ಅರಿತವರಿಗತಿಸುಲಭ ಹರಿಯ ಪೂಜೆ

ಅರಿತವರಿಗತಿಸುಲಭ ಹರಿಯ ಪೂಜೆ

----ರಾಗ ಕಾಂಬೋಧಿ (ಬಾಗೇಶ್ರೀ) ಝಂಪೆತಾಳ ಅರಿತವರಿಗತಿಸುಲಭ ಹರಿಯ ಪೂಜೆ ||ಪ|| ಅರಿಯದವ ನಿರ್ಭಾಗ್ಯತರ ಲೋಕದೊಳಗೆ ||ಅ.ಪ|| ಹೈಮಾಂಡ ಮಂಟಪವು ಭೂಮಂಡಲವೆ ಪೀಠ ಸೋಮಸೂರ್ಯರೆ ದೀಪ ಭೂರುಹಗಳು ಚಾಮರಗಳತಿ ವಿಮಲ ವ್ಯೋಮ ಮಂಡಲ ಛತ್ರ ಯಾಮಾಷ್ಟಕಗಳಷ್ಟದಳದ ಪದ್ಮವು ಎಂದು ||೧|| ಮಳೆಯೆ ಮಜ್ಜನವು ದಿಗ್ವಲಯಂಗಳೇ ವಸನ ಮಲಯಜಾನಿಲವೆ ಶ್ರೀಗಂಧಧೂಪ ಇಳೆಯೊಳಗೆ ಬೆಳೆವ ಧಾನ್ಯಗಳೆಲ್ಲ ನೈವೇದ್ಯ ಥಳಥಳಿಪ ಮಿಂಚು ಕರ್ಪೂರದಾರತಿ ಎಂದು ||೨|| ನಕ್ಷತ್ರಮಂಡಲವೆ ಲಕ್ಷದೀಪಾವಳಿಯು ದಕ್ಷಿಣೋತ್ತರ ಅಯನಗಳೆರಡು ಬನವು ವೃಕ್ಷದಲ್ಲಿಜ ಸಫಲ ಪುಷ್ಪಗಳೊಳಗೆ ಲಕ್ಷ್ಮೀ ವಕ್ಷವ್ಯಾಪಕನಾಗಿ ತಾನೆ ಭೋಗಿಪನೆಂದು ||೩|| ಗುಡುಗು ಸಪ್ತಸಮುದ್ರ ಸಿಡಿಲು ಘೋಷವೆ ವಾದ್ಯ ಪೊಡವಿಪರಿಗೀವ ಕಪ್ಪವೆ ಕಾಣಿಕೆ ಉಡುಪ ಭಾಸ್ಕರರ ಮಂಡಲಗಳಾದರ್ಶಗಳು ನಡೆವ ನಡೆಗಳು ಹರಿಗೆ ಬಿಡದೆ ನರ್ತನವೆಂದು ||೪|| ಯುಗಚತುಷ್ಟಯವೆ ಪರಿಯಂಕ ಪಾದಗಳಬ್ದ ಬಿಗಿವ ಪಟ್ಟೆಗಳು ಕಂದಾಯ ಕಶಿಪು ಗಗನ ಮೇಲ್ಕಟ್ಟು ಸಂಕ್ರಮಣಗಳೆ ಬಡವುಗಳು ಭಗವಂತಗುಪಬರ್ಹಣ ಷಡೃತುಗಳೆಂದು ||೫|| ನಾಗವಲ್ಲಿಯೆ ದಿವಸಗಳು ಕ್ರಮುಕ ಕರಣಗಳು ಯೋಗಗಳೆ ಚೂರ್ಣ ರಾತ್ರೆಯೆ ಕಾಂಶುಕ ಭೋಗವತಿ ಜಲವೆ ಗಂಡೂಪೋದಕ ಶುದ್ಧ ಸಾಗರವೆ ಪಾದ್ಯ ವಿರಾಟ್ ರೂಪನಿಗೆಂದು ||೬|| ಶಾತ ಕುಂಭೋದರಾಂಡಂತಸ್ಥರೂಪ ಸಂ- ಪ್ರೀತಿಯಿಂದಲೆ ಯಜಿಸಿ ಮೋದಿಸುವರ ವೀತಶೋಕರ ಮಾಡಿ ಸಂತೈಸುತಿಹ ಜಗ- ನ್ನಾಥವಿಠ್ಠಲ ಒಲಿದು ಸರ್ವಕಾಲಗಳಲ್ಲಿ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು