ಕರುಣಸಾಗರನಹುದೊ ಶರಣಜನರ ಪ್ರಿಯ

ಕರುಣಸಾಗರನಹುದೊ ಶರಣಜನರ ಪ್ರಿಯ

( ಜೀವನಪುರಿ ರಾಗ ತೀನ್ ತಾಳ) ಕರುಣಸಾಗರನಹುದೊ ಶರಣಜನರ ಪ್ರಿಯ ||ಪ|| ಕರಿರಾಜ ಮೊರೆ ಇಡಲು ಭರದಿಂದೊದಗಿ ಬಂದ್ಯೊ ದುರಿತ ಬಂದಡರಿದ ಅವಸರದೊಳು ನೀ ಪರಿಹರಿಸಿದ್ಯೊ ಶ್ರಮ ಪರಮದಯಾಳ ||೧|| ದುರಿತ ನಿರ್ಮಿಸಿದವನ ಬೆರಳಲಿ ಸೀಳಿದ್ಯೋ ಪೂರ್ಣ ಹರಿಯಂದಾ ಮಾತಿಗೆ ಕರುಣದಿಂದೊದಗಿ ನೀ ಪರಿಪರಿ ಕಾಯಿದ್ಯೊ ತರಳ ಪ್ರಹ್ಲಾದನ ||೨|| ಧರ್ಮಪತ್ನಿಯ ಸೆರಗ ಭರದಿಂದೆಳೆಯುವ ಸಮಯ ಸ್ಮರಣಿ ಒದಗಿ ಬಂದ್ಯೊ ಪರಿಪರಿ ವಸ್ತುವ ಪೂರಿಸಿದ್ಯೊ ಶ್ರೀಹರಿ ಕೃಷ್ಣ ಕೃಪಾಳು ||೩|| ಅರಗಿನ ಮನೆಯೊಳು ಮರೆಮೋಸ ಮಾಡಿರಲು ದೋರಿ ವಿವರದಿಂದ ಪೊರವೊಂದಿಸಿದ್ಯೋ ಸ್ವಾಮಿ ಶರಣಾಗತವತ್ಸಲ ಪಾಂಡವಪ್ರಿಯ ||೪|| ಹಲವು ಪರಿಯಲೆನ್ನ ಸಲಹುವ ಸದ್ಗುರುಪೂರ್ಣ ಬಾಲಕ ಮಹಿಪತಿಯ ಪಾಲಕ ನೀನಹುದೊ ಮೂಲೋಕದೊಡೆಯ ಶ್ರೀಹರಿದಯಾಳು ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು