ಅಪಮೃತ್ಯು ಪರಿಹರಿಸೊ ಅನಿಲ ದೇವ

ಅಪಮೃತ್ಯು ಪರಿಹರಿಸೊ ಅನಿಲ ದೇವ

( ರಾಗ ಕಾಂಬೋಧಿ(ಭೂಪ) ಝಂಪೆತಾಳ) ಅಪಮೃತ್ಯು ಪರಿಹರಿಸೊ ಅನಿಲದೇವ ಕೃಪಣ ವತ್ಸಲನೆ ಕಾವರ ಕಾಣೆ ಜಗದೊಳಗೆ ||ಪ|| ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರು ಎನಗಿಲ್ಲ ಆವಾವ ಜನುಮದಲ್ಲಿ ಅನುದಿನವು ಎಮ್ಮನುದಾಸೀನ(/ಎಮ್ಮನೀನುದಾಸೀನ) ಮಾಡುವುದು ಅನುಚಿತವು ನಿನಗೆ ಸಜ್ಜನ ಶಿಖಾಮಣಿಯೆ ||೧|| ಕರಣಾಭಿಮಾನಿಗಳು ಕಿಂಕರರು ಮೂರ್ಲೋಕ ದೊರೆ ನಿನ್ನೊಳಗಿಪ್ಪ ಪರ್ವಕಾಲ ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ ಗುರುವರನೆ ನೀ ದಯಾಕರನೆಂದು ಬಿನ್ನೈಪೆ ||೨| ಭವರೋಗಮೋಚಕನೆ ಪವಮಾನರಾಯ ನಿ- ನ್ನವರವನು ನಾನು ಮಾಧವಪ್ರಿಯನೆ ಜವನ ಬಾಧೆಯ ಬಿಡಿಸು ಅವನಿಯೊಳು ಸುಜನರಿಗೆ ದಿವಿಜಗಣ ಮಧ್ಯದೊಳು ಪ್ರವರ ನೀನಹುದೋ ||೩|| ಜ್ಞಾನಾಯು ರೂಪಕನು ನೀನಹುದೊ, ವಾಣಿ ಪಂ- ಚಾನನಾದ್ಯಮರರಿಗೆ ಪ್ರಾಣದೇವ ದೀನವತ್ಸಲನೆಂದು ನಾನಿನ್ನ ಮೊರೆಹೊಕ್ಕೆ ದಾನವಾರಣ್ಯ ಕೃಶಾನು ಸರ್ವದಾ ಎಮ್ಮ ||೪|| ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು ಸಾಧಾರಣವಲ್ಲ ಸಾಧುಪ್ರಿಯನೆ ವೇದವಾದೋದಿತ ಜಗನ್ನಾಥ ವಿಠಲನ ಪಾದಭಜನೆಯನಿತ್ತು ಮೋದಕೊಡು ಸತತ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು