ಗೋಕುಲದೊಳಗೋರ್ವ ರಾಕೇಂದುಮುಖಿ

ಗೋಕುಲದೊಳಗೋರ್ವ ರಾಕೇಂದುಮುಖಿ

( ರಾಗ ಸೌರಾಷ್ಟ್ರ ಅಟತಾಳ) ಗೋಕುಲದೊಳಗೋರ್ವ ರಾಕೇಂದುಮುಖಿ ತಾನು, ಜೋಕೆಲಿ ಕೊಡನ ಪೊತ್ತು ಬೇಕಾದವರಿಗೆ ನಾ ಕೊಡುವೆನು ಹಾಲು, ಆಕೆ ಸಾರುತ ಬಂದಳು ||೧|| ಕಣ್ಣಡಿಕದಪಿನ ಎಣ್ಣೆಗೆಂಪಿನ ಜಾಣೆ, ಕಣ್ಣಿಗೆ ಕಪ್ಪನ್ಹಚ್ಚಿ ಚಿನ್ನಾಬಣ್ಣವನಿಟ್ಟು ಬಿನ್ನಬಿಳಿದನುಟ್ಟು, ಬೆಣ್ಣೆ ಮಾರುತ ಬಂದಳು ||೨|| ನು(ಅ?)ಡಿ ಗಿಳಿ ಸುಳಿ ಪಲ್ಲು ನಡೆ ಹಂಸಗಮನದಿ, ಬೆಡಗಿನಿಂದಡಿಯಿಡುತ ಸಡಗರದಿಂದಲಿ ನಡುಬೀದಿಯೊಳಗೆಲ್ಲ, ಮಡದಿ ಸಾರುತ ಬಂದಳು ||೩|| ಪನ್ನಗಶಯನನು ಸಣ್ಣ ನಾಮವನಿಟ್ಟು, ರನ್ನದ ಕೊಳಲ ಪಿಡಿದು ಕನ್ನೆ ಹೆಣ್ಣುಗಳ ಕೈ ಸನ್ನೆಯ ಮಾಡುತ, ಚೆನ್ನಕೇಶವ ಬಂದನು ||೪|| ಪಟ್ಟಣದೊಳು ನಿನ್ನ ಬಿಟ್ಟವನ್ಯಾರೆಲೆ, ಕೊಟ್ಟು ಪೋಗೆಲೆ ಸುಂಕವ ಸಿಟ್ಟು ಬಂದರೆ ನಿನ್ನ ಬಟ್ಟ ಕುಚದ ಮೇಲೆ, ಪೆಟ್ಟು ಹಾಕುವೆನೆಂದನು ||೫|| ಪೆಟ್ಟು ಹಾಕುವುದಕ್ಕೆ ಬಿಟ್ಟಿಗೆ ಬಿದ್ದಿಲ್ಲ, ಇಷ್ಟು ಮಾತುಗಳೇತಕೋ ಪಟ್ಟದರಸಿಗ್ಹೇಳಿ ಕಟ್ಟಿಸುವೆನು ಕೈಯ, ಗುಟ್ಟಿಲಿ ಸುಮ್ಮನಿರು ||೬|| ತಡೆಯದೆ ಕೊಡು ಬೇಗ ಬಿಡುವವ ನಾನಲ್ಲ, ಕುಡುತೆ ಕಣ್ಣವಳೆ ಕೇಳೆ ಬಡನಡುವಿನೊಳುಟ್ಟ ಉಡುಗೆಯ ಸೆಳೆದು ನಿ-ನ್ನೊಡ ಗೂಡಿ ಬಿಡುವೆನೆಂದ ||೭|| ಕಾಯಾತುರದೊಳು ಆಯಾಸಗೊಳಿಸದೆ, ಗಾಯಕತನವೇತಕೋ ಛಾಯಮಾಯವ ತಾಳಿ ಅಯಾಸಕೊಳಗಾಗಿ, ನೋಯದೆ ತೊಲಗೊ ನೀನು ||೮|| ತೊಲಗುವ ನಾನಲ್ಲ ಚೆಲುವ ಚಂದನಗಂಧಿ, ಲಲನೆ ಒಲಿದು ಬಂದಎನೆ ಹಲವು ಹಂಬಲಿಸದೆ ಬಳಿಯೆ ಕುಳ್ಳಿರು ಎಂದು, ಸೆಳೆದು ಸೆರಗ ಪಿಡಿದ ||೯|| ದುಡುಕಿನಲಿ ಎನ್ನ ಪಿಡಿದು ನಿಲ್ಲಿಸಲಿಕ್ಕೆ, ಒಡೆಯನುಳ್ಳವಳು ನಾನು