ತನ್ನ ಪ್ರಾಪ್ತಿಯ ಫಲವ ತಾನರಿಯದೆ

ತನ್ನ ಪ್ರಾಪ್ತಿಯ ಫಲವ ತಾನರಿಯದೆ

( ಮುಖಾರಿ ರಾಗ ಝಂಪೆ ತಾಳ) ತನ್ನ ಪ್ರಾಪ್ತಿಯ ಫಲವ ತಾನರಿಯದೆ ಇನ್ನು ನುಡಿವುದು ಮೂರ್ಖತನವಲ್ಲವೆ ||ಪ|| ಸರಸಿಜೋದ್ಭವನು ಫಣೆ*ಯೊಳು ಬರೆದು ನಿರ್ಮಿಸಿದ ತೆರನೊಂದು ಬೇರುಂಟೆ ತಾನರಿಯದೆ ಕರಕೊಂಡು ಕಂಡವರ ಕೂಡೆ ತಾನಾಡಿದರೆ ನೆರೆ ದುಃಖವಿದು ಬಿಟ್ಟು ಕಡೆಗೆ ತೊಲಗುವುದೆ ||೧|| ಬಡತನವು ಬಂದಲ್ಲಿ ಪೂರ್ವದಲಿ ತಾ ಮುನ್ನ ಪಡೆದಂಥ ವಿಧಿ ಬೆನ್ನ ಬಿಡಲರಿವುದೆ ಅಡಿಗಡಿಗೆ ಶೋಕದಲಿ ಅವರಿವರಿಗುಸುರಿದರೆ ಬಡತನವು ತಾ ಮುನ್ನ ಕಡೆಗೆ ತೊಲಗುವುದೆ ||೨|| ದೆಸೆಗೆಟ್ಟು ನಾಡದೈವಗಳಿಗೆ ಹಲುಬಿದಡೆ ನೊಸಲ ಬರಹವ ತೊಡೆದು ತಿದ್ದಲಳವೆ ವಸುಧೀಶ ಕಾಗಿನೆಲೆಯಾದಿಕೇಶವನಂಘ್ರಿ ಬಿಸಜ**ವನು ಕಂಡು ನೀ ಸುಖಿಯಾಗು ಮನುಜ ||೩|| (*ಫಣೆ=ಹಣೆ , **ಬಿಸಜ=ಕಮಲ, ತಾವರೆ)
ದಾಸ ಸಾಹಿತ್ಯ ಪ್ರಕಾರ
ಬರೆದವರು