ಚಿಂತೆಯನು ಮಾಡದಿರು ಚದುರೆ

ಚಿಂತೆಯನು ಮಾಡದಿರು ಚದುರೆ

(ಮೋಹನರಾಗ ಝಂಪೆತಾಳ) ಚಿಂತೆಯನು ಮಾಡದಿರು ಚದುರೆ ನಿನಗೆ ನಾನು ಕಂತುಪಿತನನು ತೋರುವೆ ||ಪ|| ಸಂತೋಷದಿಂದ ಸರ್ವಾಭರಣವಿಟ್ಟುಕೊಂಡು ನಿಂತು ಬಾಗಿಲೊಳು ನೋಡೆ ಪಾಡೆ ||ಅ.ಪ|| ಒಂದು ಕ್ಷಣ ಪಾದಾರವಿಂದ ತೊಳೆದು ಕುಡಿದು ಮಂದಹಾಸದಲಿ ನಲಿದು ಒಂದೆ ಮನದಲಿ ದಿವ್ಯಗಂಧವನು ತಂದ್ಹಚ್ಚಿ ನಂದದಿಂದವನ ಮೆಚ್ಚಿ ಅಂದವಾದ ಕುಸುಮಹಾರವನು ಸುಖನಿಧಿಗೆ ಕಂಧರದಿ ನೀಡಿ ನೋಡಿ ಸಂದೇಹ ಬಿಟ್ಟು ಬಿಗಿದಪ್ಪಿ ಮನವೊಂದಾಗಿ ಎಂದೆಂದಿಗಗಲದಿರೆನ್ನೆ ರನ್ನೆ ||೧|| ಆಸನವ ಕೊಟ್ಟು ಕಮಲಾಸನನ ಪಿತಗೆ ಸವಿ- ಯೂಟಗಳನುಣ್ಣಿಸಿ ಲೇಸಾಗಿ ತಾಂಬೂಲ ತಬಕದಲಿ ತಂದಿಟ್ಟು ವಾಸನೆಗಳನೆ ತೊಟ್ಟು ಸೂಸುವ ಸುಳಿಗುರುಳುಗಳ ತಿದ್ದುತಲಿ ನಕ್ಕು ಶ್ರೀಶನ್ನ ಮರೆಯ ಹೊಕ್ಕು ಆ ಸಮಯದಲಿ ನಿನಗೆ ದಾಸಿ ಎನ್ನಯ ಮನದಿ ವಾಸವಾಗು ಬಿಡದೆ ಎನ್ನೆ ರನ್ನೆ ||೨|| ಇಂತು ಈ ಪರಿಯಲಿ ಶ್ರೀಕಾಂತನನು ಕೂಡಿ ಏ- ಕಾಂತದಲಿ ರತಿಯ ಮಾಡಿ ಸಂತೋಷವನು ಪಡಿಸಿ ಸಕಲಭೋಗವ ತಿಳಿಸಿ ಸಂತತ ಸ್ನೇಹ ಬೆಳೆಸಿ ಅಂತರಂಗಕೆ ಹಚ್ಚಿ ಅವನಾಗಿ ತಾ ಮೆಚ್ಚಿ ಪ್ರೀತಿಯಿಂದಧರ ಕಚ್ಚಿ ಕಂತು ಕೇಳಿಯೊಳು ಕಡುಚೆಲ್ವ ರಂಗವಿಠಲ ಇಂತು ನಿನ್ನಗಲ ಕಾಣೆ-ಜಾಣೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು