ನಿನ್ನ ದಿವ್ಯ ಮೂರುತಿಯ ಕಣ್ಣುದಣಿಯ ನೋಡಿ

ನಿನ್ನ ದಿವ್ಯ ಮೂರುತಿಯ ಕಣ್ಣುದಣಿಯ ನೋಡಿ

(ರಾಗ ಮೋಹನ ಅಟ ತಾಳ ) ನಿನ್ನ ದಿವ್ಯ ಮೂರುತಿಯ ಕಣ್ಣುದಣಿಯ ನೋಡಿ ಧನ್ಯನಾದೆನೊ ಧರೆಯೊಳು ||ಪ|| ಇನ್ನು ಈ ಭವ ಭಯಕೆ ಅಂಜಲೇತಕೊ ಚೆನ್ನ ಸಿರಿವೆಂಕಟೇಶ ಶ್ರೀಶ ||ಅ|| ಏಸು ಜನ್ಮದ ಪುಣ್ಯ ಬಂದೊದಗಿತೊ ಶ್ರೀ ಸ್ವಾಮಿ ಪುಷ್ಕರಣಿ- ಯೊಳ್ ಸ್ನಾನ ಜಪತಪ ಮಾಡಿ ವರಹದೇವರ ನೋಡಿ ಶ್ರೀ ಸ್ವಾಮಿ ಮಹಾದ್ವಾರಕೆ ಶ್ರೀ ಶರೀರವನು ಈಡಾಡಿ ಪ್ರದಕ್ಷಿಣೆ ಮಾಡಿ ಲೇಶದಿಂ ಪೊಗಳುತಲಿ ಆ ಸುವರ್ಣದ ಗರುಡಕಂಭವನ ನೋಡಿ ಸಂತೋಷದಿಂ ಕೊಂಡಾಡಿದೆ ಬಿಡದೆ || ನೆಟ್ಟನೆರಡನೇ ದ್ವಾರವನೆ ದಾಂಟಿ ಪೋಗುತಲಿ ದಟ್ಟಣಿಯು ಬಹು ಜನದಲಿ ಗಟ್ಟಿ ಮನದಲಿ ತಲೆಯ ಚೆಟ್ಟಿಡುತ ನೆಟ್ಟನೆ ಕಟ್ಟಾಂಜನಕೆ ತಾ ಬರುತಲಿ ಕೃಷ್ಣಾಜಿನದವರ ಪೆಟ್ಟುಗಳ ಕಾಣುತಲಿ ಕಂಗೆಟ್ಟು ಹರಿಯೆನುತಲಿ ಬೆಟ್ಟದಧಿಪತಿ ನಿನ್ನ ದೃಷ್ಟಿಂದ ಕಾಣುತಲಿ ಸುಟ್ಟಿತೆನ್ನಯ ದುರಿತವು ಸರ್ವವು || ಶಿರದಲಿ ರವಿಕೋಟಿ ತೇಜದಿಂದೆಸೆವಂಥ ವರ ಕಿರೀಟವು ಕುಂಡಲ ಕೊರಳೊಳಿಹ ಸರಿಗೆ ವೈಜಯಂತಿಯ ಮಾಲೆ ಪರಿಪರಿಯ ಹಾರಗಳನು ಉರದಿ ಶ್ರೀವತ್ಸವನು ಕರದಿ ಶಂಖಚಕ್ರಗಳು ವರನಾಭಿ ಮಾಣಿಕವನು ನಿರುಪಮ ಮಣಿಖಚಿತ ಕಟಿಸೂತ್ರ ಪೀತಾಂಬರ ಚರಣದ್ವಯದಂದುಗೆಯನು ಇನ್ನು || ಇಕ್ಷುಚಾಪನ ಪಿತನ ಪಕ್ಷೀಂದ್ರವಾಹನನೆ ಲಕ್ಷ್ಮೀಪತಿ ಕಮಲಾಕ್ಷನೆ ಅಕ್ಷಯ ಅಜಸುರೇಂದ್ರಾದಿ ವಂದಿತನೆ ಸಾಕ್ಷಾಜ್ಜಗನ್ನಾಥನೆ ರಾಕ್ಷಸಾಂತಕನೆ ನಿರಪೇಕ್ಷ ನಿತ್ಯ ತೃಪ್ತನೆ ನಿರುಪಮ ನಿಸ್ಸೀಮನೆ ಕುಕ್ಷಿಯೊಳಗಿರೇಳು ಲೋಕವನು ತಾಳ್ದವನೆ ರಕ್ಷಿಸುವುದೆಂದು ದಯದಿ ಮುದದಿ || ಉರಗಗಿರಿ ಅರಸು ನಿಮ್ಮ ಚರಣಗಳ ಕಂಡ ಮೇಲೆ ಉರಗ ಕರಿ ವ್ಯಾಘ್ರ ಸಿಂಹ ಅರಸು ಚೋರಾಗ್ನಿ ವೃಶ್ಚಿಕ ಮೊದಲಾದ ಪರಿಪರಿಯ ಬಹಳ ಭಯವು ಪರಮ ವಿಷಯಲಂಪಟದೊಳಗೆ ನಾ ಸಿಗದಂತೆ ಕರುಣಿಸುವುದೊಲಿದು ದಯದಿ ಸ್ಮರಗಧಿಕಲಾವಣ್ಯ ತಂದೆ ಪುರಂದರವಿಠಲ ಶರಣಜನ ಕರುಣಾರ್ಣವ ದೇವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು