ಶ್ರೀ ಯದುವರ ಪರಿಪಾಲಿಸು ಎನ್ನನು

ಶ್ರೀ ಯದುವರ ಪರಿಪಾಲಿಸು ಎನ್ನನು

(ರಾಗ ಘಂಟಾ ಆದಿತಾಳ) ಶ್ರೀ ಯದುವರ ಪರಿಪಾಲಿಸು ಎನ್ನನು ಭಕ್ತ ಕಾಮಧೇನು ಕಾಯದೆ ನೀ ಭಕ್ತನ ಬಿಟ್ಟರೆ ನಾನು ಮಾಡುವದೇನು ||ಪ|| ಪೆತ್ತ ತಾಯಿಯು ತನ್ನ ಶಿಶುವ ಕೊಲ್ಲಲು ಮತ್ತೆ ಕಾಯ್ವರಾರೈ ಸುತ್ತಿದ ಬೇಲಿಯ ಎದ್ದು ಪೈರ ಮೇಯೆ ಮತ್ತೆ ಕಾಯ್ವರಾರೈ ಕತ್ತಲೆಯೊಳು ಮೇಲೆ ಗಗನವು ಬಿದ್ದರೆ ಮತ್ತೆ ಕಾಯ್ವರಾರೈ ಉತ್ತಮವಾದ ಈ ಅನ್ನವು ವಿಷವಾಗೆ ಮತ್ತೆ ಕಾಯ್ವರಾರೈ ||೧|| ವಾರಿದವೃಂದಗಳು ವಹ್ನಿಯ ಕರೆದರೆ ಮತ್ತೆ ಕಾಯ್ವರಾರೈ ಧಾರುಣಿಯರಸನು ಪ್ರಜೆಗಳ ಕೊಲ್ಲಲು ಮತ್ತೆ ಕಾಯ್ವರಾರೈ ನಾರಿಯು ಮಲಗಿದ ಪತಿಯ ಕೊರಳ ಕೊಯ್ಯೆ ಮತ್ತೆ ಕಾಯ್ವರಾರೈ ಶೂರ ಪತಿಯು ತನ್ನ ಮಡದಿಯ ಕೊಂದೊಡೆ ಮತ್ತೆ ಕಾಯ್ವರಾರೈ ||೨|| ವೈಕುಂಠನಗರದ ನರಸಿಂಹರೂಪನೆ ನೀನೆ ಲೋಕಬಂಧು ಲೋಕಂಗಳ ಪಾಲನ ಕಾರ್ಯವನು ಗೈವರು ಯಾರು ಪೇಳು ಇಂದು ಲೋಕಂಗಳ ಕೆಲಸವನು ಮಾಡುವ ಮನುಜಗೆ ತನ್ನ ಕೆಲಸ ಹಿರಿದೆ ಸಾಕು ಸಾಕು ಸರ್ವೇಶ ನೀ ಎನ್ನನು ಸಾಕು ಸಾಕು ಸಾರಿದೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು