ಮುಂಡಿಗೆ -2

ಮುಂಡಿಗೆ -2

ಮುಂಡಿಗೆ -2 ಓಹೋ ಎನ ಜೀವ ಮೈಯೆಲ್ಲ ನವಗಾಯ ||ಪ|| ಗಾಯ ಕಟ್ಟುವರಿಲ್ಲ ಗಾಳಿ ಹಾಕುವರಿಲ್ಲ. ||ಅ.ಪ.|| ಮಾಡಿಲ್ಲ ಮಳೆಯಿಲ್ಲ ಮರದ ಮೇಲೆ ನೀರ ಕಂಡೆ ಕಾಡು ಸುಡುವುದ ಕಂಡೆ ಬೂದಿಯ ಕಾಣಲಿಲ್ಲ. ||೧|| ಬಿತ್ತಲಿಲ್ಲ ಬೆಳೆಯಲಿಲ್ಲ ನೆಟ್ಟು ನೀರ ತೋರಲಿಲ್ಲ ಹೊತ್ತುಕೊಂಡು ತಿರುಗಿದೆ ರೊಕ್ಕದಾ ಪ್ರಾಣಿಯನು. ||೨|| ಅಡಿಕೆಯಷ್ಟು ಆಕಳಣ್ಣ ಹಿಡಿಕೆಯಷ್ಟು ಕೆಚ್ಚಲಣ್ಣ ಒಡನೆ ಕರೆದಾರ ಕರಿತೈತಿ ರಂಜಣಿಗಿ ಹಾಲಣ್ಣ. ||೩|| ಮೂರು ಮೊಳದಾ ಬಳ್ಳಿಗೆ ಆರು ಮೊಳದ ಕಾಯಣ್ಣ ಆರು ಹತ್ತರ ಮೊಳದ, ಕಾಯಿಕೊಯ್ಯುವ ಕುಡುಗೋಲಣ್ಣ. ||೪|| ಊರ ಮುಂದೆ ಹಿರಣ್ಯಕನ ಕೊರಳ ಕೊಯ್ವದ ಕಂಡೆ ಕೊರಳಕೊಯ್ವದ ಕಂಡೆ ರಕುತವ ಕಾಣಲಿಲ್ಲ. ||೫|| ಕಾಗಿನೆಲೆಯ ಕನಕದಾಸ ಹೇಳಿದಂಥ ಮುಂಡಿಗೆಯ ಮಿಗೆ ಒಳ ಹೊರಗೆಲ್ಲ ಬಲ್ಲ ಬಾಡದಾದಿ ಕೇಶವರಾಯ. ||೬|| *************************** ಭಾವ:- ಸ್ಥೂಲ, ಸೂಕ್ಷ್ಮ, ಕಾರಣ ದೇಹಗಳನ್ನೊಳಗೊಂಡ ಈ ಮನುಷ್ಯ ದೇಹದ ವೈಚಿತ್ರ್ಯಗಳನ್ನು ಕನಕದಾಸರು ಈ ಮುಂಡಿಗೆಯಲ್ಲಿ ತಿಳಿಸಿದ್ದಾರೆ. ಜನಸಾಮಾನ್ಯರನ್ನು ಭೌತಸ್ಥರದಿಂದ ಆಧ್ಯಾತ್ಮ ಸ್ತರದತ್ತ ಎತ್ತುವಂಥ, ಪ್ರಜ್ಞಾವಂತರನ್ನಾಗಿ ಮಾಡುವಂಥ ಪ್ರಯೋಗವನ್ನು ಇಲ್ಲಿ ಕನಕದಾಸರು ಮಾಡಿದ್ದಾರೆ ಎನ್ನಬಹುದು. ಅರ್ಥ ೧. ಮಾಡಿಲ್ಲ....ನೀರನ್ನು ಕಂಡೆ ಭೌತಾರ್ಥ : ಎಳನೀರು, ಆಧ್ಯಾತ್ಮದ ಅರ್ಥ : ಬೆವರು, ಕಣ್ಣೀರು. ಕಾಡು.......ಬೂದಿಯ ಕಾಣಲಿಲ್ಲ ಭೌತಾರ್ಥ : ಕರ್ಪೂರ, ಆಧ್ಯಾತ್ಮದ ಅರ್ಥ : ಜ್ಞಾನಾಗ್ನಿಯಿಂದ ಅರಿಷಡ್ವರ್ಗಗಳ, ಕರ್ಮಗಳ ದಹನ ೨. ಬಿತ್ತಲಿಲ್ಲ.... ಪ್ರಾಣಿಯನು ಭೌತಾರ್ಥ ; ತಲೆಗೂದಲು, ಆಧ್ಯಾತ್ಮದ ಅರ್ಥ : ಆತ್ಮ ೩. ಅಡಿಕೆ.........ಹಾಲಣ್ಣ ಭೌತಾರ್ಥ : ಜೇನುಹುಳು, ಜೇಂಗೊಡ, ಜೇನುತುಪ್ಪ, ಆಧ್ಯಾತ್ಮದ ಅರ್ಥ : ಗುರುಬೋಧೆ ಸೂಕ್ಷ್ಮವಾಗಿದ್ದರೂ, ಅದನ್ನು ಗ್ರಹಿಸುವ ಶಿಷ್ಯನ ಸಾಮರ್ಥ್ಯಕ್ಕನುಗುಣವಾಗಿ ಅದರ ಗಾತ್ರ ಹಿಗ್ಗುತ್ತದೆ. ಕರೆಯುವವರ ಶಕ್ತಿಯನುಸಾರ ಜೇನನ್ನು ನೀಡುತ್ತದೆ. ರಂಜಣಿಗಿ = ಮಣ್ಣಿನ ಪಾತ್ರೆ ೪. ಮೂರು ಮೊಳ......ಕುಡುಗೋಲಣ್ಣ ಭೌತಾರ್ಥ : ಸೋರೆಕಾಯಿ, ಜವಳಿಕಾಯಿ ಮುಂತಾದವು, ಆಧ್ಯಾತ್ಮದ ಅರ್ಥ : ಮೂರು ಗುಣಗಳಿಂದ ಕೂಡಿದ ಈ ದೇಹವೆಂಬ ಬಳ್ಳಿಗೆ ಷಡ್‍ವೈರಿಗಳೆಂಬ ಆರು ಮೊಳದ ಕಾಯುಂಟು. ಅದನ್ನು ಕೊಯ್ಯುವ ಕುಡುಗೋಲು ಹದಿನಾರು ಮೊಳ (ಜ್ಞಾನೇಂದ್ರಿಯಗಳು, ಕರ್ಮೇಂದ್ರಿಯಗಳು ಹಾಗೂ ಮನಸ್ಸು) ೫. ಊರ ಮುಂದೆ.......ರಕುತವ ಕಾಣಲಿಲ್ಲ ಭೌತಾರ್ಥ : ಹೇನು, ಇರುವೆ ಮುಂತಾದ ಕ್ರಿಮಿಗಳು, ಆಧ್ಯಾತ್ಮದ ಅರ್ಥ : ಪ್ರತಿಯೊಬ್ಬನ ಸೂಕ್ಷ್ಮ ದೇಹದಲ್ಲೂ ಅಭಿಮಾನಿ ದೇವತೆಯಾದ ಹಿರಣ್ಯಗರ್ಭನಿಗೆ ಅಹಂಕಾರವೇ ಶಿರಸ್ಸಾಗಿದೆ. ಅದನ್ನು ವಿಚಾರ ಖಡ್ಗದಿಂದ ಕತ್ತರಿಸಿದುದನ್ನು ಕಂಡೆನಾದರೂ ರಕ್ತ ಕಾಣಲಿಲ್ಲ.