ಕಡುಕೋಪವೇತಕೆ ಪಿಡಿವುದೆನ್ನನು ಕೈಯ, ಬಿಡು ಭಾವ ಎನುತಿದ್ದಳು ||೧೦|| ಭಾವ ಎಂತೆಂದಿಹ ವಾವೆ ಅರಿಯದ ಹೆಣ್ಣೆ, ಕಾವರು ಎಷ್ಟೆ ನಿನಗೆ ಮಾವ ಕಂಸನ ಕೊಂದ ಕೋವಿದರರಸನು, ಜೀವದೊಲ್ಲಭ ನಿನಗೆ ||೧೧|| ಹೊಂದಿಕೆ ಮಾತಾಡಿ ಬಂದು ನೀ ನಿಲ್ಲದೆ, ಕಂದಯ್ಯ ಸೆರಗ ಬಿಡೊ ಮಂದರಧರ ಗೋವಿಂದ ಮಾಧವ ನಿನ್ನ, ಕಂದನ ತಂದೆ ಕಾಣೆ ||೧೨|| ಒಪ್ಪದೊಂದೂರೊಳು ತುಪ್ಪ ಮಾರುತ ಬಂದೆ, ಅಪ್ಪಯ್ಯ ಸೆರಗ ಬಿಡೊ ಪುಷ್ಪಶರನ ಕಂದರ್ಪಜನಕ ನಿನ್ನ, ಅಪ್ಪನ ಅಳಿಯ ಕಾಣೆ ||೧೩|| ಬಿನ್ನಾಣ ಮಾತಾಡಿ ಕಣ್ಣ ಮೀಟುತಲಿಪ್ಪ, ಅಣ್ಣಯ್ಯ ಸೆರಗ ಬಿಡೊ ಹುಣ್ಣಿಮೆ ಚಂದ್ರನ ಪೋಲ್ವ ಪುಣ್ಯಸ್ತ್ರೀ ನಿ-ನ್ನಣ್ಣನ ಭಾವ ಕಾಣೆ ||೧೪|| ಎಷ್ಟು ಹೇಳಿದರು ನೀ ಬಿಟ್ಟು ಹೋಗುವನಲ್ಲ, ಇಷ್ಟು ಮಾತುಗಳೇತಕೋ ಭ್ರಷ್ಟತನದಿಂದ ದುಷ್ಟ ಬುದ್ಧಿಯ ಮಾಳ್ಪೆ, ದಿಟ್ಟ ನೀನ್ಯಾರು ಪೇಳೊ ||೧೫ || ಗಾದೆಯ ಮಾತಲ್ಲ ಆದಿ ಬ್ರಹ್ಮನ ಕೈಯ, ವೇದವನೊಯ್ದವನ ಮೇದಿನಿ ಪಿಡಿದು ಛೇದಿಸಿ ವೇದವ ತಂದ, ಆದಿಮತ್ಸ್ಯವತಾರನೆ ||೧೬|| ಬಡಿವಾರ ಹೇಳಿ ನೀ ಬೆಡಗಿ ನೀರೊಳು ಮುಳುಗಿ, ಅಡಗಿಕೊಂಡಿಹುದೇತಕೋ ಕಡಲ ಕಡೆದು ಮಹಾಗಿರಿಯ ಬೆನ್ನಲಿ ಪೊತ್ತು, ಅಡರಿ ಎತ್ತಿದ ಕೂರ್ಮನೆ ||೧೭|| ಮೋರೆಯ ಬಗ್ಗಿಸಿ ದಾರಿಯ ನಡೆವಾಗ, ಕೂರಿಕೊಂಡಿಹುದೇತಕೋ ಘೋರ ರಾಕ್ಷಸರ ಸಂಹಾರ ಮಾಡಿದ ಮಹಾ-ಧೀರ ವರಾಹವತಾರನೆ ||೧೮|| ಹಿರಿದು ಕೂಗುತ ರಕ್ತ ಸುರಿದು ನಾಲಿಗೆ ಬಾಯ, ತೆರೆದುಕೊಂಡಿಹುದೇತಕೋ ತರಳನಿಗೊಲಿದು ಹಿರಣ್ಯನ ಸೀಳಿದ, ನರಸಿಂಹ ಅವತಾರನೆ ||೧೯|| ಬಲು ದರಿದ್ರನೆಂದು ಚೆಲುವ ಬ್ರಾಹ್ಮಣನಾಗಿ, ಇಳೆಯ ದಾನವ ಬೇಡಲು ಬಲಿ ಚಕ್ರವರ್ತಿಯ ಛಲದಿ ಪಾತಾಳಕೆ, ತುಳಿದ ವಾಮನವತಾರನೆ ||೨೦|| ಕರದಿಂದ ಕೊಡಲಿಯ ಪಿಡಿದುಕೊಂಡಿಹ ನೀನು, ಯಾರು ಪೇಳೆಲೊ ಎನಗೆ ಧುರದೆ ಕ್ಷತ್ರಿಯರ ಶಿರವ ತರಿದು ಕೊಂದ, ಶೂರ ಭಾರ್ಗವವತಾರನೆ ||೨೧|| ದಶರಥರಾಯನ ಸುತನಾಗಿ ವನವಾಸ, ಜಿತದಿ ನೀ ತಿರುಗಲೇಕೋ ದಶಶಿರದ ರಾವಣನ ಶಿರವ ತರಿದು ಕೊಂದ, ಸೀತಾಪತಿ ರಾಮನೆ ||೨೨|| ಭೂಗೋಲಸಮರೂಪ ನಾಗವೇಣಿಯರ ಅನು-ರಾಗದಿಂ ಸೆಳೆವೆ ಪೇಳೊ ಸೋಗೆಗಂಗಳೆ ಕೇಳೆ ಬೇಗ ಅಸುರರ ಗೆಲಿದು, ಛೇದಿಸಿದ ಶ್ರೀ ಕೃಷ್ಣನೆ ||೨೩|| ಪಟ್ಟೆ ಪೀತಾಂಬರ ಉಟ್ಟುಕೊಳ್ಳದೆ ನೀನು, ಬತ್ತಲೆ ತಿರುಗಲೇತಕೋ ಶ್ರೇಷ್ಠ ತ್ರಿಪುರ ಸ್ತ್ರೀಯರ ವ್ರತವ ಕೆಡಿಸಿದ, ಚೆಲುವ ಬುದ್ಧವತಾರನೆ ||೨೪|| ಹರಿಯು ರಾವುತನೆಂದು ತುರಗವೇರಿ ಹೊಟ್ಟೆ, ಹೊರೆದು ಕೊಂದಿಹುದೇತಕೋ ಸರಿಯಿಲ್ಲ ನಮಗಾರು ತರುಣಿ ಕೇಳೆಲೆ ನಾನು, ಧೀರ ಕಲ್ಕ್ಯಾವತಾರನೆ ||೨೫|| ಹತ್ತವತಾರದ ವಿಸ್ತಾರ ಪೇಳಿದ, ಮತ್ತೆ ನಾನಾರು ಕೇಳೆ ಕತ್ತಲೆ ಕವಿದಂತೆ ಎತ್ತ ತಿಳಿಯಲಿಲ್ಲ, ಸ್ವಚ್ಛದಿ ತಿಳಿಯಪೇಳೋ ||೨೬|| ಗೋಪಿಯ ತನಯನೆ ರಾಪು ಮಾಡಲು ಬೇಡ, ಗೋಪ್ಯದಿ ಸುಮ್ಮನಿರು ಭಾಪುರೆ ಗೋವರ್ಧನ ಗಿರಿಯನೆತ್ತಿದ, ಗೋಪಾಲಕೃಷ್ಣ ಕಾಣೆ ||೨೭|| ಹೃದಯದಿ ತಲ್ಲಣಿಸಿ ಗಡಗಡ ನಡುಗುತ, ಪದುಮನಾಭನ ಮುದದಿ ವಿಧವಿಧ ಸ್ತುತಿಸುತ್ತ ಮುಖವೆತ್ತಿ ಮುದ್ದಾಡಿ, ಚದುರೆ ಸಂತವಿಸಿದಳು ||೨೮|| ತೆರೆದಿದ್ದ ಕುಚ ತೆಗೆದು ಗಮ್ಮನೆ ಎದೆಗೊತ್ತು-ತಧರಾಮೃತವನೆ ಸವಿದು ಸದಮಲದಿಂದಲಿ ಮದನಕೇಳಿಯೊಳು ಸುಗುಣನೊಳಿರುತಿದ್ದಳು ||೨೯|| ಸೃಷ್ಟಿಗಧಿಕವಾದ ಶೇಷಗಿರಿಯ ವಾಸ, ದಿಟ್ಟ ವೆಂಕಟಮೂರುತಿ ಸೃಷ್ಟಿಸಿಹ ನಿನ್ನನು ಎನಗಾಗಿ ಪುರಂದರ-ವಿಠಲರಾಯ ಕಾಣೆ ||೩೦||
ದಾಸ ಸಾಹಿತ್ಯ ಪ್ರಕಾರ
ಬರೆದವರು