ನಾರಾಯಣಾಯ ನಮೋ

ನಾರಾಯಣಾಯ ನಮೋ

(ರಾಗ ಮಾರವಿ ಝಂಪೆ ತಾಳ ) ನಾರಾಯಣಾಯ ನಮೋ ನಾರಾಯಣಾಯ ನಮೋ ನಾರಾಯಣಾಯ ನಮೋ ||ಪ|| ಹರಿಕೃಷ್ಣ ಶರಣೆನಲು ಅದು ನಿಮಗೆ ಲೇಸು ಹರಿಯ ಕೀರ್ತನೆಗಳನು ಜಗದೊಳಗೆ ಸೂಸು ಹರಿ ಭಕ್ತಿಯಿಲ್ಲದವರ ಸಂಗಕ್ಕೆ ಹೇಸು ಹರಿಯ ಮರೆತರೆ ಮುಂದೆ ನರಕವೆ ಹಾಸು || ದುರ್ಜನರ ಮನೆಯಲಿಹ ಹಾಲ ಸವಿಗಿಂತ ಸಜ್ಜನರ ಮನೆಯಲ್ಲಿ ನೀರೆ ಲೇಸೆಂದ ದುರ್ಜನರ ಒಡನಾಟ ಸಂಸರ್ಗಗಿಂತ ನಿರ್ಜೀವಿಯಾಗಿರುವ ಕಾಡೆ ಲೇಸೆಂದ || ಇಂದ್ರಿಯಂಗಳ ಸುಖವ ನೆಚ್ಚದಿರು ಕಂಡ್ಯ ಇಂದ್ರಾದಿಗಳ ಬವಣೆಯನು ನೋಡಿಕೊಂಡ್ಯ ಎಂದಿನಂತಲ್ಲ ದೇಹವ ಕಳೆವೆ ಕಂಡ್ಯ ಹಿಂದು ಮುಂದಿನ ಗತಿಯ ತಿಳಿಯದವ ಭಂಡ || ಎಳೆತುಳಸಿ ವನಮಾಲೆ ಧರಿಸಿಕೊಳಬೇಕು ತಿಲಕೋರ್ಧ್ವ ಪುಂಡ್ರಗಳನು ಹಚ್ಚಬೇಕು ನಳಿನನಾಭನ ಸ್ಮರಣೆಯೊಳು ಮುಳುಗಬೇಕು ಇಳೆಯೊಳಗೆ ವೈಕುಂಠವನು ಸಾರಬೇಕು || ಸಿರಿವರನ ಭಕ್ತರನು ಸೇವಿಸಲುಬೇಕು ಪಿರಿದಾಗಿ ದಾನಧರ್ಮವಾಚರಿಸಬೇಕು ಧರಣಿ ಪುಣ್ಯಸ್ಥಳವ ಮೆಟ್ಟುತಿರಬೇಕು ಪುರಂದರವಿಠಲನ್ನ ಸತತ ನೆನೆಬೇಕು ||
ದಾಸ ಸಾಹಿತ್ಯ ಪ್ರಕಾರ
ಬರೆದವರು