ಮುಂಡಿಗೆಗಳು

ಮುಂಡಿಗೆಗಳು

ಕನಕದಾಸರ ಮುಂಡಿಗೆಗಳನ್ನು ಹರಿದಾಸ ಸಂಪದದಲ್ಲಿ ಸಂಗ್ರಹಿಸುವ ಸಲುವಾಗಿ ಅರ್ಥ ವಿವರಣೆಯೊಂದಿಗೆ ಹಾಕಲು ಪ್ರಾರಂಭಿಸಿದ್ದೇನೆ. ನಾನು ಅದನ್ನು ಬರೆಯುವ ರೀತಿಯಲ್ಲಿ ಏನಾದರೂ ತೊಡಕಿದ್ದರೆ, ಅಥವಾ ಅದರ ವಿವರಣೆಗಳು ಅನವಶ್ಯಕ ಎನ್ನಿಸಿದಲ್ಲಿ ಅಥವಾ ಬೇರೆ ಯಾವುದೇ ರೀತಿಯ ಸಲಹೆಗಳು ನೀಡಿದರೂ ನಾನು ಅದನ್ನು ಅಳವಡಿಸಿಕೊಳ್ಳುತ್ತೇನೆ. ಒಂದನ್ನು ಮಾತ್ರ ಈಗ ಕಳಿಸುತ್ತಿದ್ದೇನೆ. ತಮ್ಮೆಲ್ಲರ ಅಭಿಪ್ರಾಯ ತಿಳಿದ ನಂತರ ಮುಂದುವರೆಸುವುದರ ಬಗ್ಗೆ ಚಿಂತಿಸಬಹುದು. ಸಲಹೆಗಳನ್ನು ನೀಡುತ್ತೀರಿ ಅಲ್ಲವೇ? ಈಗ ನಾನು ಆಯ್ದುಕೊಂಡಿರುವ ಮುಂಡಿಗೆ “ಅನುಭಾವದ ನಿಗೂಢ ಮುಂಡಿಗೆಗಳು” ವಿಭಾಗದಲ್ಲಿ ಒಂದಾದ ‘ಮರವ ನುಂಗುವ ಪಕ್ಷಿ’ ಎಂಬ ರಚನೆಯಾಗಿದೆ. ರಾಗ - ಬೇಹಾಗ್ ತಾಳ – ಅಟ್ಟತಾಳ ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ – ಇದರ ಕುರುಹ ಪೇಳಿ ಕುಳಿತಿರುವ ಜನರು ||ಪ|| ಒಂಟಿ ಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲ ಗಂಟಲು ಮೂರುಂಟು ಮೂಗು ಇಲ್ಲ ಕುಂಟು ಮನುಜನ ತೆರದಿ ಕುಳಿತಿಹುದು ಮನೆಯೊಳಗೆ ಎಂಟು ಹತ್ತರ ಭಕ್ಷ್ಯ ಭಕ್ಷಿಸುವುದು ||೧|| ನಡುವೆ ಕಲಿಯುಂಬುವುದುನಡುನೆತ್ತಿಯಲಿ ಬಾಯಿ ಕಡು ಸ್ವರಗಳಿಂದ ಗಾನ ಮಾಡುವುದು ಅಡವಿಯಲಿ ಹುಟ್ಟುವುದು ಅಂಗವೆರಡಾಗುವುದು ಬಡತನ ಬಂದರೆ ಬಹಳ ರಕ್ಷಿಪುದು ||೨|| ಕಂಜವದನೆಯರ ಕರದಲ್ಲಿ ನಲಿದಾಡುವುದು ಎಂಜಲುಣಿಸುವುದು ಮೂಜಗಕೆ ರಂಜಿಪ ಶಿಖಾಮಣಿ ಸಿಂಹಾಸನದ ಮೇಲಿರ್ಪ ಸಂಜೀವ ಪಿತ ಆದಿ ಕೇಶವನೇ ಬಲ್ಲ. ||೩|| ಭಾವ:- ಲೌಕಿಕ ಅರ್ಥದಲ್ಲಿ ಇದು ಬೀಸುವ ಕಲ್ಲು. ಆಧ್ಯಾತ್ಮದ ಅರ್ಥದಲ್ಲಿ ಪ್ರಣವ ರೂಪಿ ಪರಮಾತ್ಮ. ಲೌಕಿಕ ಅರ್ಥ :- ಪಲ್ಲವಿ: ಮರವ ….. ಬಂದಿದೆ = ಮೊರದ ಧಾನ್ಯವನ್ನು ಬರಿದು ಮಾಡುವ ಅಂದರೆ ನುಂಗಿ ಹಸಿ ಹಿಟ್ಟನ್ನು ನೀಡುವ ಬೀಸುವ ಕಲ್ಲು ಮನೆಯೊಳಗೆ ಬಂದಿದೆ. ೧. ಒಂಟಿ ಕೊಂಬಿನ ಪಕ್ಷಿ = ಬೀಸುವ ಕಲ್ಲನ್ನು ಕೈಯಲ್ಲಿ ಹಿಡಿದು ಬೀಸಲು ಮೇಲ್ಭಾಗದ ಹೋಳೀನಲ್ಲಿರುವ ಮರದ ಗೂಟ ಒಡಲೊಳಗೆ ಕರುಳಿಲ್ಲ = ಖಾಲಿ ಶರೀರ; ಜಠರ ಮುಂತಾದ ಜೀರ್ಣಾಂಗಗಳು ಯಾವುದೂ ಇಲ್ಲ. ಗಂಟಲು ಮೂರುಂಟು = ಮೇಲ್ಭಾಗದ ಹೋಳಿನ ಮಧ್ಯದ ಬಾಯಿ ಅಂದರೆ ಅದರಲ್ಲಿರುವ ಮೂರು ರಂದ್ರಗಳು ಮೂಗು ಇಲ್ಲ = ಉಸಿರಾಟಕ್ಕೆ ವಾಸನಾಗ್ರಹಿಕೆಗೆ ಅವಕಾಶವಿಲ್ಲ. ಕುಂಟು…. ಮನೆಯೊಳಗೆ = ಬೀಸುವಕಲ್ಲು ಚಲಿಸುವುದಿಲ್ಲ, ಇದ್ದಕಡೆಯೇ ಇರುವಂತಹುದು. ಎಂಟು …. ಭಕ್ಷಿಸುವುದು = ಹತ್ತೆಂಟು ವಿಧದ ಧಾನ್ಯಗಳನ್ನು ಬೀಸುವುದು. ೨. ನಡುವೆ ಕಲಿಯುಂಬುವುದು = ಎರಡು ಹೋಳುಗಳ ಮಧ್ಯೆ ಧಾನ್ಯವನ್ನು ಉಣ್ಣುತ್ತದೆ. (ಕಲಿ=ಧಾನ್ಯ) ನಡುನೆತ್ತಿಯಲಿ ಬಾಯಿ = ಮೇಲ್ಭಾಗದ ಹೋಳಿನಲಿ ಬಾಯಿ. ಕಡು….ಮಾಡುವುದು = ಬೀಸುವ ಹೆಂಗಳೆಯರ ಕೈಬಳೆಗಳ ಶೃತಿ ನಾದದೊಂದಿಗೆ ಬೀಸುವ ಕಲ್ಲು ಹಾಡುತ್ತದೆ. (ಶಬ್ದ ಮಾಡುತ್ತದೆ) ಅಡವಿಯಲಿ….ಎರಡಾಗುವುದು = ಕಾಡಿನ ಕಲ್ಲು ಇಲ್ಲಿ ಎರಡು ಹೋಳುಗಳಾಗಿರುವುದು. ಬಡತನ…. ರಕ್ಷಿಪುದು = ಕೆರೆ ಕಟ್ಟೆಗಳು ತುಂಬಿ ಭತ್ತ ಬೆಳೆಯುವಂಥ ಭಾರಿ ಮಳೆ ಬೀಳದಿದ್ದರೂ ಸಾಧಾರಣ ಮಳೆಯಿಂದಲೇ ಬೆಳೆಯುವ ರಾಗಿಯು ಬಡತನ ಬಂದರೆ ಜನರನ್ನು ಕಾಪಾಡುವುದು. (ಈ ಕಾರಣದಿಂದಲೇ ಬೀಸುವಕಲ್ಲನ್ನು ರಾಗಿಕಲ್ಲು ಎಂದೂ ಇಲ್ಲಿ ಹೆಸರಿಸಿದ್ದಾರೆ.) ೩. ಕಂಜ….ನಲಿದಾಡುವುದು = ಬೀಸುವ ಕಮಲಮುಖಿಯರ ಕೈಯಲ್ಲಿ ನಲಿದಾಡುವುದು. ಎಂಜಲು…. ಮೂಜಗಕೆ = ಕಲ್ಲು ತಾನು ತಿಂದು ಮಿಕ್ಕ ಹಿಟ್ಟನ್ನು ಜನರಿಗೆ ಉಣಿಸುವುದು. ರಂಜಿಪ…. ಆದಿಕೇಶವನೇ ಬಲ್ಲ. = ಮುಡಿಯಲ್ಲಿ ರತ್ನ ಧರಿಸಿರುವ ಸಿಂಹಾಸನಾರೂಢನಾದ ಆದಿಕೇಶವನೇ ಇವೆಲ್ಲವನೂ ಬಲ್ಲ. ಆಧ್ಯಾತ್ಮಿಕ ಅರ್ಥ:- ಪಲ್ಲವಿ: ಮರದ….ಬಂದಿದೆ = ವಿಸ್ಮರಣೆಯನ್ನು ನುಂಗುವಂಥ ಚೈತನ್ಯ ರೂಪಿ ಓಂಕಾರ ಸ್ವರೂಪನಾದ ಪರಮಾತ್ಮ ದೇಹವೆಂಬ ಮನೆಯೊಳಗೆ ಬಂದು ಕುಳಿತಿದ್ದಾನೆ. ೧. ಒಂಟಿಕೊಂಬಿನ ಪಕ್ಷಿ = ಓಂ ಎಂಬಲ್ಲಿ ‘ಒ’ ಅಕ್ಷರದ ಮೇಲೆ ದೀರ್ಘ ಸ್ವರದ ಕೊಂಬಿದೆ. ಒಡಲೊಳಗೆ ಕರುಳಿಲ್ಲ = ಸಾಂಸಾರಿಕ ವ್ಯಾಮೋಹವಿಲ್ಲ ಗಂಟಲು ಮೂರುಂಟು = ಓಂಕಾರದ ಅ, ಉ, ಮ ಎಂಬ ತ್ರಿಮಾತ್ರೆಗಳು. ಮೂಗು ಇಲ್ಲ = ವಾಸನೆಯ ಗುಂಗಿಲ್ಲದಿರುವುದು. ಕುಂಟು….ಮನೆಯೊಳಗೆ = ದೇಹದೊಳಗೆ ಅಚಲನಾಗಿ ಕುಳಿತಿರುವನು. ಎಂಟು….ಭಕ್ಷಿಸುವುದು = ಪಂಚಭೂತಗಳು + ಮನ+ಬುದ್ಧಿ+ಅಹಂಕಾರ=೮. ಪಂಚ ಜ್ಞಾನೇಂದ್ರಿಯಗಳು + ಪಂಚ ಕರ್ಮೇಂದ್ರಿಯಗಳು=೧೦. ಇವುಗಳ ಮೂಲಕ ಶಬ್ದಾದಿ ವಿಷಯಗಳೆಂಬ ಭಕ್ಷ್ಯವನ್ನು ಭಕ್ಷಿಸುವುದು ಅಂದರೆ ತಿಳಿದು ನಿರ್ಲಿಪ್ತವಾಗಿರುವುದು. ೨. ನಡುವೆ ಕಲಿಯುಂಬುವುದು = ನಾಭಿಯಲಿ ಕುಂಡಲಿನಿ ಜಾಗೃತಗೊಳ್ಳುವುದು. ನಡುನೆತ್ತಿಯಲಿ ಬಾಯಿ = ಆಜ್ಞಾ ಚಕ್ರ ಕಡುಸ್ವರ…. ಮಾಡುವುದು = ಜೀವಾತ್ಮ ಆಜ್ಞಾ ಚಕ್ರಕ್ಕೆ ಬಂದಾಗ ಹೊರಹೊಮ್ಮುವ ನಾದ. ಅಡವಿ…..ಎರಡಾಗುವುದು. = ಹೃದಯಾರಣ್ಯದಲ್ಲಿರುವ ಪರಬ್ರಹ್ಮ ಪುರುಷ, ಪ್ರಕೃತಿಯಾಗುವುದು. ಬಡತನ ರಕ್ಷಿಪುದು = ಅರಿಷಡ್ವರ್ಗಗಳು, ಕರ್ಮಗಳು ಮುಂತಾದವುಗಳ ಅಬ್ಬರದ ಐಶ್ವರ್ಯ ನಾಶವಾಗಿ ಜೀವಾತ್ಮನನ್ನು ರಕ್ಷಿಸುತ್ತದೆ. ೩. ಕಂಜ….ನಲಿದಾಡುವುದು = ಶಕ್ತಿ ದೇವತೆಯರ ಕೈಯಲ್ಲಿ ಸಂತೋಷಗೊಳ್ಳುವುದು. ಎಂಜಲು…..ಜಗಕೆ = ಓಂಕಾರದ, ಹಂಸ ಮಂತ್ರದ ಎಂಜಲನ್ನು ಎಲ್ಲಾ ಜೀವ ಜಂತುಗಳಿಗೂ ಉಣಬಡಿಸುವುದು