ನಾರಸಿಂಹನೆಂಬೊ ದೇವನು

ನಾರಸಿಂಹನೆಂಬೊ ದೇವನು

(ರಾಗ ಸುರಟಿ ಆದಿತಾಳ ) ನಾರಸಿಂಹನೆಂಬೊ ದೇವನು, ನಂಬಿದಂಥ ನರರಿಗೆಲ್ಲ ವರವ ಕೊಡುವನು ||ಪ || ಓಂ ನಮಃ ಶಿವಾಯ ಎನುತಲಿ, ಅಸುರ ತನ್ನ ಸುತನ ಬರೆದು ತೋರು ಎಂಬಾಗ ನರಹರಿಯ ನಾಮವನ್ನು ನಗುನಗುತಲೆ ಬರೆಯುತಿರಲು ಎಡತೊಡೆಯ ಮೇಲೆ ಶಿಶುವ ಧರೆಗೆ ಬಡೆದು ನೂಕಿದನು || ಸುತ್ತು ಜನರ ಕರೆಸಿ ಬೇಗದಿ, ಅಸುರ ತನ್ನ ಸುತನ ಕೊಲ್ಲಿಸಬೇಕೆಂದಾಗ ಅಟ್ಟ ಅಡವಿಯೊಳ್( ಅಡುಗೆಯೊಳ್?) ವಿಷವನಿಟ್ಟು ಭೋಜನಂಗಳ್ ಮಾಡಿ ಹರಿಯ ಸ್ಮರಣೆ ಮಾಡುತಲೆ ಕುಂಜಿ ತಿಳಿದ ಜಟ್ಟಿ ಹಾಂಗೆ || ಅಂಬುಧಿಯೊಳ್ ಮಗನ ಮಲಗಿಸಿ, ಮೇಲೆ ದೊಡ್ಡ ಬೆಟ್ಟವನ್ನು ಇಟ್ಟು ಬನ್ನಿರೊ ಹರಿಯ ಕೃಪೆಗೆ ವಶನಾದ ತರಳನೆಂದು ವರುಣದೇವ ಮರಣ ಇಲ್ಲದ ಹಾಗೆ ಮಾಡಿ ಮನೆಯ ತೊಟ್ಟು ಕಳುಹಿದನು || ಬೆಟ್ಟದಿಂದ ಕಟ್ಟಿ ಉರುಳಿಸಿ, ಅಸುರ ತನ್ನ ಪಟ್ಟದಾನೆ ಕಾಲಿಲಿ ಮೆಟ್ಟಿಸಿ ಹರಲು ಮನೆಯ ಮಾಡಿ ಸುಟ್ಟು ಹುಲಿಯ ಬೋನಿನಲ್ಲಿ ಇಟ್ಟು ಯತ್ನವಿಲ್ಲದೆ ಸುತನ ಕೊಲ್ಲಲಿಕ್ಕೆ ಶಕ್ತನಲ್ಲದೆ ಪೋದನಂತೆ || ನಿನ್ನ ದೇವ ಇದ್ದ ಎಡೆಯನು, ತೋರು ಎನುತ ಪಿತನು ತನ್ನ ಸುತನ ಕೋರಲು ಎನ್ನ ದೇವ ಇಲ್ಲದಂಥ ಎಡೆಗಳುಂತೆ ಲೋಕದಲಿ ಕಂಭದಲ್ಲು ಇರುವನೆಂದು ಕೈಯ ಮುಗಿದು ತೋರ್ದನಾಗ || ವರ ಕಂಭವನು ಒದೆಯಲು, ನರಹರಿಯು ಉಗ್ರ ಕೋಪವನ್ನು ತಾಳಿ ಕಟಕಟೆಂಬ ಧ್ವನಿಯ ಮಾಡಿ ನಖಗಳಿಂದ ಪಿಡಿದು ಒತ್ತಿ ಕರುಳ ಬಗಿದು ಮಾಲೆ ಹಾಕಿ ಕಂಡ ಭಕ್ತನಪ್ಪಿಕೊಂಡ || ಅಂತರಿಕ್ಷದಲ್ಲಿ ಅಮರರು ನೋಡಿ ಆಗ ಪುಷ್ಪ ವೃಷ್ಟಿಯನ್ನೆ ಕರೆಯಲು ಅಜನ ಪಡೆದ ದೇವಿ ಬಂದು ತೊಡೆಯ ಮೇಲೆ ಕುಳಿತುಕೊಂಡು ಅಮರಪತಿಯರೆಲ್ಲ ನೋಡಿ ಅಂಜಬೇಡೆಂಬಭಯ ಕೊಟ್ಟ || ಲಕ್ಷ್ಮೀನಾರಸಿಂಹನ ಚರಿತೆಯ ಉದಯಕಾಲ ಪಠಿಸುವಂಥ ನರರಿಗೆಲ್ಲ ಪುತ್ರ ಸಂತಾನಂಗಳಿತ್ತು ಮತ್ತು ಬೇಡಿದ್ಹಾಗೆ ಕೊಟ್ಟು ಭಕ್ತವತ್ಸಲ ಮುಕ್ತಿ ಕೊಡುವ ಪುರಂದರವಿಠಲರಾಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು