ಪಂಚಮಹಾಪಾತಕಿಗೆ ಎಂತು ಬುದ್ಧಿಯ ಪೇಳೆ

ಪಂಚಮಹಾಪಾತಕಿಗೆ ಎಂತು ಬುದ್ಧಿಯ ಪೇಳೆ

( ರಾಗ ಶಂಕರಾಭರಣ ಝಂಪೆತಾಳ) ಪಂಚಮಹಾಪಾತಕಿಗೆ ಎಂತು ಬುದ್ಧಿಯ ಪೇಳೆ ತನ್ನ ವಂಚನೆಯಿಂದಲಿ ತನಗೆ ತಾನೆ ಕೆಟ್ಟುಹೋಹನಲ್ಲದೆ ||ಪ || ಊರೆಲ್ಲ ತೊಳೆದರೆ ಮಸಿ ಬೆಳ್ಳಗಾಗುವುದೆ ನೀರೊಳಗಿನ ಕಲ್ಲು ಮೃದುವಾಗಬಲ್ಲುದೆ ಧಾರಿಣಿಯೊಳಗೊಬ್ಬ ಮೂರ್ಖನಿಗೆ ಬುದ್ಧಿಯನು ಆರಾರು ಪೇಳಿದರೆ ಅವ ಕೇಳಬಲ್ಲನೆ || ಹಾವಿನ ಮರಿಯ ತಂದು ಹಾಲನೆರೆದು ಸಾಕಿದರೆ ಬಾಯಿಯೊಳಗಿನ ವಿಷವು ತಾ ಮಾಣಬಲ್ಲುದೆ ನಾಯಿಕುನ್ನಿಯ ತಂದು ಜ್ಞಾನವನು ಹೇಳಿದರೆ ಕಾಲು ಕಚ್ಚುವ ವಿದ್ಯವ ಬಿಡಬಲ್ಲುದೆ || ಕತ್ತೆಮರಿಯನೆ ತಂದು ಗಾನವನ್ನೆ ಹೇಳಿದರೆ ವಿಸ್ತರಿಸಲದು ಮತ್ತೆ ಕೇಳುವರ ಬಲ್ಲುದೆ ಹಿತ್ತಲ ತುರುಚಿಯ ತಂದು ಪನ್ನೀರನೆರೆದರೆ ಒತ್ತಿದವರ ಹರಿಕೊಂಡು ತಿಂಬೋದು ಬಿಡಬಲ್ಲುದೆ || ಹಂದಿಯ ಮರಿಗೆ ಶ್ರೀಗಂಧವ ಪೂಸಿದರೆ ಸಂದುಗೊಂದಿನ ಬಯಕೆ ಬಿಡಬಲ್ಲುದೆ ಮಂದವಾಗಿಹ ಗಜವ ತಂದು ಬುದ್ಧಿಯ ಹೇಳೆ ಎಂದಿಗಾದರು ಜಾಗ್ರತೆಯು ಪುಟ್ಟಬಲ್ಲುದೆ || ಹುಟ್ಟು ಕುರುಡನ ಕೈಯ ಕನ್ನಡಿಯ ಕೊಟ್ಟರೆ ಮುಟ್ಟಿ ತನ್ನಂಗವನು ನೋಡಿಕೊಳ್ಳಬಲ್ಲನೆ ಸೃಷ್ಟಿಯೊಳು ಪುರಂದರವಿಠಲನ ದಾಸರ ಕಷ್ಟಪಡಿಸಿದವರು ಕೆಟ್ಟುಹೋಹರಲ್ಲದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು