ಸ್ಮರಿಸಿದವರನು ಕಾಯ್ವ ನಮ್ಮ ಸೂರ್ಯಾನೇಕ ಪ್ರಭಾವ

ಸ್ಮರಿಸಿದವರನು ಕಾಯ್ವ ನಮ್ಮ ಸೂರ್ಯಾನೇಕ ಪ್ರಭಾವ

(ಭೈರವಿ ರಾಗ ಆದಿತಾಳ)

 

ಸ್ಮರಿಸಿದವರನು ಕಾಯ್ವ ನಮ್ಮ ಸೂರ್ಯಾನೇಕ ಪ್ರಭಾವ

ಸುರಮುನಿಗಳ ಸಂಜೀವ ಶ್ರೀ ವೆಂಕಟ ನಮ್ಮನು ಪೊರೆವ ||ಪ||

 

ವೈಕುಂಠದಿಂದ ಬಂದು ಶೇಷಾಚಲದಲಿ ನಿಂದು

ಭಕ್ತರ ಪಾಲಿಪೆನೆಂದು ಅಭಯ ದಯಾಕರ ಸಿಂಧು

ಭಕುತಿ ಮುಕುತಿಯೀವ ಮತ್ಕುಲದೇವನೆ

ಸಕಲ ಜನಸೇವಿತ ಘನ ಪರಿಪೂರ್ಣನೆ

ವಿಕಸಿತ ಕಮಲನಯನ ಕಂಜನಾಭನೆ

ಪ್ರಕಟಿತ ಶುಭಕೀರ್ತಿಯಿಂದ ಮೆರೆವನೆ ||೧||

 

ಜ್ಞಾನಿಗಳ ಗೋಚರನೆ ತನ್ನ ಧ್ಯಾನಿಪರ ಮನೋಹರನೆ

ದಾನವರ ಸಂಹರನೆ ಮಹಾದೈನ್ಯಾದಿಗಳುದ್ಧರನೆ

ಆನಂದಮಯನೆ ಅನೇಕಾವತಾರನೆ

ಅನುದಿನ ನೆನೆವರ ಹೃದಯಮಂದಿರನೆ

ಘನಮಾಣಿಕ ಭೂಷಣ ಶೃಂಗಾರನೆ

ತನುವಿನ ಕ್ಲೇಶ ದುರಿತಸಂಹರನೆ ||೨||

 

ಜಯತು ದೋಷವಿನಾಷ ಜಯ ಮಹಿಮಾವಿಶೇಷ

ಜಯತು ಲಕುಮೀ ಪರಿತೋಷ ಜಯ ಶ್ರೀ ವೆಂಕಟೇಶ

ಜಯ ಕಮಲಜಜನಕನೆ ಜಯ ಜಗದೀಶ

ಜಯ ಗಜವರದ ಪಾಲಿತ ಪುಣ್ಯಘೋಷ

ಜಯತು ಜನಾರ್ದನ ಜಗನ್ಮೋಹನ ವೇಷ

ಜಯ ರಂಗವಿಠಲಕರುಣಾವಿಲಾಸ ||೩||

ದಾಸ ಸಾಹಿತ್ಯ ಪ್ರಕಾರ
ಬರೆದವರು