ದಾಸ ಶೇಷಾದ್ರಿವಾಸ

ದಾಸ ಶೇಷಾದ್ರಿವಾಸ

( ರಾಗ ತೋಡಿ. ಅಟ ತಾಳ) ದಾಸ ಶೇಷಾದ್ರಿವಾಸ ತಿಮ್ಮಪ್ಪನ, ದಾಸರನ ಕರೆದೊಯ್ದು ಸಾಸಿರನಾಮ ವಿಲಾಸ ಮೂರ್ತಿಯ , ಲೇಸಾಗಿ ತೋರೆನಗೆ ||ಪ|| ಬೆರಳು ಇಲ್ಲದ ಕೈಯೊಳುಂಡು ಜೀವಿಸುವನ, ಶಿರದಲಂಧದ ದೇವನ ಉರುವ ಶಾಪಕೆ ತಾನು ಕಿರಿದಾಗಿ ಇರುವನ, ಶರದೊಳು ಧರಿಸಿದವನ ಕೊರಳ ಮಾಲೆಯ ಪೆಸರೊಪ್ಪಿದ ಗಿರಿಯೊಳು, ಸ್ಥಿರವಾಗಿ ನೆಲಸಿಪ್ಪನ ಕರುಣ ವಾರಿಧಿ ವೆಂಕಟೇಶನ ಚರಣವ, ಕರೆದೊಯ್ದು ತೋರೆನಗೆ || ವಾರಿಧಿಯೊಳುದಿಸಿದ ನಾರಿಯ ಮಧ್ಯದಿ, ಏರಿಯೆ ಕುಳಿತವನ ವಾರಿಜ ವದನದಿ ತೋರಿದ ಸಾರದ, ಮೂರೊಂದು ಪೆಸರವನ ಮೇರುವಿನಗ್ರದಿ ಊರಿದ ಚರಣವ, ಸಾರಿದವರ ಜೀವನ ಊರಿಗೆ ಕರದೊಯ್ದು ಶ್ರೀ ವೇಂಕಟೇಶ ಪ-ದಾರವಿಂದವನೆನಗೆ || ಸೋತ ಮಾನಿನಿಯೊಳು ಜಾತವಾಗಿಯೆ ಮೇಲೆ, ಮಾತೆಯ ಸಲಹಿದವನ ನೀತಿ ತಪ್ಪಿಯ ನಡೆವಾತ ಭಕ್ಷಕರನ್ನು, ಘಾತಿಸಿ ತರಿದವನ ನೂತನವಾಗಿಹ ನಾಮ ಶೈಲದ ಮೇಲೆ, ಕಾತರದೊಳು ನಿಂತವನ ಪಾತಕನಾಶನ ಶ್ರೀವೇಂಕಟೇಶನ, ರೀತಿಯ ತೋರೆನಗೆ || ಋಷಿಯ ಮಕ್ಕಳಿಗೆಲ್ಲ ಹಸಿವಿಗೆ ಗುರಿಯಾಗಿ, ವಶ ತಪ್ಪಿ ನಡೆವವನ ಬಸಿರೊಳಗುದಿಸಿಯೆ ಬಿಸಿಯನೆಲ್ಲವ ತಿಂದು, ಎಸೆವಂಥ ಮಹವೀರನ ಪೆಸರೊಳಗೊಪ್ಪಿದ ಹಸನಾದ ಗಿರಿಯೊಳು, ಕುಶಲದಿ ನಿಂತವನ ನಸುಮುದ್ದು ಶ್ರೀವೆಂಕಟೇಶನ ಚರಣದ, ಬಿಸರುಹ ತೋರೆನಗೆ || ಪಾದ ನಾಲ್ಕನು ಮೇದಿನಿಯೊಳಗೂರಿಯೆ, ಆದರಿಸುತ ಬಪ್ಪ ಮೇ- ಲಾದ ಪಾದವ ನಾಲ್ಕು ಅಂತರಿಕ್ಷದ ಮೇಲೆ, ಕಾದುಕೊಳ್ಳುತಲಿಪ್ಪನ ಆದಿಯ ನಾಮಕ್ಕೆ ಅದ್ರಿಯನೊಡಗೊಂಡು ಹಾದಿಯನಿತ್ತವನ ಸಾಧಿಸಿ ನಿಂತಿಹ ಶ್ರೀ ವೆಂಕಟೇಶನ, ಪಾದವ ತೋರೆನಗೆ || ಆದಿ ನಾರಾಯಣನೆಂಬ ಪರ್ವತವನ್ನು, ಭೇದಿಸಿ ನಿಂತವನ ಸಾಧಿಸಿ ಮುಂದಣ ವೆಂಕಟಾದ್ರಿಯ ಮೇಲೆ ಪಾದವನೂರಿದನ ಮೇದಿನಿಯೊಳಗುಳ್ಳ ಸಾಧು ಭಕ್ತರನೆಲ್ಲ, ಕಾದುಕೊಳ್ಳುತಲಿಪ್ಪ ವಿನೋದ ಮೂರುತಿಯಾದ ಶ್ರೀ ವೆಂಕಟೇಶನ ಪಾದವ ತೋರೆನಗೆ || ಅತ್ತೆಯ ಒರಸೆಯ ಮತ್ತೆ ಅಳಿಯಗಾದ, ಪುತ್ರಿಯ ತಂದವನ ಉತ್ತಮವಾಗಿಹ ಮಗಳ ಸನ್ನಿಧಿಯಲ್ಲಿ, ನಿತ್ಯದೊಳಿರುತಿಪ್ಪನ ಬತ್ತಲೆಯಾಗಿಹ ಸತಿಯಳ ಸತ್ಯಕ್ಕೆ, ಪುತ್ರನೆಂದೆನಿಸಿದನ ಹತ್ತಿರ ಕರೆದೊಯ್ಯು ಪುರಂದರವಿಠಲನ, ನಿತ್ಯದಿ ತೋರೆನಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು