ಎಂದಂಬುಜಮುಖಿ ಗೋಪಿ ಮಗನ ನಡೆಸಿದಳಾನೆ

ಎಂದಂಬುಜಮುಖಿ ಗೋಪಿ ಮಗನ ನಡೆಸಿದಳಾನೆ

(ರಾಗ ಭೂಪಾಳಿ ಅಟತಾಳ) ಎಂದಂಬುಜಮುಖಿ ಗೋಪಿ ಮಗನ ನಡೆಸಿದಳಾನೆ ||ಪ|| ಕ್ಷೀರಸಾಗರದಲ್ಲಿ ವಾಸವಾಗಿ ಮಲಗಿರುವಾನೆ ||ಅ|| ಅಸುರರನು ಸದೆದಾನೆ, ಆಸೆ ಕೊಟ್ಟಳಿದಾನೆ ಶಿಶುವ ಪಿಡಿದಂಬರಕೆ ಸಾಗಿಪಾನೆ ಎಸೆದು ತೃಣಾವರ್ತನ ಭರದಿ ಮುರಿದಾನೆ ಶಿಶುಕೃಷ್ಣ ತುರುಗಳನು ಕಾಯಿದಾನೆ || ಮಣ್ಣು ಮೆದ್ದೆಯೆನಲು ಮಿಗಿಲಬಾಯಿ ತೆರೆದಾನೆ ಕಣ್ಣುಸನ್ನೆಗೆ ಜಗವ ಪಾಲಿಪಾನೆ ಚಿಣ್ಣರೊಡನಾಡುತ ಚೆಲುವ ತುರುಗಾಯಿದಾನೆ ಬಣ್ಣಬಾಗೆಸುರರನು ಬಿರಿದು ಮುರಿದಾನೆ || ಮಡುವ ಕಲಕುತ ಕಾಳಿಹೆಡೆಕುಸಿಯ ತುಳಿದಾನೆ ಮಡದಿಯರ ವಸ್ತ್ರವನು ಬಿಡದೆ ಕದ್ದಾನೆ ತಡೆಯದೆ ಯಜ್ಞಾನ್ನಗಳ ಉಂಡು ಒಡನೆ ಮುಕ್ತಿಗೆಯ್ದಾನೆ ಕಡುಮುಳುಗಿ ಗಿರಿಯನೆ ಕೊಡೆಯ ಪಿಡಿದಾನೆ || ಮನೆನನೆಗೆ ಹೋಗಿ ಕೆನೆಮೊಸರು ಸವಿದಾನೆ ಎನುತಾಗೆ ಪಾಲುಬೆಣ್ಣೆಯನು ಸುರಿದಾನೆ ವನಿತೆಯರ ವರ್ಜಿಸಲು ಓಡಿ ಮರೆಹೊಕ್ಕಾನೆ ಚಿನುಮಯಾಂತಕ ಕೃಷ್ಣ ಚೆಲುವ ತುರುಗಾಯಿದಾನೆ || ಗೊಲ್ಲಮಕ್ಕಳ ಕೂಡಿ ಗೋವುಗಳ ಕಾಯಿದಾನೆ ಕಡಲೆ ಅನ್ನವನುಂಡು ಕಡುಸೊಕ್ಕಿದಾನೆ ಎಲ್ಲರ ಹೃದಯದಲ್ಲಿ ವಾಸವಾಗಿರುತಾನೆ ಅಂದು ನಾಟಕ ಕೃಷ್ಣ ಚೆಲುವ ತುರುಗಾಯಿದಾನೆ || ಕೊಳಲ ಧ್ವನಿಗಳಿಗೆ ಹೆಂಗಳನು ಭ್ರಮೆಗೆಯ್ದಾನೆ ಲಲನೆಮುಖಿಬಾಲೇರ ಬಳಲಿಪಾನೆ ನಳಿನಮುಖಿಯರ ಹರುಷಗೊಳಿಸಿ ಸುಖವೀವಾನೆ ಜಲದೊಳಗೆ ಹೆಂಗಳನು ಭ್ರಮಿಸಿ ಮುಕ್ತಿಗೆಯ್ದಾನೆ || ಅಂದು ಮಧುರೆಗೆ ಪೋಗಿ ಬಲು ಬಿಲ್ಲನೆ ಮುರಿದಾನೆ ಕೊಂದು ರಜಕನ ಕುಬುಜೆಯ ಅಂದಗೆಯ್ದಾನೆ ಅಂದು ಮಲ್ಲರ ಮಡುಹಿ ಮಾವನ ಕೊಂದಾನೆ ತಂದೆ ಶ್ರೀಪುರಂದರವಿಠಲ ಮರಿಯನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು