ಭಯನಿವಾರಣವು ಶ್ರೀಹರಿಯ ನಾಮ (ಉದಯರಾಗ)

ಭಯನಿವಾರಣವು ಶ್ರೀಹರಿಯ ನಾಮ (ಉದಯರಾಗ)

ಭಯನಿವಾರಣವು ಶ್ರೀಹರಿಯ ನಾಮ ಜಯಪಾಂಡುರಂಗ ವಿಟ್ಠಲ ನಿಮ್ಮ ನಾಮ ಧಾರಿಣೀ ದೇವಿಗಾಧಾರವಾಗಿಹ ನಾಮ ನಾರದರು ನಲಿನಲಿದು ನೆನೆವ ನಾಮ || ಘೋರ ಪಾತಕಿ ಅಜಾಮಿಳನ ಸಲಹಿದ ನಾಮ ತಾರಕವು ಬ್ರಹ್ಮಭವರಿಗೆ ನಿಮ್ಮ ನಾಮ ಮೊರೆಯ ಲಾಲಿಸಿ ಮುನ್ನ ಗಜನ ಸಲುಹಿದ ನಾಮ ತರುಣಿ ದ್ರೌಪದಿಮಾನ ಕಾಯ್ದ ನಾಮ || ಮರುಗುತಿಹ ಧ್ರುವನಿಗೆ ಸ್ಥಿರಲೋಕವಿತ್ತಾ ನಾಮ ಪರಕೆ ಪರತತ್ವವಲ್ಲವೆ ನಿಮ್ಮ ನಾಮ ಚರಣದಿಂದಹಲ್ಯೆಯ ಸೆರೆಯ ಬಿಡಿಸಿದ ನಾಮ ಕರುಣದಿಂ ಪ್ರಹ್ಲಾದಗೊಲಿದ ನಾಮ || ಕರೆಯ ಬಂದಕ್ರೂರಗೆ ನಿಜವ ತೋರಿದ ನಾಮ ಸ್ಮರಿಪ ಭಕುತರಿಗೆ ಸಮಸ್ತವೀವ ನಾಮ ಚಂದ್ರಶೇಖರ ಗಿರಿಜೆಗುಪದೇಶಿಸಿದ ನಾಮ ಬಂದ ವಿಭೀಷಣಗಭಯವಿತ್ತ ನಾಮ || ಅಂದು ಮುಚಕುಂದಗೆ ಕಾಮಿತವಿತ್ತ ನಾಮ ಪಾಂಡವ ಪಕ್ಷ ಪಾವನ ಕೃಷ್ಣ ನಾಮ ಅಖಿಳ ವೇದಪುರಾಣ ಅರಸಿ ಕಾಣದ ನಾಮ ಸಕಲ ಯೋಗಿಜನರು ನೆನೆವ ನಾಮ || ಮುಕುತಜನ ಹೃತ್ಕಮಲದಲಿ ನೆಲೆಸಿಹ ನಾಮ ರುಕ್ಮಿಣೀಯರಸ ವಿಟ್ಠಲ ನಿಮ್ಮ ನಾಮ ಭಕುತಿಯಲಿ ನೆನೆವರನು ಎತ್ತಿ ಸಲಹುವ ನಾಮ ಮುಕುತಿಗೆ ಸೋಪಾನ ಶ್ರೀರಾಮನಾಮ || ಶಕುತಿಹೀನರಿಗೆ ಸಂಪತ್ತಾದ ನಾಮ ಕಂದರ್ಪನನು ಪೆತ್ತ ಶ್ರೀಪತಿ ನಿಮ್ಮ ನಾಮ ಕಡವಾಲದ ಮರವೇರಿ ಮಡುವ ಧುಮುಕಿದ ನಾಮ ಹೆಡೆಯ ಕಾಳಿಂಗನಾ ತುಳಿದ ನಾಮ || ಮಡದಿಯರ ಸ್ತುತಿ ಕೇಳಿ ವರವಿತ್ತ ನಾಮ ಗರುಡವಾಹನ ಶ್ರೀಕೃಷ್ಣ ನಿಮ್ಮ ನಾಮ ವಾರಾಂಗನೆಗೆ ಒಲಿದು ವಶವಾದ ನಾಮ ಕಾವೇರಿ ರಂಗನೆಂದು ಮೆರೆವ ನಾಮ || ಕ್ಶೀರಶಾಗರದಲ್ಲಿ ಶಯನವಾಗಿಹ ನಾಮ ನಾರಾಯಣನೆ ನರಕ ಬಿಡಿಸಿದ ನಾಮ ನಂಬಿದಾ ಭಕುತರನು ಬಂದು ಸಲಹುವ ನಾಮ ಹಂಬಲದಿ ಅಮೃತವನ್ನೆರೆದ ನಾಮ || ಅಂಬರೀಷನ ಶಾಪ ಬಿಡಿಸಿ ಸಲಹಿದ ನಾಮ ಶಂಭುಪ್ರಿಯ ಪುರಂದರವಿಠಲ ನಿಮ್ಮ ನಾಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