಫಲ ಜ್ಞಾನದಿಂದ ಅಚ್ಯುತನ ಧ್ಯಾನವಿಲ್ಲದವರಿಗೆ ಮೌನ ನೇಮ ನಿಷ್ಠೆ ಏಕೇ ಹೀನ ಚಿತ್ತನಾದ ಮೇಲೆ ಶ್ರೀನಿವಾಸ ಪುರಂದರ ವಿಠಲನು ಮೆಚ್ಚುವನೆ ಮರುಳೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು