ಕೀರ್ತಿಸಿ ಜನರೆಲ್ಲ ಹರಿಯ ಗುಣ

ಕೀರ್ತಿಸಿ ಜನರೆಲ್ಲ ಹರಿಯ ಗುಣ

(ರಾಗ ಸುರಟಿ, ಆದಿತಾಳ) ಕೀರ್ತಿಸಿ ಜನರೆಲ್ಲ ಹರಿಯ ಗುಣ ||ಪ|| ಕೀರ್ತಿಸಿ ಜನರು ಕೃತಾರ್ಥರಾಗಿರೊ ||ಅ.ಪ|| ಅವನು ವನದೊಳಗೆ ನಿತ್ಯದಿ ಬಾಹ ಜನರ ಬಡಿದು ಜೀವನ ಮಾಳ್ಪ ಕಿರಾತನು ಕೀರ್ತಿಸೆ ತಾ ಒಲಿದಾತನ ಕೋವಿದನೆನಿಸಿದ ||೧|| ಅವನ ಪಾದರಜ ಸೋಕಲು ಆ ವನಿತೆಯ ಜಡ ಭಾವನ ತೊಲಗಿಸಿ ಆ ವನಿತೆಯನು ಪಾವನ ಮಾಡಿದ ದೇವಾಧಿದೇವನ ||೨|| ಅಂದು ಶಬರಿ ತಾನು ಪ್ರೇಮದಿ ತಿಂದ ಫಲವ ಕೊಡಲು ಕುಂದು ನೋಡದೆ ಆನಂದದಿ ಗ್ರಹಿಸಿ ಕುಂದದ ಪದವಿಯನಂದು ಕೊಟ್ಟವನ ||೩|| ದುಷ್ಟರಾವಣ ತಾನು ಸುರರಿಗೆ ಕಷ್ಟಬಡಿಸುತಿರಲು ಪುಟ್ಟಿ ಭುವನದೊಳು ಕುಟ್ಟಿ ಖಳರ ಸುರ- ರಿಷ್ಟವ ಸಲಿಸಿದ ಸೃಷ್ಟಿಗೊಡೆಯನ ||೪|| ತನ್ನ ನಂಬಿದ ಜನರ ಮತ್ತೆ ತಾ- ನನ್ಯರಿಗೊಪ್ಪಿಸದೆ ಮುನ್ನಿನಘವ ಕಳೆದಿನ್ನು ಕಾಪಾಡುವ ಘನ್ನಮಹಿಮ ಶ್ರೀರಂಗವಿಠಲನ್ನ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು