ನರಸಿಂಹ ಪಾಹೀ ಲಕ್ಷ್ಮೀನರಸಿಂಹ

ನರಸಿಂಹ ಪಾಹೀ ಲಕ್ಷ್ಮೀನರಸಿಂಹ

( ಕೃತಿಕಾರರು - ಜಗನ್ನಾಥದಾಸರು) ರಾಗ ಶಂಕರಾಭರಣ (ದುರ್ಗಾ) ಅಟತಾಳ ) ನರಸಿಂಹ ಪಾಹೀ ಲಕ್ಷ್ಮೀನರಸಿಂಹ ||ಪ|| ನರಸಿಂಹ ನಮಿಪೆ ನಾ ನಿನ್ನ , ಚಾರು- ಚರಣ ಕಮಲಕೆ ನೀನೆನ್ನ , ಆಹಾ ಕರವ ಪಿಡಿದು ನಿಜಶರಣನೆಂದೆನಿಸು ಭಾ- ಸುರ ಕರುಣಾಂಬುಧೆ ಗರುಡವಾಹನ ಲಕ್ಷ್ಮೀ- ||ಅ.ಪ.|| ತರಳ ಪ್ರಹ್ಲಾದನ ನುಡಿಯ ಕೇಳಿ ತ್ವರಿತದಿ ಬಂದೆ ಎನ್ನೊಡೆಯ, ಏನು ಕರುಣಾಳೊ , ಭಕ್ತರ ಭಿಡೆಯ ಮೀರ- ಲರಿಯೆನೆಂದೆಂದು ಕೆಂಗಿಡಿಯ ಆಹಾ ಭರದಿಂದುಗುಳುತ ಬೊಬ್ಬಿರಿದು ಬೆಂಬೊತ್ತಿ ಕ- ರ್ಬುರ ಕಶಿಪುವಿನ ಮುಂಗುರುಳು ಪಿಡಿದೆ ಲಕ್ಷ್ಮೀ- ||೧|| ಪ್ರಳಯಾಂಬುನಿಧಿ ಘನ ಘೋಷದಂತೆ ಘುಳಿಘುಳಿಸುತಲಿ ಪ್ರದೋಷಕಾಲ ತಿಳಿದು ದೈತ್ಯನ ಅತಿರೋಷದಿಂದ- ಪ್ಪಳಿಸಿ ಮೇದಿನಿಗೆ ನಿರ್ದೋಷ ಆಹಾ ಸೆಳೆಸೆಳೆಯುತ ಚರ್ಮಸುಲಿದು ಕೆನ್ನೆತ್ತರೋ- ಕುಳಿಯನಾಡಿದೆ ದಿಶಾವಳಿಗಳೊಳಗೆ ಲಕ್ಷ್ಮೀ - ||೨|| ಕ್ರೂರ ದೈತ್ಯನ ತೋರ ಕರುಳ , ತೆಗೆ- ದ್ಹಾರ ಮಾಡಿದೆ ನಿಜ ಕೊರಳ ಕಂಡು ವಾರಿಜಾಸನ ಮುಖ್ಯರರಳ ಪುಷ್ಪ ಧಾರೆಗರೆದರ್ವೇಗ ತರಳ , ಆಹಾ ಧೀರ ಪ್ರಹ್ಲಾದಗೆ ತೋರಿ ತ್ವದಂಘ್ರಿ ಸ- ರೋರುಹವನು ಕಾಯ್ದೆ ಕಾರುಣ್ಯನಿಧಿ ಲಕ್ಷ್ಮೀ - ||೩|| ಜಯ ಜಯ ದೇವವರೇಣ್ಯ ಮಹ - ದ್ಭಯನಿವಾರಣ ಅಗ್ರಗಣ್ಯ ಗುಣ - ತ್ರಯದೂರ ದುರಿತಾರಣ್ಯ ಧನಂ ಜಯ ಜಗದೇಕಶರಣ್ಯ , ಆಹಾ ಲಯವಿವರ್ಜಿತ ಲೋಕತ್ರಯ ವ್ಯಾಪ್ತ ನಿಜಭಕ್ತ ಪ್ರಿಯ ಘೋರ ಭಯಹರ ದಯಮಾಡೆನ್ನನು ಲಕ್ಷ್ಮೀ- ||೪|| ಕುಟಿಲ ದ್ವೇಶದವ ನೀನಲ್ಲ , ನಿನ್ನಾ- ರ್ಭಟಕಂಜಿದರು ಸುರರೆಲ್ಲ ನರ- ನಟನೆ ತೋರಿದೆ ಲಕ್ಷ್ಮೀನಲ್ಲ , ಇದು ಸಟೆಯಲ್ಲ ಅಪ್ರತಿಮಲ್ಲ ಆಹಾ ವತಪತ್ರ ಶಯನ ಧೂರ್ಜಟಿವಂದ್ಯ ಜಗನ್ನಾಥ - ವಿಠಲ ಕೃತಾಂಜಲಿಪುಟದಿ ಬೇಡುವೆ ಲಕ್ಷ್ಮೀ - ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು