ನಗುವರಲ್ಲೊ ರಂಗಯ್ಯ

ನಗುವರಲ್ಲೊ ರಂಗಯ್ಯ

(ರಾಗ ಹಿಂದುಸ್ತಾನಿಕಾಪಿ ಆದಿ ತಾಳ ) ನಗುವರೆಲ್ಲ ರಂಗಯ್ಯ ನಿನ್ನಾಟವ ಕಂಡು ||ಪ || ಹಗರಣವಾಗಿದೆ ಎನಗೆ ನಿಗಮಗೋಚರನೆ ||ಅ|| ನಿಗಮವನ್ನು ತರಲು ಮತ್ಸ್ಯಾಕೃತಿಯ ತಾಳಿದೆ ನಗವನೆತ್ತಿ ಕೂರ್ಮನೆಂಬ ಹೆಸರ ಧರಿಸಿದೆ ಜಗತಿಯನ್ನು ತರಲು ವರಾಹ ಮೂರ್ತಿಯೆನಿಸಿದೆ ಮಗುವಿಗಾಗಿ ಘೋರಾಕೃತಿ ನರಮೃಗನೆನಿಸಿದೆ || ಹೆಡಮುಡಿ ಕಟ್ಟಿ ದಾನವ ಕೊಟ್ಟ ಬಲಿಯ ಭಂಗಿಸಿದೆ ಪಡೆದ ತಾತ ಶಿರವ ಕಡಿದು ನ್ಯಾಯವೆನಿಸಿದೆ ಮಡದಿಗಾಗಿ ಮರ್ಕಟರ ಹಿಂಡು ಕೂಡಿಸಿದೆ ಕಡಲ ಕಟ್ಟಿ ಕಪಿಗಳಿಂಡ ಧುರವ ಜಯಿಸಿದೆ || ಅಷ್ಟಮಿಯೊಳರ್ಧ ರಾತ್ರಿಯಲ್ಲಿ ಜನಿಸಿದೆ ದುಷ್ಟ ಕಂಸನು ಹಾಕಿದ ಬಾಗಿಲ ತೆಗೆಸಿದೆ ತಟ್ಟನೆ ಗೋಕುಲದಲ್ಲಿ ಬಂದು ನೆಲಸಿದೆ ಸೃಷ್ಟಿಸಿ ಚಂಡಿಕೆಯ ಖಳನ ಮುಂದೆ ನಿಲಿಸಿದೆ || ನಂದಗೋಪ ತನಗೆ ಕಂದನಾದನು ಎಂದು ಮಿಂದು ಕಾಳೀಂದಿಯೊಳು ಮಂದಿರಕೆ ಬಂದು ಚಂದದಿಂದ ಜಾತಕರ್ಮ ಮಾಡಿಸಿಕೊಂಡು ಬಂದ ಬ್ರಾಹ್ಮಣರಿಗೆ ದಕ್ಷಿಣೆ ಕೊಟ್ಟನು ಅಂದು || ಬಣ್ಣಿಸಿ ಮಕ್ಕಳ ಕರೆದು ಬೆಣ್ಣೆಯುಣಿಸಿದೆ ಚಿಣ್ಣಿಕೋಲು ಚೆಂಡು ಬುಗರಿ ಗಜ್ಜುಗವಾಡಿದೆ ಕಣ್ಣು ಸನ್ನೆ ಮಾಡಿ ಅವರ ಕಾಕು ಮಾಡಿದೆ ಮಣ್ಣು ತಿಂದ ಬಾಯೊಳು ಬ್ರಹ್ಮಾಂಡ ತೋರಿದೆ || ಗೊಲ್ಲರ ಮನೆಗೆ ನೀನು ಮೆಲ್ಲನೆ ಪೋಗಿ ಚೆಲ್ಲಿ ಪಾಲು ಮೊಸರು ಬೆಣ್ಣೆ ಸೂರೆ ಮಾಡಿದೆ ವಲ್ಲಭಯರ ಕೂಡೆ ನೀನು ಸರಸವಾಡಿದೆ ಮುಲ್ಲೆ ಮಲ್ಲಿಗೆಯೆ ಅರಳ ಮುಡಿಗೆ ಮುಡಿಸಿದೆ || ಬಾಲಕರ ಕೂಡೆ ಮೊಸರ ಭಾಂಡ ಒಡೆಸಿದೆ ಹಾಲು ಮೊಸರು ಬೆಣ್ಣೆ ಕದ್ದು ಕಳ್ಳನೆನಿಸಿದೆ ಬಾಲೆಯರ ವಸ್ತ್ರವ ಕೊಂಡು ಮರವನೇರಿದೆ ಕಾಲಾಹಿವೇಣಿಯರೊಡಗೂಡಿ ರಮಿಸಿದೆ || ತುರುಗಳ ಹಿಂಡನು ನಡೆಸಿ ವನವ ಚರಿಸಿದೆ ಮೊರಡು ಮುದುಕಿ ಕುಬುಜೆಯನ್ನಾದರದಿ ಕೂಡಿದೆ ಕರುಣವಿಷ್ಟಿಲ್ಲದೆ ಸೋದರಮಾವನ ಕೆಡಹಿದೆ ನರನ ರಥಕೆ ಬೋವನಾಗಿ ಕುದುರೆ ನಡೆಸಿದೆ || ತರುಣಿಯರ ವ್ರತವ ಕೆಡಿಸಿ ಬತ್ತಲೆ ನಿಲಿಸಿದೆ ತುರಗವೇರಿ ಕಲ್ಕಿಯಾಗಿ ಖಡ್ಗವ ಧರಿಸಿದೆ ಗುರು ಮಧ್ವರಾಯರಿಗೊಲಿದು ಉಡುಪಿಲಿ ನೆಲಸಿದೆ ವರದ ಪುರಂದರವಿಟ್ಠಲನೆ ನಮಗೆ ಗತಿಯಾದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು