ಆದಿತತ್ವದ ಸಾರ ತಿಳಿಯದೆ ಭೇದಾಭೇದವಿದ್ಯಾತಕೆ

ಆದಿತತ್ವದ ಸಾರ ತಿಳಿಯದೆ ಭೇದಾಭೇದವಿದ್ಯಾತಕೆ

(ಭೈರವಿರಾಗ ದಾದರಾ ತಾಳ) ಆದಿತತ್ವದ ಸಾರ ತಿಳಿಯದೆ ಭೇದಾಭೇದವಿದ್ಯಾತಕೆ ವೇದ ಉಪನಿಷದ್ವಾಕ್ಯವರಿಯದೆ ಗಾಧ ಸೂಸುವದ್ಯಾತಕೆ ಹರಿಭಕುತಿಗೆ ||ಧ್ರುವ|| ಮೂಲದಲಿ ಮನಮೈಲ ತೊಳಿಯದೆ ಜಲಮುಣುಗುವದಿದ್ಯಾತಕೆ ಬಲುವಭಾವದ ಕೀಲ ತಿಳಿಯದೆ ಮಾಲೆಜಪ ಕೈಯಲ್ಯಾತಕೆ ನೆಲೆಯುಗೊಳ್ಳದೆ ಮೂಲಮೂಲ ಮೂರ್ತಿಯ ಮ್ಯಾಲೆ ತಲೆ ಮುಸುಕ್ಯಾತಕೆ ಹಲವು ಜನ್ಮದ ಹೊಲಿಯು ತೊಳಿಯದೆ ಶೀಲ ಸ್ವಯಂಪಾಕ್ಯಾತಕೆ ||೧|| ಹರಿಯ ಚರಣಾಂಬುಜವನರಿಯದೆ ಬರಿಯ ಮಾತಿನ್ಯಾತಕೆ ಗುರುವಿನಂಘ್ರಿಯ ಗುರುತವಿಲ್ಲದೆ ಶರಣಸಾವಿರವ್ಯಾತಕೆ ತುರಿಯಾವಸ್ಥೆಯೊಳರಿತು ಕೂಡದೆ ತೋರಿಕೆಯ ಡಂಭವ್ಯಾತಕೆ ತರಣೋಪಾಯದ ಸ್ಮರಣೆ ಇಲ್ಲದೆ ತರ್ಕಭೇದಗಳ್ಯಾತಕೆ ||೨|| ಅಂತರಾತ್ಮದ ತಂತುವಿಡಿಯದೆ ಗ್ರಂಥಪಠಣಗಳ್ಯಾತಕೆ ಕಂತುಪಿತನಾರ್ಚನೆಯನರಿಯದ ತಂತ್ರಮಂತ್ರಗಳ್ಯಾತಕೆ ಸಂತತ ಚಿಂತಾಯಕನಾ ನೆನೆಯದೆ ಮಂತ್ರಮಾಲೆಗಳ್ಯಾತಕೆ ಪಂಥವರಿಯದೆ ಪರಮಯೋಗದಾನಂತವ್ರತವಿದುವ್ಯಾತಕೆ ||೩|| ಸೋಹ್ಯವರಿಯದೆ ಶ್ರೀಹರಿಯ ನಿಜಬಾಹ್ಯರಂಜನೆ ಏತಕೆ ಗುಹ್ಯ ಮಹಾಮಹಿಮೆಯು ತಿಳಿಯದೆ ದೇಹ ಅಭಿಮಾನ್ಯಾತಕೆ ಸಾಹ್ಯವಿಲ್ಲದೆ ಶ್ರೀಹರಿಯ ದೇಹದಂಡನಿದ್ಯಾತಕೆ ಮಹಾವಾಕ್ಯದಿತ್ಯರ್ಥವರಿಯದೆ ಸಾಯಸ ಬರುವದ್ಯಾತಕೆ ||೪|| ಭಾಗ್ಯ ಭಕುತಿ ವೈರಾಗ್ಯವಿದು ನಿಜಯೋಗಾನಂದದ ಭೂಷಣ ಶ್ಲಾಘ್ಯವಿದು ತಾ ಇಹಪರದೊಳು ಸುಗಮ ಸುಪಥ ಸಾಧನ ಭೋಗ್ಯಭೋಗದ ಸಾರ ಸುಖವಿದು ಯೋಗಿ ಮಾನಸ ಜೀವನ ಬಗೆಬಗೆಯಲನುಭವಿಸಿ ಮಹಿಪತಿಯೋಗ್ಯನಾಗೊ ಸನಾತನ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು