ಎಷ್ಟು ದುಷ್ಟನೆ, ಯಶೋದೆ

ಎಷ್ಟು ದುಷ್ಟನೆ, ಯಶೋದೆ

(ರಾಗ ಶಂಕರಾಭರಣ. ಅಟ ತಾಳ) ಎಷ್ಟು ದುಷ್ಟನೆ, ಯಶೋದೆ, ನಿನ್ನ ಮಗ ಅಷ್ಟು ಹೇಳ್ವೆನು ಕೇಳೇ ||ಪ|| ಸೃಷ್ಟಿಯೊಳಗೆ ಇಂಥ ಚೇಷ್ಟೆಕೋರನ ಕಾಣೆ ಹುಟ್ಟಿಸಿದಾ ಬ್ರಹ್ಮ ಗಟ್ಟಿಗ ಕಾಣಮ್ಮ ||ಅ.ಪ|| ತೊಟ್ಟು ಹಿಡಿದು ಎನ್ನ ತೊಟ್ಟ ಕುಪ್ಪಸ ಗಂಟು ಬಿಟ್ಟು ಬೇಗ ಮುದ್ದಿಟ್ಟು ಕಠಿನ ಕುಚ ಗಟ್ಯಾಗಿ ಹಿಂಡಿ ತಾನಷ್ಟು ಕುಡಿದು ಬಿಟ್ಟು ನೆಟ್ಟನೆ ನಡೆದ ಶ್ರೀ ಕೃಷ್ಣನೆಂಬವನು || ಅಂಗಳದೊಳಗೆ ರಂಗೋಲೆ ಹಾಕುವಾಗ ಶೃಂಗಾರದಂಗದ ಸೊಗಸ ನೋಡಿ ಕಂಗಳ ಮುಚ್ಚಿನ್ನಾ ಹೆಂಗಳ ವ್ರತವನು ಭಂಗ ಮಾಡಿದ ಶ್ರೀರಂಗನೆಂಬವನು || ನಿತ್ಯವಾಗಿ ಎನ್ನ ಅತ್ತೆಯೆಂದು ಕರೆವ ಎತ್ತ ಹೋಗಲು ಎನ್ನ್ಹತ್ತಿರ ಕೂಡುವ ಕತ್ತರಿಸೆನ್ನ ಸೀರೆ ಬತ್ತಲೆ ಮಾಡಿದ ಚಿತ್ತ ಜಗತಿ ಪ್ರಿಯ ಪಿತನೆನಿಸಿಹನು || ಚಂದವಾಗಿದೆ ಇದು ಮಂದಿರವೆಂದು ಆ- ನಂದದಲ್ಲಿ ಬಂದು ಮಲಗಿ ನಿನ್ನ ಕಂದನಲ್ಲವೆಂದು ಚೆಂದುಟಿ ಸವಿಯುತ ಮುಂದಿನ ಕಾರ್ಯ ಮುಕುಂದ ಮಾಡಿದನು || ಕೆಂಡದಂತವ ಎನ್ನ ಗಂಡ ಕಂಡರೆ ಹಿಡಿದು ಕೊಂಡು ಚಂಡಿಕೆಯ ದಂಡಿಸದೆ ಬಿಡ, ಉ- ದ್ದಂಡ ಪುರಂದರ ವಿಠಲರಾಯನು ಭಂಡನೆ ಪುಂಡರೀಕಾಕ್ಷ ಶ್ರೀ ಕೃಷ್ಣ ||
ದಾಸ ಸಾಹಿತ್ಯ ಪ್ರಕಾರ
ಬರೆದವರು