ಬಾರಯ್ಯ ವೆಂಕಟಕೃಷ್ಣ

ಬಾರಯ್ಯ ವೆಂಕಟಕೃಷ್ಣ

( ರಾಗ ಶಂಕರಾಭರಣ. ಅಟ ತಾಳ) ಬಾರಯ್ಯ ವೆಂಕಟಕೃಷ್ಣ ||ಪ|| ಬಾರಯ್ಯ ವೆಂಕಟಕೃಷ್ಣ ನೀನೆನಗೆ ಧಾರಿಣಿಯೊಳು ನಿನ್ನ ಮೂರುತಿ ತೋರುತ ||ಅ|| ಮನವೆಂಬ ಮಂಟಪವ ನಿನಗೆ ಹಾಕಿ ಎನ್ನ ತನುವನೊಪ್ಪಿಸಿ ಕೈಯ ಮುಗಿವೆನೈಸೆ ವನಜಜಭವ ಸುರಮುನಿಗಳು ಭಜಿಸಲು ಘನಮಹಿಮನೆ ಪಾದಕ್ಕೆರಗಲಿ ಎನ್ನ ಶಿರ|| ಲಿಂಗ ದೇಹವೆಂಬೊ ಪವಳಿ ಶಾಧಾರವ ಅಂಗವ ನಿನಗೆ ಕಾಣಿಕೆ ಇಡುವೆ ಮಂಗಳಮೂರುತಿ ಅಂಗನೆಸಹಿತ ಭು- ಜಂಗಶಯನ ಎನ್ನ ಕಂಗಳಿಗುತ್ಸವವೀಯೊ|| ಉಡಿಗೆಜ್ಜೆ ರಾಗಡಿ ಪೆಂಡೆಗಳಿಂದೊಪ್ಪುವ ಉಡುವ ಪೀತಾಂಬರ ಕೊರಳ ಕೌಸ್ತುಭ ದೃಢದಿಂದ ಶಂಖಚಕ್ರ ಕರ್ಣಕುಂಡಲದಿಂದ ಕಡಲಶಯನ ಎನ್ನ ಹೃದಯದೊಳಗೆ ನಿಲ್ಲೊ || ಒಡೆಯ ನೀನೆನಗೆ ಅನಾದಿ ಕಾಲದಿಂದ ಬಡವನು ನಾ ನಿನ್ನ ದಾಸನು ಸತ್ಯ ಕಡುಕರುಣದಿಂದ ದಾಸತ್ವ ಬೇಕೊ ಗ- ರುಡಗಮನ ವೆಂಕಟೇಶ ಎನ್ನ ಮನೆಗೆ|| ಬರಿಮನೆಯಲ್ಲ ಪರಿವಾರ ಉಂಟು ಪರಮಪುರುಷ ನಿನ್ನ ರೂಪಗಳುಂಟು ಸಿರಿದೇವಿಸಹಿತವಾಗಿ ಪುರಂದರವಿಠಲ ಕರುಣದಿಂದಲಿ ಮನಮಂದಿರದೊಳಗೆ||
ದಾಸ ಸಾಹಿತ್ಯ ಪ್ರಕಾರ
ಬರೆದವರು