ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ

ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ

(ರಾಗ ಕಮಾಚ್ ಅಟತಾಳ) ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ ||ಪ|| ಕಂದಾ ಬೇಡವೊ ಮಣ್ಣು ತಿನ್ನಲಿ ಬೇಡವೊ ಸುಂದರಾಂಗನೆ ನಿನಗೆ ಹೊಟ್ಟೆ ನೋಯುವುದಯ್ಯ ||ಅ|| ಬೇಗನೆ ಏಳಯ್ಯ , ಮಣ್ಣಾಟ ಬಿಡೊ ನೀನು ಜೋಗಿ ಬರುತಾನಲ್ಲಿ ಅಂಜಿಸುವುದಕೀಗ || ತಾಯಿ ಮಾತನು ಒತ್ತಿ ಕರದಲಿ ಮಣ್ಣೊತ್ತಿ ಬಾಯಲಿ ಇಟ್ಟನು ಬಾಲಕೃಷ್ಣಯ್ಯನು || ಪೆಟ್ಟು ಕೊಡುವೆ ನಿನಗೆ , ಸಿಟ್ಟು ಬಹಳ ಇದೆ ಮುಟ್ಟಬೇಡೊ ಮಣ್ಣು , ಬೆಣ್ಣೆ ತರುವೆನಯ್ಯ || ಅಮ್ಮಯ್ಯ ಕೇಳೆಲೆ , ಬಾಯಲಿ ಮಣ್ಣಿಲ್ಲ ಗುಮ್ಮನ ಕರೆಬೇಡ , ಸುಮ್ಮನೆ ಇರುತೇನೆ || ಮಗುವೆ ಬಾ ಬಾ ಎಂದು ಬಣ್ಣಿಸಿ ಕರೆದಳು ಮಗುವಿನ ಬಾಯ ಶೋಧಿಸಿದಳು ಬೇಗನೆ || ಬಾಯಲಿ ಕಂಡಳು ಹದಿನಾಲ್ಕು ಲೋಕವ ಕಾಯ ಮರೆತಳಯ್ಯ ಮರುಳಿಗೆ ವಶವಾಗಿ || ಮತ್ತು ಕಂಡಳು ಅವಳು ಗೋಕುಲವೆಲ್ಲವ ಅತ್ತ ಕಂಡಳು ತನ್ನ ಕೃಷ್ಣನ ಬಗಲಲಿ || ಗೋಪ್ಯೇರ ಮನೆಗಳಲಿ ಗೋಪಾಲಕೃಷ್ಣನು ಗೋಪ್ಯೇರ ಮನೆಗಳಂತೆ ದುಡುಕು ಮಾಡುತಲಿರ್ದ || ಬಾಲನು ಬೀದಿಯ ಮಣ್ಣೆತ್ತಿ ಉಣುತಿರ್ದ ಬಾಲೆ ಗೋಪ್ಯಮ್ಮನು ಮಣ್ಣ ತೆಗೆತಿರ್ದಳು || ಕಂದನು ನೀನಲ್ಲ ಕಂದರ್ಪ ಜನಕನೆ ಕಂದನೆ ನಿನ್ನ ಬಾಯ ಮುಚ್ಚಿಕೊಳ್ಳಯ್ಯ ಈಗ || ದೇವದಿದೇವನೆ ದೇವಕಿತನಯನೆ ಭಾವಜನಯ್ಯನೆ ಬಾರಯ್ಯ ದೊರೆಯೆ || ಜಯಗಳಾಗಲಿ ನಮ್ಮ ಕೃಷ್ಣರಾಯಗೆ ಬಹಳ ಜಯಗಳಾಗಲಿ ಅವನ ಭಕ್ತರ ವೃಂದಕೆ || ಲೀಲಾವಿನೋದನು ರುಕ್ಮಿಣೀಲೋಲನು ಲೀಲೆ ತೋರಿದನಂದು ತಂದೆ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು