ಎಚ್ಚರದಲಿ ನಡೆ

ಎಚ್ಚರದಲಿ ನಡೆ

( ರಾಗ ಆನಂದಭೈರವಿ. ಅಟ ತಾಳ) ಎಚ್ಚರದಲಿ ನಡೆ ಮನವೆ ನಡೆ ಮನವೆ ||ಪ|| ಮುದ್ದು ಅಚ್ಯುತನ ದಾಸರ ಒಡನಾಡು ಮನವೆ ||ಅ|| ಅನ್ನ ದಾನವ ಮಾಡುವುದಿಲ್ಲಿ, ಮೃ- ಷ್ಟಾನ್ನವ ತಂದು ಮುಂದಿಡುವರು ಅಲ್ಲಿ ಅನ್ಯಾಯ ನುಡಿವುದು ಇಲ್ಲಿ, ನಿನ್ನ ಬೆನ್ನ ಚರ್ಮವ ಸೀಳಿ ತಿನಿಸುವರಲ್ಲಿ || ಆಲಯ ಧರ್ಮವು ಇಲ್ಲಿ, ವಿ- ಶಾಲ ವೈಕುಂಠದೊಳಿಡುವರು ಅಲ್ಲಿ ಆಲಯ ಮುರಿಯುವುದಿಲ್ಲಿ, ನಿನ್ನ ಶೂಲದ ಮರವನೇರಿಸಿ ಕೊಲ್ಲುವರಲ್ಲಿ || ಚಾಡಿಯ ನುದಿಯುವುದಿಲ್ಲಿ, ನೀ- ನಾಡಿದ ನಾಲಿಗೆ ಸೀಳುವರಲ್ಲಿ ಬೇಡಬಂದರೆ ಬೈಯುವುದಿಲ್ಲಿ ನಿ- ನ್ನೋಡಾಟ ಕಾಲ ಕತ್ತರಿಸುವರಲ್ಲಿ || ಯಾಚಕರನು ಬೈಯುವುದಿಲ್ಲಿ, ನಿನ್ನ ನಾಚಿಗೆ ತೆಗೆದು ನಾಲಿಗೆ ಸೀಳುವರಲ್ಲಿ ಯಾಚಕರ ಪೂಜೆ ಇಲ್ಲಿ, ನಿನಗೆ ಸ್ವೋಚಿತ ಮಾರ್ಗವನೀಯುವರಲ್ಲಿ || ತಂದೆ ತಾಯಿಗಳ ಬಯ್ಯುವುದಿಲ್ಲಿ, ಹಲ್ಲು (ಹುಲ್ಲು?) ಝಂಡೆಯ ಕಟ್ಟಿ ಸುಡಿಸುವರಲ್ಲಿ ತಂದೆ ತಾಯ್ಗಳ ಪೂಜೆ ಇಲ್ಲಿ, ದೇ- ವೇಂದ್ರನ ಸಭೆಯ ತೋರುವರು ಮುಂದಲ್ಲಿ || ಅತ್ತೆ ಮಾವನ ಬಯ್ಯುವುದಲ್ಲಿ, ನಿನ್ನ ಕತ್ತು ಕರಗಸದಲ್ಲಿ ಕೊಯ್ಯುವರಲ್ಲಿ ಅತ್ತೆ ಮಾವನ ಪೂಜೆ ಇಲ್ಲಿ, ಅವಳ ಉತ್ತಮ ಪತಿವ್ರತೆಯೆಂಬುವರಲ್ಲಿ || ಧರ್ಮವ ಮಾಡುವುದಿಲ್ಲಿ, ನಿನಗೆ ಸು- ಧರ್ಮ ಸಭೆಯ ತೋರುವರು ಮುಂದಲ್ಲಿ ಕರ್ಮಮೋಚನೆಗಳು ಇಲ್ಲಿ, ನಿನಗೆ ನಿರ್ಮಿಸಿಹನು ಕ್ರಿಮಿ ತಿನ್ನುವುದಲ್ಲಿ || ವಂಚನೆ ಮಾಡುವುದಿಲ್ಲಿ, ಕಾದ ಹಂಚಿನ ಪುಡಿಯನು ತಿನಿಸುವರಲ್ಲಿ ಪಂಚಾಮೃತವ ನೀಡುವುದಿಲ್ಲಿ, ನಿನಗೆ ಕಂಚುಕಾಳಂದಿಯ ಪಿಡಿದಿಹರಿಲ್ಲಿ || ಗಂಡನ ಭಕ್ತಿಯು ಇಲ್ಲಿ, ನಮ್ಮ ಪುಂಡರೀಕಾಕ್ಷನು ಒಲಿಯುವನಲ್ಲಿ ಗಂಡನ ನಿಂದಿಪುದಿಲ್ಲಿ, ನಿನ್ನ ಖಂಡ ಖಂಡವ ಕತ್ತರಿಸುವರಲ್ಲಿ || ಮದ್ದಿಟ್ಟು ಕೊಲ್ಲುವುದಿಲ್ಲಿ, ಒ- ದ್ದೊದ್ದು ಹದ್ದು ಕಾಗೆಗ್ಹಾಕುವರಲ್ಲಿ ಕ್ಷುದ್ರ ಬುದ್ದಿಯ ಮಾಡುವುದಿಲ್ಲಿ, ದೊಡ್ಡ ಗುದ್ದಲಿ ಕಾಸಿ ಬೆನ್ನೊಳು ಎಳೆವರಲ್ಲಿ || ಹೆಣ್ಣು ಹೊನ್ನನು ಬಯಸುವುದಿಲ್ಲಿ, ನಿನ್ನ ಕಣ್ಣಿಗೆ ಸುಣ್ಣವ ತುಂಬುವರಲ್ಲಿ ಕನ್ಯಾ ದಾನವ ಮಾಡುವುದಿಲ್ಲಿ, ನಮ್ಮ ಪುರಂದರವಿಠಲ ಒಲಿಯುವನಲ್ಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು