ಮರೆಯದಿರು ಶ್ರೀಹರಿಯ

ಮರೆಯದಿರು ಶ್ರೀಹರಿಯ

(ರಾಗ ಉದಯರಾಗ ಝಂಪೆ ತಾಳ ) ಮರೆಯದಿರು ಶ್ರೀಹರಿಯ ||ಪ|| ಮರೆಯದಿರು ಶ್ರೀಹರಿಯ ಮರಣಾತುರದಿ ಮಗನ ಕರೆದವಗೆ ಸಾಲೋಕ್ಯವಿತ್ತ ನಾರಾಯಣನ ಸ್ಮರಣೆಯನು ಮಾಡುವರ ಚರಣಸೇವಕರಿಗೆ ನೆರೆ ಸಾಯುಜ್ಯಪದವೀವನಯ್ಯ ಅಯ್ಯ || ದೇವಕಿಯ ಬಂಧವನ ಪರಿಹರಿಸಿದವನ ಪೂ- ತನಿಯ ಜೀವವ ಮಡುಹಿದವನ, ಮಾವನ ಕೊಂದವನ ಪಾವನಿ ತರಂಗಿಣಿಯ ಪದನಖದಿ ಪಡೆದವನ ಗೋವರ್ಧನೋದ್ಧಾರನ ದಾವಾನಲವ ಪಿಡಿದು ನುಂಗಿದನ ಲೀಲೆಯಿಂ ಗೋವತ್ಸ ರೂಪನಾಗಿ ಸನಕಾದಿ ದೇವಮುನಿ ಮುಖರಾರಾಧಿಪನ ಚರಣರಾಜೀವವಂ ಭಜಿಸು ಕಂಡ್ಯ ಮನವೆ || ಕಂಜಸಂಭವಪಿತನ ಕರುಣಾಪಯೋನಿಧಿಯ ಕುಂಜರನ ನುಡಿ ಕೇಳಿ ಒದಗಿ ರಣದೊಳ್ ಧ- ನಂಜಯನ ಜೀವವಂ ಕೃಪೆಯಿಂದ ಕಾಯ್ದವನ ಆಂಜನೇಯನಾಳ್ದನ ರಂಜಿಸುವ ಕೌಸ್ತುಭ ಭೂಷಣನ ನಂಜಿನೊಡೆಯನ ಮೇಲೆ ಮಲಗಿ ತಮದೋಳ್ ಪ- ರಂಜ್ಯೋತಿಮಯನಾಗಿ ಬೆಳಗುವನ ಚರಣಕಂಜವಂ ಭಜಿಸು ಕಂಡ್ಯ ಮನವೆ || ವಾರಿಧಿಯೊಳಾಡ್ದವನ ವರಗಿರಿಯ ತಾಳ್ದವನ ಧಾರಿಣಿಯ ತಂದವನ ದೈತ್ಯನಂ ಕೊಂದವನ ಮೂರಡಿಯನಳೆದವನ ಮರಗೊಡಲಿಯ ಸೆಳೆದವನ ವಾರಿಧಿಯ ಬಂಧಿಸಿದನ ದ್ವಾರಕೆಯನಾಳ್ದವನ ಪುರಮೂರು ಜಯಿಸಿದನ ಚಾರು ಹಯವೇರಿದನ ಸರಯುತೀರದ ರಾಮ ಪುರಂದರವಿಠಲನ ಚರಣವಂ ಭಜಿಸು ಕಂಡ್ಯ ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು