ಡಂಗುರವ ತೀಡಿ ಮೈಯೊಳು ಗಂಧ ಪೂಸಿದ ( ಶ್ರೀನಿವಾಸದೇವರು ಬೇಟೆಗೆ ಹೋದುದು)

ಡಂಗುರವ ತೀಡಿ ಮೈಯೊಳು ಗಂಧ ಪೂಸಿದ ( ಶ್ರೀನಿವಾಸದೇವರು ಬೇಟೆಗೆ ಹೋದುದು)

( ರಾಗ ಕಾಂಭೋಜ ಏಕತಾಳ) ಡಂಗುರವ ತೀಡಿ ಮೈಯೊಳು ಗಂಧ ಪೂಸಿದ , ಸ್ವಾಮಿ, ಗಂಧ ಪೂಸಿದ ||೧|| ಪುಣುಗು ಜವ್ವಾಜಿ ಕಸ್ತೂರಿ ಹಚ್ಚಿದ , ಸ್ವಾಮಿ , ಕಸ್ತೂರಿ ಹಚ್ಚಿದ ||೨|| ನೊಸಲ ಮೇಲೆ ಮೃಗನಾಭಿ ತಿಲಕ ಧರಿಸಿದ , ಸ್ವಾಮಿ , ತಿಲಕ ಧರಿಸಿದ ||೩|| ಓರೆ ತುರುಬು ಓರೆ ಜಡೆಯ ಗೊಂಡೆ ಕಟ್ಟಿದ , ಸ್ವಾಮಿ , ಗೊಂಡೆ ಕಟ್ಟಿದ ||೪|| ಎಂಟು ಎಂಟು ಮುತ್ತ್ತಿನ ವಂಟಿ ಇಟ್ಟನೆ , ಸ್ವಾಮಿ ,ವಂಟಿ ಇಟ್ಟನೆ ||೫|| ಕಂಠದಲ್ಲಿ ಕೌಸ್ತುಭ ಆಭರಣವಿಟ್ಟನೆ , ಸ್ವಾಮಿ , ಆಭರಣವಿಟ್ಟನೆ ||೬|| ಪಾದದಲ್ಲಿ ಹೊನ್ನಂದುಗೆ ನೂಪುರವಿಟ್ಟನೆ , ಸ್ವಾಮಿ ಬಾಪುರಿ ಇಟ್ಟನೆ ||೭|| ಕಿರುಗೆಜ್ಜೆ ಪಾಡಗ ಪೆಂಡೆ ಕಾಲಲಿಟ್ಟನೆ , ಸ್ವಾಮಿ , ಕಾಲಲಿಟ್ಟನೆ ||೮|| ಅಂಗುಲಿಗೆ ತಕ್ಕಂಥ ಉಂಗುರವಿಟ್ಟನೆ , ಸ್ವಾಮಿ , ಹೊನ್ನುಂಗುರವಿಟ್ಟನೆ ||೯|| ತೋಳರಕ್ಷೆ ಮಣಿಹಸ್ತ ಕಡಗ ಇಟ್ಟನೆ , ಸ್ವಾಮಿ , ಕಡಗ ಇಟ್ಟನೆ ||೧೦|| ಹಾರಪದಕ ಹುಲಿಯುಗುರು ವೈಜಯಂತಿಯು , ಕೊರಳೊಳ್, ವೈಜಯಂತಿಯು ||೧೧|| ದುಂಡು ಮುತ್ತು ಕಟ್ಟಿ ಸರಿಗೆ ತಾಳಿ ಧರಿಸಿದ, ಸ್ವಾಮಿ, ತಾಳಿ ಧರಿಸಿದ ||೧೨|| ಬಂದಿ ಕಂಕಣ ಬಾಪುರಿ ವಂಕಿ ಇಟ್ಟನೆ , ಸ್ವಾಮಿ , ವಂಕಿ ಇಟ್ಟನೆ ||೧೩|| ಶೃಂಗಾರದ ಜರತರದ ಅಂಗಿ ತೊಟ್ಟನೆ , ಸ್ವಾಮಿ , ಅಂಗಿ ತೊಟ್ಟನೆ ||೧೪|| ಅಂಗದಲ್ಲಿ ಭಂಗಾರದ ಕವಚವಿಕ್ಕಿದ , ಸ್ವಾಮಿ , ಕವಚವಿಕ್ಕಿದ ||೧೫|| ದಿಟ್ಟ ವೆಂಕಟೇಶ ಬೇಟೆಯಾಡ ಹೊರಟನೆ , ಸ್ವಾಮಿ ಬೇಟೆ-ಯಾಡಹೊರಟನೆ ||೧೬|| ಪಟ್ಟವಾಳಿ ಶಾಮಿಯ ಕಸೆಯ ಬಿಗಿದನೆ , ಸ್ವಾಮಿ, ಕಸೆಯ ಬಿಗಿದನೆ ||೧೭|| ಹುಡಿಯ ಕಟ್ಟು ನಡುವಿಗೆ ಕಟ್ಠಾಣಿ ಹೊಗಿಸಿದ , ಸ್ವಾಮಿ, ಕಟ್ಠಾಣಿ ಹೊಗಿಸಿದ ||೧೮|| ಓರೆ ತುರುಬಿನ ನಾಯಕ ಬಾರದ್ಹೋದನೆ , ಸ್ವಾಮಿ ,ಬಾರದ್ಹೋದನೆ ||೧೯|| ಚೆಲುವ ಚೆನ್ನಿಗರಾಯನಾಗಿ ವನಕೆ ಹೊರಟನೆ , ಸ್ವಾಮಿ , ವನಕೆ ಹೊರಟನೆ ||೨೦|| ಜಗವೆಲ್ಲ ನೋಡುತಿರಲು ತೇಜಿಯೇರಿದ , ಸ್ವಾಮಿ ,ತೇಜಿಯೇರಿದ ||೨೧|| ತ್ರಿಜಗವನ್ನೆ ಪಾಲಿಸೆಂದು ತೇಜಿ ಹಿಡಿದನೆ , ಸ್ವಾಮಿ, ವಾಜಿ ಹಿಡಿದನೆ ||೨೨|| ಗಟ್ಟ ಬೆಟ್ಟವನ್ನೆ ಸುತ್ತಿ ಕಷ್ಟಬಟ್ಟನೆ ,ಸ್ವಾಮಿ , ಕಷ್ಟಬಟ್ಟನೆ || ೨೩|| ವೃಕ್ಷಮೂಲದಲ್ಲಿ ಮಿಂಚುತಿಹಳ ಕಂಡನೆ , ಸ್ವಾಮಿ , ಮಿಂಚುತಿಹಳ ಕಂಡನೆ ||೨೪|| ಸೋಲುಮುಡಿಯ ಸೋಗೆಗಣ್ಣ ಓರೆನೋಟವ , ಅವಳ , ಓರೆನೋಟವ ||೨೫|| ನೀಲವರ್ಣದ ಕೋಮಲಾಂಗಿ ಮೇಲೆ ಛಾಯವ , ಅವಳ , ಮೇಲೆ ಛಾಯವ ||೨೬|| ಎರಳೆಗಂಗಳಂತೆ ಕಣ್ಣ ತಿರುಗುತಿಹಳು , ಅವಳು , ಹೊಳೆಯುತಿಹಳು ||೨೭|| ಮೃಗವ ಕಂಡು ಶಿರವನೆತ್ತಿ ನೋಡುತಿಹಳು , ಅವಳು , ನೋಡುತಿಹಳು ||೨೮|| ಕುಂಜರಗಮನೆಯಂತೆ ತಿರುಗುತಿಹಳು , ಅವಳು , ಒಲೆವುತಿಹಳು ||೨೯|| ವನವ ಬಿಟ್ಟು ವನಕೆ ವನಕೆ ಹಾರುತಿಹಳು , ಅವಳು, ಹಾರುತಿಹಳು ||೩೦|| ಅವಳ ಕಂಡು ವೆಂಕಟೇಶ ಭ್ರಾಂತಿಬಟ್ಟನೆ , ಸ್ವಾಮಿ ಭ್ರಾಂತಿಗೊಂಡನೆ ||೩೧|| ಅಡ್ಡದಾರಿಯಲ್ಲಿ ಮೋರೆ ನೋಡುತಿಹನೆ , ಸ್ವಾಮಿ , ನೋಡುತಿಹನೆ ||೩೨|| ದಾರಿಗಡ್ಡ ನಿಂದಿರಲಾರು ಹೀನರಾವುತ , ಎಲೊ ,ಹೀನರಾವುತ ||೩೩|| ಪರನಾರಿಯರ ಕಂಡು ಮೋರೆ ಹೇಗೆ ಮಾಡುತಿ , ಎಲೊ ,ಹೇಗೆ ಮಾಡುತಿ ||೩೪|| ಹೀನನಲ್ಲವೆ ನಿನ್ನ ಹುಡುಕಬಂದೆನೆ, ನಿನ್ನ , ಹುಡುಕಬಂದೆನೆ ||೩೫|| ನಿನ್ನ ಗುರುಕುಚಗಳ ಕಂಡು ಭ್ರಾಂತಿಗೊಂಡೆನೆ, ನಾನು , ಭ್ರಾಂತಿಗೊಂಡೆನೆ ||೩೬|| ಲಂಡ ಪುಂಡರ ಮಾತ ಆಡದಿರೊ , ಎನ್ನ ಕೂ-ಡಾಡದಿರೊ ||೩೭|| ಕತ್ತಿ ಕಠಾರಿ ನಿನ್ನ ಸೇನೆಗಂಜೆನೋ , ನಾನು , ಸೇನೆಗಂಜೆನೋ ||೩೮|| ನಿನ್ನ ಬಿರುದ ಬಿಟ್ಟುಕೊಟ್ಟು ಬಾರೆ ಚುಂಚುಕಿ , ಬೇಗ , ಬಾರೆ ಚುಂಚುಕಿ ||೩೯|| ಬಾರೆ ಹೋಗೆ ಎನ್ನಲಿಕ್ಕೆ ಭಾಮೆಯೆ ನಾನು , ಎಲೊ , ಭಾಮೆಯೆ ನಾನು ||೪೦|| ನಿನ್ನ ಬಿಂಕ ಬಿಟ್ಟುಕೊಟ್ಟು ತಿರುಗೊ ರಾವುತ , ಅತ್ತ , ಸಾರೊ ರಾವುತ ||೪೧|| ನೀಲವೇಣಿ ಎನ್ನ ಕೂಡ ನಿಲ್ಲಲಾರೆಯೆ , ಎನ್ನೊಳ್ , ನಿಲ್ಲಲಾರೆಯೆ ||೪೨|| ನಿನ್ನ ಮುಖಪದ್ಮಗಳ ಕಂಡು ಭ್ರಾಂತಿಗೊಂಡೆನೆ , ನೀರೆ ,ಭ್ರಾಂತಿಗೊಂಡೆನೆ ||೪೩|| ಹೀನಮಾತಾಡದಿರೊ ಹೀನ ರಾವುತ , ಎಲೊ , ಹೀನ ರಾವುತ ||೪೪|| ವಾರಿಜಾಕ್ಷಿ ಎನ್ನ ಕೂಡೆ ವಾದವೇತಕೆ , ಎಲೆ , ವಾದವೇತಕೆ ||೪೫|| ಪ್ರೇಮದಿಂದ ಬಂದು ತೊಡೆಯ ಮೇಲೆ ಏರೆ ಚುಂಚುಕಿ , ಮೇಲೆ , ಏರೆ ಚುಂಚುಕಿ ||೪೬|| ತೊಡೆಯ ಮೇಲೆ ಏರಲಿಕ್ಕೆ ಮಡದಿಯೆ ನಾನು , ಎಲೊ , ಮಡದಿಯೆ ನಾನು||೪೭|| ಹೀನಮಾತಾಡದಿರೊ ಹುಡುಗ ರಾವುತ , ಎಲೊ , ತುಡುಗ ರಾವುತ ||೪೮|| ರಾಜ್ಯಭೂಮಿಗಳನು ಅಷ್ಟು ಕೊಡುವೆನು ನಾನು , ನಿನಗೆ , ಬಿಟ್ಟುಕೊಡುವೆನು ||೪೯|| ನಿನ್ನೊಡೆಯನೆಂದು ಪಾಲಿಸೆ ಚುಂಚುಕಿ , ಬೇಡಿ-ಕೊಂಬೆ ನಾಯಕಿ ||೫೦|| ರಾಜ್ಯಭೂಮಿಯಾಳಲಿಕ್ಕೆ ರಾಯನೇ ನಾನು , ಎಲೊ ,ರಾಯನೇ ನಾನು ||೫೧|| ದೊಡ್ಡ ಅಡವಿಬೆಟ್ಟದೊಳಗೆ ಆಹಾರವೇನೊ , ಎಲೊ , ಆಹಾರವೇನೊ ||೫೨|| ಆಲದಂತಿಹ ಹಣ್ಣು ಮುಟ್ಟಬಾರದ ಹಣ್ಣು , ಮುಟ್ಟ-ಬಾರದ ಹಣ್ಣು ||೫೩|| ಮುದ್ದು ಸುರಿವ ಹೂ , ಬಹಳ , ಮುದ್ದು ಸುರಿವ ಹೂ ||೫೪|| ಕರೆಯಬಾರದಾ ಹಣ್ಣು ಕೈಗೆ ನೀಕಾದ, ಹಣ್ಣು , ಕೈಗೆ ನೀಕಾದ ||೫೫|| ಎಷ್ಟು ಪೇಳ್ದರು ಕೇಳಲಿಲ್ಲ ಏನ ಮಾಡಲಿ , ಇ-ನ್ನೇನು ಮಾಡಲಿ ||೫೬|||| ಅಡವಿಯೊಳಗೆ ದಾರಿಲ್ಲೆಂದು ಜುಲ್ಮೆ ಮಾಡಿದ , ಸ್ವಾಮಿ , ಜುಲ್ಮೆ ಮಾಡಿದ ||೫೭|| ಸ್ವಾಮಿಪುಷ್ಕರಣಿಯ ತೀರದಲ್ಲಿ ವಾಸ ಮಾಡಿದ , ಸ್ವಾಮಿ , ವಾಸ ಮಾಡಿದ || ೫೮ || ವರಹವತಾರ ತಾನೆಂದು ಅರಸನಾದನೆ , ಸ್ವಾಮಿ , ಅರಸನಾದನೆ ||೫೯|| ಕೊಲ್ಲಾಪುರದಲ್ಲಿ ತನ್ನ ನಾರಿಯಿಟ್ಟನೆ , ಸ್ವಾಮಿ , ನಾರಿಯಿಟ್ಟನೆ ||೬೦|| ಬೆಟ್ಟ ನಡೆವರಿಲ್ಲೆಂದು ಕೃಷ್ಣ ನಡೆದನೆ , ಸ್ವಾಮಿ , ಕೃಷ್ಣ ನಡೆದನೆ ||೬೧|| ಸ್ವಾಮಿ ವೆಂಕಟೇಶ ತಾನು ಬೇಟೆಯಾಡಿದ , ಸ್ವಾಮಿ ,ಬೇಟೆಯಾಡಿದ ||೬೨|| ಅಪ್ಪ ವೆಂಕಟೇಶ ತಾನು ಒಪ್ಪದಿಂದಲೆ , ಗಿರಿಗೆ ಬಂದನೆ ||೬೩|| ಶ್ರೀಶ ಪುರಂದರವಿಠಲನೆಂದು ಹಾಗೆ ನಿಂದನೆ , ಸ್ವಾಮಿ , ಹಾಗೆ ನಿಂದನೆ ||೬೪||
ದಾಸ ಸಾಹಿತ್ಯ ಪ್ರಕಾರ
ಬರೆದವರು