ಮನವೇನೆಂಬುದನರಿಯೋ ಮನುಜ

ಮನವೇನೆಂಬುದನರಿಯೋ ಮನುಜ

---ಅಸಾವೇರಿ( ಜೀವನಪುರಿ ರಾಗ ) ಆದಿತಾಳ ಮನವೇನೆಂಬುದನರಿಯೋ ಮನುಜ ಮನವೇನೆಂಬುದನು ||ಧ್ರುವ || ಮನವೇನೆಂಬುದನನುಭವಕೆ ತಂದು ಖೂನದಲಿಡದೆ ಜ್ಞಾನದಲಿ ನಾನಾ ಶಾಸ್ತ್ರವ ಓದಿ ನೀ ಅನುದಿನ ಏನು ಘಳಿಸಿದ್ಯೊ ಮರುಳ ಮನುಜಾ ||೧|| ಉತ್ಪತ್ತಿ ಸ್ಥಿತಿ ಲಯ ಕರ್ತರೆಂದೆನಿಸಿ ಪ್ರತ್ಯೇಕವರನು ತೋರುತಲಿ ಮತ್ತೆ ಬ್ಯಾರ್ಯಾದ ಪರಬ್ರಹ್ಮೆಂದು ತಾ ಚಿತ್ತ ಭ್ರಮಿಸುದು ದಾವುದೊ ಮನುಜ ||೨|| ಏಕೋ ವಿಷ್ಣು ವೆಂದೆನಿಸಿ ಮುಖದಲಿ ಪೋಕ ದೈವಕೆ ಬಾಯದೆರೆಸುತಲಿ ನಾಕು ವೇದವ ಬಲ್ಲವನೆಂದೆನಿಸಿ ವಿಕಳಿಸುತಿಹುದು ದಾವುದೊ ಮನುಜ ||೩|| ಉತ್ತಮೋತ್ತಮರ ಕಂಡಾಕ್ಷಣದಿ ಹರುಷದಿ ನಿತ್ಯಿರಬೇಕೀ ಸಹವಾಸವೆನಿಸಿ ಮತ್ತೊಂದರಘಳಿಗಾಲಸ್ಯವ ತೋರಿ ಒತ್ತಿ ಆಳುವದು ದಾವುದೊ ಮನುಜ ||೪|| ಪಾಪವ ಮಾಡಬಾರದು ಎಂದೆನಿಸಿ ವ್ಯಾಪಿಸಗೊಡದೆ ಕಾಣದನಕ ಉಪಾಯದಲಿ ಅಪಸ್ವಾರ್ಥವು ಇದಿರಿಡೆ ಅಪಹರಿಸುವುದು ದಾವುದೊ ಮನುಜ ||೫|| ಪ್ರಾಚೀನವೆ ತಾ ನಿಜವೆಂದರುಹಿಸಿ ಆಚರಣೆಯ ಬ್ಯಾರೆ ತೋರುತಲಿ ನೀಚ ಊಚಕೆ ಹೊಡೆದಾಡಿಸುತ ನಾಚಿಸುತಿಹುದು ದಾವುದೊ ಮನುಜ ||೬|| ಸಗುಣ ನಿರ್ಗುಣ ಬ್ಯಾರೆರಡನೆ ತೋರಿ ಬಗೆಬಗೆ ಸಾಧನ ತೋರಿಸುತ ಬಗೆದೊಂದೆವೆ ಭಕುತಿಗೆ ನೆಲೆಗೊಳಿಸಿದ ಪ್ರಗತಿ ತೋರುವುದು ದಾವುದೊ ಮನುಜ ||೭|| ಧ್ಯಾನಕೆ ಕೂಡಿಸಿ ಮೌನವ ಹಿಡಿಸಿ ಅನುದಿನ ಜಪವನು ಮಾಡಿಸುತ ಘನವಾಗಿಹ ಅನುಭವ ಸುಖದಾಟದ ಖೂನದೋರಿಸುದು ದಾವುದೊ ಮನುಜ ||೮|| ಮರವಿಗೆ ತಾನೇ ಅರಿವೇ ಕೊಟ್ಟು ಅರಿವು ಮರವಿನೊಳಾಡಿಸುತ ತಿರುವು ಮರವಿನಂಕುರದ ಕುರುಹಿನ ಇರಹು ತೋರಿಸುದು ದಾವುದೊ ಮನುಜ ||೯|| ಮನವಿನ ಮೂಲವ ತಿಳಿವದು ಭಾನುಕೋಟಿ ಪ್ರಕಾಶನ ಕರುಣದಿ ನಾನು ನಾನೆಂಬವರಿಗೆ ಇದರ ಖೂನ ಲೇಶ ತಿಳಿಯದೊ ಮನುಜ ||೧೦|| ಹರಿಯೆ ಗುರುವೆಂದರುಹಿಸಿ ಆತ್ಮದಿ ಶರಣಹೋಗುವ ಭಾವನೆದೋರಿ ತರಳ ಮಹಿಪತಿ ಗುರುದಯ ಪಡಕೊಂಡಿಂದು ಯೋಗ್ಯನಾಗುವದಿದೊಂದೆ ಮನುಜ ||೧೧||
ದಾಸ ಸಾಹಿತ್ಯ ಪ್ರಕಾರ
ಬರೆದವರು