ಸುದ್ದಿ ಕೇಳಮ್ಮ

ಸುದ್ದಿ ಕೇಳಮ್ಮ

( ರಾಗ ಮೋಹನ . ಅಟ ತಾಳ) ಸುದ್ದಿ ಕೇಳಮ್ಮ ಎನಗೆ ಒಂದು ಬುದ್ಧಿ ಹೇಳಮ್ಮ ||ಪ|| ಮುದ್ರೆ ಉಂಗುರ ನೋಡು ಮನದಲ್ಲಿ ಲೋಲಾಡುವ ಶುದ್ಧ ಶ್ರೀರಾಮನು ಸುಖದಲ್ಲಿರ್ಪನು ||ಅ|| ಸೂರ್ಯ ವಂಶಜರಂತೆ ಅಯೋಧ್ಯವನಾಳುವ ಅರಸುಗಳಂತೆ ಬಂಧುಳ್ಳ ದಶರಥನಣುಗರಂತೆ ಪ್ರಸಿದ್ಧ ಪೆಸರು ರಾಮಲಕ್ಷುಮಣರಂತೆ || ಮುನಿ ಮಹಾ ಯಜ್ಞದ ರಕ್ಷಕರಂತೆ ದನುಜರ ಕುಲದಲ್ಲಣರಂತೆ ವನಿತೆಯ ಶಾಪ ವಿಮೋಚಕರಂತೆ ಜನಕಭೂಪಾಲಗೆ ಜಾಮಾತರಂತೆ || ಶ್ರೀ ರಾಮಚಂದ್ರಗೆ ಸತಿಯು ನೀನಂತೆ ಅರಣ್ಯದಲಿ ಪರ್ಣಶಾಲೆಯಿತ್ತಂತೆ ಕ್ರೂರ ರಾವಣ ನಿಮ್ಮ ವಶ ಒಯ್ದನನಂತೆ ಹಾರುವ ಜಟಾಯು ಪಕ್ಷಿ ಪೇಳಿದನಂತೆ || ಎಲ್ಲ ದೇಶವ ಚರಿಸುತ್ತ ಬಂದು ಮೆಲ್ಲನೆ ಕಿಷ್ಕಿಂಧ ಪುರಿಯಲ್ಲಿ ನಿಂದು ಬಲ್ಲಿದ ವಾಲಿಯ ಭರದಿಂದ ಕೊಂದು ಅಲ್ಲಿ ಸುಗ್ರೀವಗೆ ಪಟ್ಟ ಕಟ್ಟಿದರಂದು || ನಳ ನೀಲ ಅಂಗದ ಜಾಂಬವಂತ ದಳಪತಿ ಅಧಿಕ ಸುಗ್ರೀವ ಬಲವಂತ ಅಳುಕದ ಕಪಿಸೇನಾ ಜಯವಂತ ಚೆಲುವ ರಾಮದೂತ ನಾ ಹನುಮಂತ || ದಾಶರಥಿ ರಾಮನು ದಂಡೆತ್ತಿ ಬರುವ ಅಸುರ ರಾವಣನ ವಂಶವ ತರಿವ ಕುಶಲದಿ ನಿಮ್ಮನು ಕೂಡಿ ತಾನಿರುವ ಎಸವ ಅಯೋಧ್ಯಯೊಳಗಿದ್ದು ಮೆರೆವ || ಧಾರಿಣಿಸುತೆ ಧ್ಯಾನಿಸಬೇಡವಮ್ಮ ಅರವಿಂದಮುಖಿಯೆ ಅತ್ಯಾನಂದದಲಿರು ಶ್ರೀ ರಾಮನಾಮವೆ ಶ್ರುತಿಯ ಸನ್ಮತಿಯೆ ಪುರಂದರವಿಠಲರಾಯನರಸಿಯೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು