ಕಳವು ಕಲಿಸಿದೆಮ್ಮ ಗೋಪಿ ಕಮಲನಾಭಗೆ

ಕಳವು ಕಲಿಸಿದೆಮ್ಮ ಗೋಪಿ ಕಮಲನಾಭಗೆ

( ರಾಗ ಧನಶ್ರೀ , ಅಟತಾಳ) ಕಳವು ಕಲಿಸಿದೆಮ್ಮ ಗೋಪಿ ಕಮಲನಾಭಗೆ ||ಪ|| ಉಳಿಸಿಕೊಂಡ್ಯ ನಿಮ್ಮ ಮನೆಯ ಪಾಲುಬೆಣ್ಣೆಯ ||ಅ|| ಆರು ಏಳಾದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ ಗೀರುಗಂಧವ ಹಚ್ಚಿ ಹಾರವ ಹಾಕಿ ಕೇರಿ ಕೇರಿ ಪಾಲು ಬೆಣ್ಣೆ ಸೂರೆ ಮಾಡೀ ಬಾರೆನ್ನುತ ವಾರಿಜನಾಭನ ಕಳುಹಿದ್ಯಮ್ಮ ವನಜನಯ್ಯನ || ಚಿತ್ತಜನಯ್ಯನ ಕೈಲಿ ಚಿನ್ನದ ಚೆಂಡನೆ ಕೊಟ್ಟು ಅರ್ತಿಯಿಂದ ಶೃಂಗರಿಸಿ ಆಡಿ ಬಾರೆಂದು ಕತ್ತಲೆ ಬೀದಿಯ ಸುತ್ತೆ ಕಸ್ತೂರಿತಿಲಕವನಿಟ್ಟು ನಿತ್ಯಾನಂದಗೆ ನಿಲುವುಗನ್ನಡಿಯ ತೋರಿ || ಸಣ್ಣ ಮಲ್ಲಿಗೆಯ ಮುಡಿಸಿ ಬಣ್ಣದ ವಲ್ಲಿಯ ಹೊದಿಸಿ ಹೆಣ್ಣುಗಳ ಒಲಿಸುವಂತೆ ಹೇಳಿ ಬುದ್ಧಿಯ ಹುಣ್ಣಿಮೆ ಮೀಸಲಪಾಲು ಉಣ್ಣು ಮೆಲ್ಲು ಮೆಲ್ಲೆನುತ್ತ ಚಿಣ್ಣನ ಕಳುಹಿದ್ಯಮ್ಮ ಉಣ್ಣನಿಕ್ಕದೆ || ವಾರಿಜನಾಥ ಮಾಡಿದಂಥ ದೂರು ಹೇಳಿದರೆ ನಿಮಗೆ ಬಾಯಿಬಡಕರೆಂದು ಗೋಪಿ ಬೈವೆ ನಮ್ಮನು ಊರು ಮಾಡಿದ ಕೊಳಗ ತಾಯಿ ಮಾಡಿದ ಹೊಟ್ಟೆ ವಾರಿಜನಾಭನ ಕರೆದು ಗೋಪಿ ಬುದ್ಧಿಯ ಹೇಳೆ || ಹೊಟ್ಟೆಬಾಕನಾದನಿವನು ಬೆಟ್ಟದೊಡೆಯಗೆ ಪ್ರಿಯ ಇಟ್ಟುಕೊಂಡು ಈರೇಳು ಭುವನ ಉದರದಲ್ಲಿಯೆ ಎಷ್ಟು ಹೇಳಿದರು ಕೇಳ ಏನು ಮಾಡಲಮ್ಮ ನಾನು ಕಟ್ಟು ಮಾಡಿಸಲು ಬೇಕು ಪುರಂದರವಿಠಲಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು