ಬಂದು ನಿಂದಿಹ ನೋಡಿ

ಬಂದು ನಿಂದಿಹ ನೋಡಿ

( ರಾಗ ಮಧ್ಯಮಾವತಿ. ಅಟ ತಾಳ) ಬಂದು ನಿಂದಿಹ ನೋಡಿ ಭೂತಳದಿ ವೆಂಕಟ ಇಂದಿರೆಯ ಒಡಗೂಡಿ ಒಪ್ಪುವ ನಿರಂತರ ಪೊಂದಿ ಭಜನೆಯ ಮಾಡಿ ಆನಂದಗೂಡಿ || ಪ|| ವಂದಿಸುತ ಮನದೊಳಗೆ ಇವನಡಿ ದ್ವಂದವ ಭಜಿಸಲು ಬಂದ ಭಯಹರ ಇಂದುಧರ ಸುರ ವೃಂದನುತ ಗೋ- ವಿಂದ ಘನ ದಯಾ ಸಿಂಧು ಶ್ರೀ ಹರಿ ||ಅ|| ದ್ವಾರದೆಡಬಲದಲ್ಲಿ ಜಯ ವಿಜಯರಿಬ್ಬರು ಸೇರಿ ಸೇವಿಪರಲ್ಲಿ ಸನಕಾದಿನುತ ಶೃಂ- ಗಾರನಿಧಿ ಅಂಗದಲ್ಲಿ ಮುತ್ತಿನಲಿ ಶೋಭಿಪ ಹಾರ ಪೊಂದಿಹುದಲ್ಲಿ ವಿಸ್ತಾರದಲ್ಲಿ | ವಾರವಾರಕೆ ಪೂಜೆಗೊಂಬುವ ಹಾರ ಮುಕುಟಾಭರಣ ಕುಂಡಲ ಧಾರ ಭುಜಕೇಯೂರ ಭೂಷಿತ ಮಾರಪಿತ ಗುಣ ಮೋಹನಾಂಗ ಚಾರುಪೀತಾಂಬರಕಟಿ ಕರ- ವೀರ ಕಲ್ಹಾರಾದಿ ಪೂವಿನ ಹಾರ ಕೊರಳೊಳು ಎಸೆವುತಿರೆ ವದ- ನಾರವಿಂದನು ನಗುತ ನಲಿಯುತೆ || ಎಲ್ಲ ಭಕುತರಭೀಷ್ಟ ಕೊಡುವುದಕೆ ತಾ ಕೈ- ವಲ್ಯಸ್ಥಾನವ ಬಿಟ್ಟ ಶೇಷಾದ್ರಿ ಮಂದಿರ- ದಲ್ಲಿ ಲೋಲುಪ ದಿಟ್ಟ ಸೌಭಾಗ್ಯನಿಧಿಗಿದಿ- ರಿಲ್ಲ ಭುಜಬಲಪುಷ್ಟ ಕಸ್ತೂರಿಯಿಟ್ಟ | ಚೆಲ್ವ ಫಣೆಯಲಿ ಶೋಭಿಸುವ ಸಿರಿ ವಲ್ಲಭನ ಗುಣ ಪೊಗಳದಿಹ ಜಗ ಖುಲ್ಲರೆದೆದಲ್ಲಣ ಪರಾಕ್ರಮ ಮಲ್ಲಮರ್ದನ ಮಾತುಳಾರಿ ಫಲ್ಗುಣನ ಸಖ ಪ್ರಕಟನಾಗಿಹ ದುರ್ಲಭನು ಅಘದೂರ ಬಹು ಮಾಂ- ಗಲ್ಯ ಹೃದಯನು ಸೃಷ್ಟಿಗೆ ಉಲ್ಲಾಸ ಕೊಡುತಲಿ ಚಂದದಿಂದಲಿ || ಪದಕ ಕೌಸ್ತುಭಧಾರ ಸರಿಗೆಯ ಕಂದರ ಸುದರುಶನಧರದಾರ ಸುಂದರ ಮನೋಹರ ಪದಯುಗದಿ ನೂಪುರ ಇಟ್ಟಿಹನು ಸನ್ಮುನಿ ಹೃದಯಸ್ಥಿತ ಗಂಭೀರ ಬಹು ದಾನಶೂರ | ವಿಧಿಭವಾತ್ಯರ ಪೊರೆವ ದಾತನು ತುದಿಮೊದಲು ಮಧ್ಯಮವಿರಹಿತನು ಉದುಭವಾದಿಗಳೀವ ಕರ್ತನು ತ್ರಿದಶಪೂಜಿತ ತ್ರಿಭುವನೇಶ ಸದುವಿಲಾಸದಿ ಸ್ವಾಮಿತೀರ್ಥದಿ ಉದಿಸುತಿರೆ ಸಿರಿಮಹಿಳೆ ಸಹಿತದಿ ಪದುಮನಾಭ ಪುರಂದರವಿಠಲ ಪ್ರತಿ ವರುಷ ಬ್ರಹ್ಮೋತ್ಸವದಿ ಮೆರೆಯುತ ||
ದಾಸ ಸಾಹಿತ್ಯ ಪ್ರಕಾರ
ಬರೆದವರು