ಎರವಿನ ಸಿರಿಗೆ ಬಿಮ್ಮನೆ ಬೆರೆತರೆ

ಎರವಿನ ಸಿರಿಗೆ ಬಿಮ್ಮನೆ ಬೆರೆತರೆ

( ರಾಗ ಸೌರಾಷ್ಟ್ರ. ಅಟ ತಾಳ) ಎರವಿನ ಸಿರಿಗೆ ಬಿಮ್ಮನೆ ಬೆರೆತರೆ ನೀರ ಕಡೆದರುಂಟೆ ಬೆಣ್ಣೆ ಜೀವವೆ ಉರಗಳ ಹೆಡೆಯ ನೆಳಲ ಸೇರಿದ ಕಪ್ಪೆ ಸ್ಥಿರಕಾಲ ಬಾಳ್ವುದೆ ಜೀವವೆ ||ಪ|| ಸತಿ ಸುತರೆಂದು ನೆಚ್ಚಲುಬೇಡ ಮನದೊಳು ಹಿತವರೊಬ್ಬರ ಕಾಣೆ ಜೀವವೆ ವೃಥಾ ನೀನು ಕೆಡಬೇಡ ಮರಣವು ತಪ್ಪದು ದಶಕಂಠಗಾದರು ಜೀವವೆ || ಆಸೆ ಮಾಡಲು ಬೇಡ ಭಾಷೆ ತಪ್ಪಲು ಬೇಡನ್ಯ- ಸ್ತ್ರೀ ಸಂಗವು ಬೇಡ ಜೀವವೆ ಏಸೇಸು ಜನ್ಮಾಂತರ ಕಳೆದುಳಿದರು ಈ ಸಾವು ತಪ್ಪದು ಜೀವವೆ || ಆನೆ ಕುದುರೆ ಮಂದಿ ಶಾನೆ ಭಂಡಾರವು ಏನು ಪಡೆದರಿಲ್ಲ ಜೀವವೆ ಮಾನಸಹ ಸರ್ವ ಹರಿಗೆ ಅರ್ಪಣ ಮಾಡಿ ಪುನೀತನಾಗಿರು ಜೀವವೆ || ಕೆರೆಯ ಕಟ್ಟಿಸು ಮತ್ತೆ ಪೂತೋಟ ಹಾಕಿಸು ಸೆರೆಯ ಬಿಡಿಸು ಪುಣ್ಯ ಜೀವವೆ ಕರೆಯದೆ ಮನೆಗೆ ಬಂದವರಿಗನ್ನವ ನೀಡು ಪರಲೋಕ ಸಾಧನ ಜೀವವೆ || ಸತ್ಯವಂತರ ಸಂಗದೊಳಗೆ ಚರಿಸೆ ಮೃತ್ಯು ಅತ್ತತ್ತಲಿರುವಳು ಜೀವವೆ ಸತ್ಯವಂತ ಗುರು ಪುರಂದರವಿಠಲೆನ್ನೆ ಸತ್ತು ಹುಟ್ಟುವದಿಲ್ಲ ಜೀವವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು