ಕಡುಕೃಪೆಯಿಂದಲಿ ಹರಿ ಒಲಿದವನಿಗೆ

ಕಡುಕೃಪೆಯಿಂದಲಿ ಹರಿ ಒಲಿದವನಿಗೆ

(ರಾಗ ಶಂಕರಾಭರಣ ಆದಿತಾಲ) ಕಡುಕೃಪೆಯಿಂದಲಿ ಹರಿ ಒಲಿದವನಿಗೆ ನಡೆನುಡಿ ಸತ್ಯವೆ ಸಾಕ್ಷಿ ದೃಢಭಕ್ತಿಯಿಂದಲಿ ಉಣಲಿಕ್ಕಿದವರಿಗೆ ಷಡುರಸಾನ್ನವೆ ಸಾಕ್ಷಿ || ಮಡದಿ ಮಕ್ಕಳಿಗೆ ಒಡವೆಯನೀಯದಗೆ ಕಡುದಾರಿದ್ರ್ಯವೆ ಸಾಕ್ಷಿ ಪಡೆದೊಡವೆಯ ಧರ್ಮಕೆ ಈಯದವ ಬಾಯಿ ಬಿಡುವುದೆ ಪರರಿಗೆ ಸಾಕ್ಷಿ || ಅನ್ನದಾನವ ಮಾಡಿದ ಮನುಜ ದಿ- ವ್ಯಾನ್ನ ಉಂಬುವದೆ ಸಾಕ್ಷಿ ಅನ್ನದಾನವನು ಮಾಡದವನು ಕಡು ದೈನ್ಯ ಪಡುವುದೆ ಸಾಕ್ಷಿ || ಕನ್ಯಾದಾನವ ಮಾಡಿದವಗೆ ದಿವ್ಯ ಹೆಣ್ಣಿನ ಭೋಗವೆ ಸಾಕ್ಷಿ ಕನ್ಯಾದಾನವ ಮಾಡದವನು ಹೆಣ್ಣು ಹೆಣ್ಣೆಂದು ಒರಲುವುದೆ ಸಾಕ್ಷಿ || ವಸ್ತ್ರದಾನವ ಮಾಡಿದವನು ದಿವ್ಯ ವಸ್ತ್ರವ ಹೊದೆವುದೆ ಸಾಕ್ಷಿ ವಸ್ತ್ರದಾನವ ಮಾಡದವಗೆ ನಿರ- ವಸ್ತ್ರನಾಗಿಹುದೆ ಸಾಕ್ಷಿ || ಕಂಡ ಪುರುಷನಿಗೆ ಕಣ್ಣನಿಡುವಳಿಗೆ ಗಂಡನ ಕಳೆವುದೆ ಸಾಕ್ಷಿ ಪುಂಡತನದಿ ಪರಸ್ತ್ರೀಯರಳುಪಿದವ ಹೆಂಡರ ಕಳೆವುದೆ ಸಾಕ್ಷಿ || ಪರರಿಗೆ ಒಂದು ತಾನೊಂದುಂಬುವಗೆ ಜ್ವರಗುಲ್ಮರೋಗವೆ ಸಾಕ್ಷಿ ಪರಿಪರಿಯಲಿ ಹಿರಿಯರ ದೂಷಿಸುವ ತಿರಿದುಂಬುವುದೆ ಸಾಕ್ಷಿ || ಕ್ಷೇತ್ರದಾನವ ಮಾಡಿದ ಮನುಜಗೆ ಏಕ ಛತ್ರಾಧಿಪತ್ಯವೆ ಸಾಕ್ಷಿ ಪಾತ್ರಾಪಾತ್ರವರಿತು ದಾನವ ಮಾಡಿದಗೆ ಸು- ಪುತ್ರರ ಪಡೆವುದೆ ಸಾಕ್ಷಿ || ಭಕ್ತಿಯನರಿಯದ ಅಧಮನಿಗೊಂದು ಕತ್ತಲೆ ಮನೆಯೆ ಸಾಕ್ಷಿ ಮುಕ್ತಿಯ ಪಡೆವರು ಪುರಂದರವಿಠಲನ ಭಕ್ತರಾಗಿರುವುದೆ ಸಾಕ್ಷಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು