ದಾಸರ ಲಕ್ಷ್ಮೀನಾರಾಯಣರಾಯರು

ಅಟ್ಟಮೇಲೆ ಒಲೆಯು ಉರಿವಂತೆ ಎನಗಿನ್ನು

ಅಟ್ಟಮೇಲೆ ಒಲೆಯು ಉರಿವಂತೆ ಎನಗಿನ್ನು
ಕೆಟ್ಟ ಮೇಲೆ ಬುದ್ಧಿ ಬಂದಿತೀಗ
ಉದ್ದುಕನ್ನಡಿ ಮೇಲೆ ಉರುಳುವೋಲ್ ಷಡ್ವರ್ಗ
ಕೆದ್ದು ಬಿದ್ದೆನು ಬರಿಯ ಗರ್ವದಿಂದ
ಮರುಳಹಂಕಾರದಲಿ ಮಾಯಕ್ಕೆ ಸಿಲುಕಿನ್ನು
ಮರೆತುಬಿಟ್ಟೆನು ನಿನ್ನ ಮಹಿಮೆಯನ್ನು
ಜ್ಞಾನಸುಖ ಪರಿಪೂರ್ಣ ಏನು ಮಾಡಲು ಇನ್ನು
ಶ್ರೀನಿವಾಸನೆ ನಿನ್ನ ದಾಸ ನಾನು
ಸಾರಿದರ ಬಿಡನೆಂಬ ಬಿರುದನುಳುಹೊ
ಆರಿಗಾರಿಲ್ಲ ನೀನಿಲ್ಲದಿನ್ನು
ನೀರಿನೊಳಗದ್ದು ಕ್ಷೀರದೊಳಗದ್ದು
ಭಾರ ನಿನ್ನದು ಕಾಣೊ ಧೀರ ಶ್ರೀಕಾಂತ

--ದಾಸರ ಲಕ್ಷ್ಮೀನಾರಾಯಣರಾಯರು

ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂದು ಶ್ರುತಿರಾಶಿಯನು ತಂದು ಕೊಟ್ಟವರಾರು


ಅಂದು ಶ್ರುತಿರಾಶಿಯನು ತಂದು ಕೊಟ್ಟವರಾರು
ಸಿಂಧುಮಥನದಿ ಸುಧೆಯನಿತ್ತವರಾರು
ನೊಂದು ಮುಳುಗಲು ವಸುಂಧರೆಯ ತಂದವರಾರು
ಕಂದ ಕರೆಯಲು ಬಂದ ಬಂಧುವಾರು
ಇಂದ್ರನೈಶ್ವರ್ಯವನು ತಂದು ಕೊಟ್ಟವರಾರು
ಮಂದನೃಪರನು ಕಾಡಿಕೊಂದವರಾರು
ಸುಂದರಾಂಗಿಯ ಸೆರೆಯ ಬಂದು ಬಿಡಿಸಿದರಾರು
ಕುಂದುಗಳನೆಣಿಸದೆ ಕಾವದಾರು
ನಂದಿನೇರಿದನಿಂಗೆ ಗೆಲುವಿತ್ತವರಾರು
ಬಂದ ಭಯಗಳನೆಲ್ಲ ಬಿಡಿಸುವರಾರು
ಮುಂದೆ ಮುಕ್ತಿಯನೀವ ಶಕ್ತ ಪ್ರಭುವಾರು
ತಂದೆ ಶ್ರೀಕಾಂತನಲ್ಲದೆ ಮತ್ತೆ ಯಾರು

--ದಾಸರ ಲಕ್ಷ್ಮೀನಾರಾಯಣರಾಯರು



ದಾಸ ಸಾಹಿತ್ಯ ಪ್ರಕಾರ
ಬರೆದವರು