ಕೃಷ್ಣ ಎಂಥಾದೋ ನಿನ್ನ ಕರುಣಿ

ಕೃಷ್ಣ ಎಂಥಾದೋ ನಿನ್ನ ಕರುಣಿ

( ಭೈರವಿ ರಾಗ ಧುಮಾಳಿ) ಕೃಷ್ಣ ಎಂಥಾದೋ ನಿನ್ನ ಕರುಣಿ ಶಿಷ್ಟ ಜನರುದ್ದೇಶ ಬಂದ್ಯೊ ನೀ ಕರುಣಿ ದುಷ್ಟಜನರ ಮಾಡಿದ್ಯೊ ನೀ ಮರ್ದನಿ ದೃಷ್ಟಿಸಿ ಮಾಡುವೆ ಸಾಧು ಸಂರಕ್ಷಣಿ ||೧|| ಹುಟ್ಟಿ ವಸುದೇವನಲ್ಲಿ ಬಂದು ಹೊಳೆದ್ಯೊ ದಿಟ್ಟತನದಲಿ ನಂದಗೋಕುಲದಲಿ ಬೆಳೆದ್ಯೊ ಮೆಟ್ಟಿ ವಿಷದ ಹಾವಿನ ಹೆಡೆಯ ತುಳಿದ್ಯೊ ಕುಟ್ಟಿ ಕಂಸಾಸುರನ ಪ್ರಾಣವಳಿದ್ಯೊ ||೨|| ಮೊಲಿಯನುಂಡು ಕೊಂದಿ ಪೂತನಿ ಪ್ರಾಣ ಕಾಲಿಲೊದ್ದು ಕೊಂದಿ ಶಕಟಾಸುರನ ಬಾಲತನದಲಿ ಕೆಡಹಿದ್ಯೊ ಮಾವನ ನೆಲೆಯು ತಿಳಿಯದು ಇನ್ನೊಬ್ಬರಿಗೆ ಪೂರ್ಣ ||೩|| ತುರುಗಳ ಕಾಯ್ದ್ಯೊ ನೀ ಗೋವಿಂದ ಬೆರಳಲೆತ್ತಿದ್ಯೊ ಗಿರಿಯ ಮುಕುಂದ ಮರುಳು ಮಾಡಿದ್ಯೊ ಗೋಪಿಕೆಯರ ವೃಂದ ಹರುಷಗೈಸಿದೆ ಅನೇಕ ಪರಿಯಿಂದ ||೪|| ಹಾಲುಬೆಣ್ಣೆ ಕದ್ದು ತಿಂಬುವ ನಿನ್ನಾಟ ಬಾಲಗೋಪಾಲರ ಕೂಡಿ ನಿನ್ನೂಟ ಚೆಲುವ ನಾರೇರ ನೋಡ್ವ ನಿನ್ನ ನೋಟ ಒಲಿದು ಕುಬ್ಜೆಯ ಬೆನ್ನ ಮಾಡಿದ್ಯೊ ನೀಟ ||೫|| ಗುರುಮಗನ ತಂದುಕೊಟ್ಯೊ ನೀ ಪ್ರಾಣ ಸುರಬ್ರಹ್ಮಾದಿಗಳರಿಯರು ನಿನ್ನ ತ್ರಾಣ ಶರಣಾಗತರ ವಜ್ರಪಂಜರ ಪೂರ್ಣ ವರಮುನಿಗಳಿಗಾಗಿಹೆ ನೀ ನಿಧಾನ ||೬|| ಒಲಿದು ಪಾಂಡವರಿಗಾದಿ ಸಹಕಾರಿ ಬಲವ ಮುರಿದ್ಯೋ ನೀ ಕೌರವರ ಸಂಹಾರಿ ಹಲವು ಪರಿ ಆಟ ನಿನ್ನದೊ ಹರಿ ಸಲಹುತಿಹೆ ಮಹಿಪತಿಗನೇಕ ಪರಿ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು