ಏನೆಂದು ಕಾಣೆನು ಎನಗುಸುರು ಹರಿಯೆ

ಏನೆಂದು ಕಾಣೆನು ಎನಗುಸುರು ಹರಿಯೆ

(ರಾಗ ಕಲ್ಯಾಣಿ ಝಂಪೆತಾಳ) ಏನೆಂದು ಕಾಣೆನು ಎನಗುಸುರು ಹರಿಯೆ ಈ ನಾರಿಗಳ ರೂಪು ಚೆಲುವೆಂದು ವರ್ಣಿಪರು ||ಪ|| ಹುಳುಕು ಮೋರೆಯ ಕಂಡು ಕುಮುದಬಾಂಧವನೆಂದು ಕೊಳಕುಮೂಗನು ಎಳ್ಳಿನರಳೆನ್ನುತ ಪಳಿತ ಕೇಶಗಳನು ಚೂರ್ಣ ಕುಂತಳವೆನುತ ನಳಿನನಾಭನೆ ಕವಿಗಳೆಂತು ವರ್ಣಿಪರೋ ||೧|| ಉಚ್ಚೆಯಾ ದ್ವಾರವನು ಮದನಮಂದಿರವೆಂದು ತುಚ್ಛವಾದಂಡ ಕರಿಕುಂಭವೆಂದು ಮಚ್ಚರದ ಹೃದಯವನು ಕುಸುಮಕೋಮಲವೆಂದು ಇಚ್ಛೆ ಬಂದಂತೆ ಕವಿಗಳು ಪೇಳ್ವರಯ್ಯ ||೨|| ಅಡಬಲದ ಗ್ರಂಥಿಯನು ಕಲಶಕುಚವೆಂಬರು ಕಡು ಒರಟು ಪಾಣಿಯನು ತಳಿರೆಂಬರು ತಡಬಡುವ ಡೊಂಕು ಕಾಲನು ಕಮಲವೆಂದೆನುತ ಕಡುಪಾಪಿ ಕಬ್ಬಿಗರು ಬಣ್ಣಿಸುವರಯ್ಯ ||೩|| ತೊಗಲು ಮಾಂಸಗಳಿಂದ ಕೂಡಿರುವ ಕಾಯವನು ಬೊಗಳುವರು ಬಂಗಾರಬಳ್ಳಿಯೆಂದು ಜಗವು ಎಲ್ಲವು ಇವರ ಕೆಟ್ಟ ಕವಿತೆಯ ಕೇಳಿ ಅಗಲದವರಲಿ ಬಿದ್ದು ಮುಳುಗಿ ಪೋಗುವುದು ||೪|| ಮಾಯಕಾತಿಯರಿವರ ಕಂಡು ಭಯಗೊಳ್ಳುವೆನು ಕಾಯಜನ ಪಿತನೆ ನೀ ಸಲಹು ಎನ್ನ ಶ್ರೀ ಅರಸ ವೈಕುಂಠಪತಿಯೆ ನಿನ್ನಯ ಚರಣ ತೋಯಜವ ನಂಬಿದೆನು ಕೈಯ ಬಿಡಬೇಡ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು