ಲಕ್ಷ್ಮಿ ಶೋಭಾನ

ಲಕ್ಷ್ಮಿ ಶೋಭಾನ

ರಾಗ: ಪಂತುರಾವಳಿ ಧ್ರುವ ತಾಳ

ಶೋಭಾನವೆನ್ನೀರೆ ಸುರರೊಳು ಸುಭಗನಿಗೆ
ಶೋಭಾನವೆನ್ನಿ ಸುಗುಣನಿಗೆ
ಶೋಭಾನವೆನ್ನೀರೆ ತ್ರಿವಿಕ್ರಮರಾಯಗೆ
ಶೋಭಾನವೆನ್ನಿ ಸುರಪ್ರಿಯಗೆ || ಶೋಭಾನೆ || ಪ ||

 

ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ
ಪಕ್ಷಿವಾಹನ್ನಗೆರಗುವೆ
ಪಕ್ಷಿವಾಹನ್ನಗೆರಗುವೆ ಅನುದಿನ
ರಕ್ಷಿಸಲಿ ನಮ್ಮ ವಧೂವರರ ||

 

ಪಾಲಸಾಗರವನ್ನು ಲೀಲೆಯಲಿ ಕಡೆಯಲು
ಬಾಲೆ ಮಹಲಕ್ಷುಮಿ ಉದಿಸಿದಳು
ಬಾಲೆ ಮಹಲಕ್ಷುಮಿ ಉದಿಸಿದಳಾ ದೇವಿ
ಪಾಲಿಸಲಿ ನಮ್ಮ ವಧೂವರರ ||

 

ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿ
ಸುಮ್ಮನೆಯಾಗಿ ಮಲಗಿರ್ದು
ನಮ್ಮ ನಾರಾಯಣಗು ಈ ರಮ್ಮೆಗಡಿಗಡಿಗು
ಜನ್ಮವೆಂಬುದು ಅವತಾರ ||

 

ಕಂಬುಕಂಠದ ಸುತ್ತ ಕಟ್ಟಿದ ಮಂಗಳಸೂತ್ರ
ಅಂಬುಜವೆರಡು ಕರಯುಗದಿ
ಅಂಬುಜವೆರಡು ಕರಯುಗದಿ ಧರಿಸಿ ಪೀ
ತಾಂಬರವನ್ನುಟ್ಟು ಮೆರೆದಳು ||

 

ಒಂದು ಕರದಿಂದ ಅಭಯವನೀವಳೆ ಮ
ತ್ತೊಂದು ಕೈಯಿಂದ ವರಗಳ
ಕುಂದಿಲ್ಲದಾನಂದಸಂದೋಹ ಉಣಿಸುವ
ಇಂದಿರೆ ನಮ್ಮ ಸಲಹಲಿ ||

 

ಪೊಳೆವ ಕಾಂಚಿಯ ದಾಮ ಉಲಿವ ಕಿಂಕಿಣಿಗಳು
ನಲಿವ ಕಾಲಂದುಗೆ ಘಲಕೆನಲು
ನಳನಳಿಸುವ ಮುದ್ದುಮೊಗದ ಚೆಲುವೆ ಲಕ್ಷುಮಿ
ಸಲಹಲಿ ನಮ್ಮ ವಧೂವರರ ||

 

ರನ್ನದ ಮೊಲೆಗಟ್ಟು ಚಿನ್ನದಾಭರಣಗಳ
ಚೆನ್ನೆ ಮಹಲಕ್ಷುಮಿ ಧರಿಸಿದಳೆ
ಚೆನ್ನೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ
ಮನ್ನೆಯ ವಧೂವರರ ಸಲಹಲಿ ||

 

ಕುಂಭಕುಚದ ಮೇಲೆ ಇಂಬಿಟ್ಟ ಹಾರಗಳು
ತುಂಬಿಗುರುಳ ಮುಖಕಮಲ
ತುಂಬಿಗುರುಳ ಮುಖಕಮಲದ ಮಹಲಕ್ಷುಮಿ ಜಗ
ದಂಬೆ ವಧೂವರರ ಸಲಹಲಿ ||

 

ಮುತ್ತಿನ ಓಲೆಯನಿಟ್ಟಳೆ ಮಹಲಕ್ಷುಮಿ
ಕಸ್ತೂರಿತಿಲಕ ಧರಿಸಿದಳೆ
ಕಸ್ತೂರಿ ತಿಲಕ ಧರಿಸಿದಳಾ ದೇವಿ ಸ
ರ್ವತ್ರ ವಧೂವರರ ಸಲಹಲಿ ||

 

ಅಂಬುಜನಯನಗಳ ಬಿಂಬಾಧರದ ಶಶಿ
ಬಿಂಬದಂತೆಸೆವ ಮೂಗುತಿಮಣಿ
ಬಿಂಬದಂತೆಸೆವ ಮೂಗುತಿಮಣಿಯ ಮಹಲಕ್ಷುಮಿ
ಉಂಬುದಕೀಯಲಿ ವಧೂವರರ್ಗೆ ||

 

ಮುತ್ತಿನಕ್ಷತೆಯಿಟ್ಟು ನವರತ್ನದ ಮುಕುಟವ
ನೆತ್ತಿಯ ಮೇಲೆ ಧರಿಸಿದಳೆ
ನೆತ್ತಿಯ ಮೇಲೆ ಧರಿಸಿದಳಾ ದೇವಿ ತನ್ನ
ಭಕ್ತಿಯ ಜನರ ಸಲಹಲಿ ||

 

ಕುಂದ ಮಂದಾರ ಜಾಜಿ ಕುಸುಮಗಳ ವೃಂದವ
ಚೆಂದದ ತುರುಬಿಲಿ ತುರುಬಿದಳೆ
ಕುಂದಣವರ್ಣದ ಕೋಮಲೆ ಮಹಲಕ್ಷುಮಿ ಕೃಪೆ
ಯಿಂದ ವಧೂವರರ ಸಲಹಲಿ||

 

ಎಂದೆಂದೂ ಬಾಡದ ಅರವಿಂದದ ಮಾಲೆಯ
ಇಂದಿರೆ ಪೊಳೆವ ಕೊರಳಲ್ಲಿ
ಇಂದಿರೆ ಪೊಳೆವ ಕೊರಳಲ್ಲಿ ಧರಿಸಿದಳೆ ಅವ
ಳಿಂದು ವಧೂವರರ ಸಲಹಲಿ ||

 

ದೇವಾಂಗ ಪಟ್ಟಿಯ ಮೇಲು ಹೊದ್ದಿಕೆಯ
ಭಾವೆ ಮಹಲಕ್ಷುಮಿ ಧರಿಸಿದಳೆ
ಭಾವೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ
ಸೇವಕ ಜನರ ಸಲಹಲಿ ||

 

ಈ ಲಕ್ಷುಮಿದೇವಿಯ ಕಾಲುಂಗುರ ಘಲಕೆನಲು
ಲೋಲಾಕ್ಷಿ ಮೆಲ್ಲನೆ ನಡೆತಂದಳು
ಸಾಲಾಗಿ ಕುಳ್ಳಿರ್ದ ಸುರರ ಸಭೆಯ ಕಂಡು
ಆಲೋಚಿಸಿದಳು ಮನದಲ್ಲಿ ||

 

ತನ್ನ ಮಕ್ಕಳ ಕುಂದ ತಾನೆ ಪೇಳುವದಕ್ಕೆ
ಮನ್ನದಿ ನಾಚಿ ಮಹಲಕ್ಷುಮಿ
ತನ್ನಾಮದಿಂದಲಿ ಕರೆಯದೆ ಒಬ್ಬೊಬ್ಬರ
ಉನ್ನತ ದೋಷಗಳನೆಣಿಸಿದಳು ||

 

ಕೆಲವರು ತಲೆಯೂರಿ ತಪಗಯ್ದು ಪುಣ್ಯವ

ಗಳಿಸಿದ್ದರೇನೂ ಫಲವಿಲ್ಲ
ಜ್ವಲಿಸುವ ಕೋಪದಿ ಶಾಪವ ಕೊಡುವರು
ಲಲನೆಯನಿವರು ಒಲಿಸುವರೇ ||

 

ಎಲ್ಲ ಶಾಸ್ತ್ರಗಳನೋದಿ ದುರ್ಲಭ ಜ್ಞಾನವ
ಕಲ್ಲಿಸಿ ಕೊಡುವ ಗುರುಗಳು
ಬಲ್ಲಿದ ಧನಕ್ಕೆ ಮರುಳಾಗಿವರಿಬ್ಬರು
ಸಲ್ಲದ ಪುರೋಹಿತಕೊಳಗಾದರು ||

 

ಕಾಮನಿರ್ಜಿತನೊಬ್ಬ ಕಾಮನಿಗೆ ಸೋತೊಬ್ಬ
ಭಾಮಿನಿಯ ಹಿಂದೆ ಹಾರಿದವ
ಕಾಮಾಂಧನಾಗಿ ಮುನಿಯ ಕಾಮಿನಿಗೆಯ್ದಿದನೊಬ್ಬ
ಕಾಮದಿ ಗುರುತಲ್ಪಗಮಿಯೊಬ್ಬ ||

 

ನಶ್ವರೈಶ್ವರ್ಯವ ಬಯಸುವನೊಬ್ಬ ಪರ
ರಾಶ್ರಯಿಸಿ ಬಾಳುವ ಈಶ್ವರನೊಬ್ಬ
ಹಾಸ್ಯವ ಮಾಡಿ ಹಲ್ಲ ಉದುರಿಸಿಕೊಂಡವನೊಬ್ಬ ಅ
ದೃಶ್ಯಾಂಘ್ರಿಯೊಬ್ಬ ಒಕ್ಕಣ್ಣನೊಬ್ಬ ||

 

ಮಾವನ ಕೊಂದೊಬ್ಬ ಮರುಳಾಗಿಹನು ಗಡ
ಹಾರ್ವನ ಕೊಂದೊಬ್ಬ ಬಳಲಿದ
ಜೀವರ ಕೊಂದೊಬ್ಬ ಕುಲಗೇಡೆಂದೆನಿಸಿದ
ಶಿವನಿಂದೊಬ್ಬ ಬಯಲಾದ ||

 

ಧರ್ಮವುಂಟೊಬ್ಬನಲಿ ಹೆಮ್ಮೆಯ ಹೆಸರಿಗೆ
ಅಮ್ಮಮ್ಮ ತಕ್ಕ ಗುಣವಿಲ್ಲ
ಕ್ಷಮ್ಮೆಯ ಬಿಟ್ಟೊಬ್ಬ ನರಕದಲಿ ಜೀವರ
ಮರ್ಮವ ಮೆಟ್ಟಿ ಕೊಲಿಸುವ ||

 

ಖಳನಂತೆ ಒಬ್ಬ ತನಗೆ ಸಲ್ಲದ ಭಾಗ್ಯವ
ಬಲ್ಲಿದಗಂಜಿ ಬರಿಗೈದ
ದುರ್ಲಭ ಮುಕ್ತಿಗೆ ದೂರವೆಂದೆನಿಸುವ ಪಾ
ತಾಳ ತಳಕ್ಕೆ ಇಳಿದ ಗಡ ||

 

ಎಲ್ಲರಾಯುಷ್ಯವ ಶಿಂಶುಮಾರದೇವ
ಸಲ್ಲೀಲೆಯಿಂದ ತೊಲಗಿಸುವ
ಒಲ್ಲೆ ನಾನಿವರ ನಿತ್ಯ ಮುತ್ತೈದೆಯೆಂದು
ಬಲ್ಲವರೆನ್ನ ಭಜಿಸುವರು ||

 

ಪ್ರಕೃತಿಯ ಗುಣದಿಂದ ಕಟ್ಟುವಡೆದ ನಾನಾ
ವಿಕೃತಿಗೊಳಗಾಗಿ ಭವದಲ್ಲಿ
ಸುಖದುಃಖವುಂಬ ಬೊಮ್ಮಾದಿ ಜೀವರು
ದುಃಖಕ್ಕೆ ದೂರಳೆನಿಪ ಎನಗೆಣೆಯೆ ||

 

ಒಬ್ಬನವನ ಮಗ ಮತ್ತೊಬ್ಬನವನ ಮೊಮ್ಮ
ಒಬ್ಬನವನಿಗೆ ಶಯನಾಹ
ಒಬ್ಬನವನ ಪೊರುವ ಮತ್ತಿಬ್ಬರವನಿಗಂಜಿ
ಅಬ್ಬರದಲಾವಾಗ ಸುಳಿವರು ||

 

ಒಬ್ಬನವನ ನಾಮಕಂಜಿ ಬೆಚ್ಚುವ ಗಡ
ಸರ್ಬರಿಗಾವ ಅಮೃತವ
ಸರ್ಬರಿಗಾವ ಅಮೃತವನುಣಿಸುವ ಅವ
ನೊಬ್ಬನೆ ನಿರನಿಷ್ಟ ನಿರವದ್ಯ ||                                ||೨೭||

 

ನಿರನಿಷ್ಟ ನಿರವದ್ಯ ಎಂಬ ಶ್ರುತ್ಯರ್ಥವ
ಒರೆದು ನೋಡಲು ನರಹರಿಗೆ
ನರಕಯಾತನೆ ಸಲ್ಲ ದುರಿತಾತಿದೂರನಿಗೆ
ಮರುಳ ಮನ ಬಂದಂತೆ ನುಡಿಯದಿರು                       ||೨೮||

 

ಒಂದೊಂದು ಗುಣಗಳು ಇದಾವು ಇವರಲ್ಲಿ
ಸಂದಣಿಸಿವೆ ಬಹುದೋಷ
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು
ಇಂದಿರೆ ಪತಿಯ ನೆನೆದಳು ||

 

ದೇವರ್ಷಿ ವಿಪ್ರರ ಕೊಂದು ತನ್ನುದರದೊಳಿಟ್ಟು
ತೀವಿರ್ದ ಹರಿಗೆ ದುರಿತವ
ಭಾವಜ್ಞರೆಂಬರೆ ಆಲದೆಲೆಯ ಮೇಲೆ
ಶಿವನ ಲಿಂಗವ ನಿಲಿಸುವರೆ ||

 

ಹಸಿ ತೃಷೆ ಜರೆ ಮರಣ ರೋಗರುಜಿನಗಳೆಂಬ
ಅಸುರ ಪಿಶಾಚಿಗಳ ಭಯವೆಂಬ
ವ್ಯಸನ ಬರಬಾರದು ಎಂಬ ನಾರಯಣನಿಗೆ
ಪಶು ಮೊದಲಾಗಿ ನೆನೆಯದು ||

 

ತಾ ದುಃಖಿಯಾದರೆ ಸುರರಾರ್ತಿಯ ಕಳೆದು
ಮೋದವೀವುದಕ್ಕೆ ಧರೆಗಾಗಿ
ಮಾಧವ ಬಾಹನೆ ಕೆಸರೊಳು ಮುಳುಗಿದವ ಪರರ
ಬಾಧಿಪ ಕೆಸರ ಬಿಡಿಸುವನೆ ||

 

ಬೊಮ್ಮನಾಲಯದಲ್ಲಿ ಇದ್ದವಗೆ ಲಯವುಂಟೆ
ಜನ್ಮ ಲಯವಿಲ್ಲದವನಿಗೆ
ಅಮ್ಮಿಯನುಣಿಸಿದ್ದ ಯಶೋದೆಯಾಗಿದ್ದಳೆ
ಅಮ್ಮ ಇವಗೆ ಹಸಿ ತೃಷೆಯುಂಟೆ ||

 

ಆಗ ಭಕ್ಷ್ಯ ಭೋಜ್ಯವಿತ್ತು ಪೂಜಿಸುವ
ಯೋಗಿಗಳುಂಟೇ ಧನಧಾನ್ಯ
ಆಗ ದೊರಕೊಂಬುದೆ ಪಾಕ ಮಾಡುವ ವಹ್ನಿ ಮ
ತ್ತಾಗಲೆಲ್ಲಿಹುದು ವಿಚಾರಿಸಿರೋ ||

 

ರೋಗವನೀವ ವಾತ ಪಿತ್ತ ಶ್ಲೇಷ್ಮ
ಆಗ ಕೂಡುವುದೇ ರಮೆಯೊಡನೆ
ಭೋಗಿಸುವವಗೆ ದುರಿತವ ನೆನೆವರೆ
ಈ ಗುಣನಿಧಿಗೆ ಎಣೆಯುಂಟೆ ||

 

ರಮ್ಮೆದೇವಿಯರನಪ್ಪಿಕೊಂಡಿಪ್ಪುದು
ರಮ್ಮೆಯರಸಗೆ ರತಿ ಕಾಣಿರೋ
ಅಮ್ಮೋಘ ವೀರ್ಯವು ಚಲಿಸಿದರೆ ಪ್ರಳಯದಲಿ
ಕುಮ್ಮಾರರ್ ಯಾಕೆ ಜನಿಸರು ||

 

ಏಕತ್ರ ನಿರ್ಣೀತ ಶಾಸ್ತ್ರಾರ್ಥ ಪರತ್ರಾಪಿ
ಬೇಕೆಂಬ ನ್ಯಾಯವ ತಿಳಿದುಕೊ
ಶ್ರೀಕೃಷ್ಣನೊಬ್ಬನೆ ಸರ್ವದೋಷಕ್ಕೆ ಸಿ
ಲುಕನೆಂಬುದು ಸಲಹಲಿಕೆ

 

ಎಲ್ಲ ಜಗವ ನುಂಗಿ ದಕ್ಕಿಸಿಕೊಂಡವಗೆ
ಸಲ್ಲದು ರೋಗರುಜಿನವು
ಬಲ್ಲ ವೈದ್ಯರ ಕೇಳಿ ಅಜೀರ್ತಿಮೂಲವಲ್ಲ
ದಿಲ್ಲ ಸಮಸ್ತ ರುಜಿನವು ||

 

ಇಂಥಾ ಮೂರುತಿಯ ಒಳಗೊಂಬ ನರಕ ಬಹು
ಭ್ರಾಂತ ನೀನೆಲ್ಲಿಂದ ತೋರಿಸುವೆಲೋ
ಸಂತೆಯ ಮರುಳ ಹೊಗೆಲೋ ನಿನ್ನ ಮಾತ
ಸಂತರು ಕೇಳಿ ಸೊಗಸರು ||

 

ಶ್ರೀನಾರಾಯಣರ ಜನನೀಜನಕರ
ನಾನೆಂಬ ವಾದೀ ನುಡಿಯೆಲೋ
ಜಾಣರದರಿಂದರಿಯ ಮೂಲರೂಪವ ತೋರಿ
ಶ್ರೀನರಸಿಂಹ ಅವತಾರ ||

 

ಅಂಬುಧಿಯ ಉದಕದಲಿ ಒಡೆದು ಮೂಡಿದ ಕೂರ್ಮ
ನೆಂಬ ಶ್ರೀಹರಿಯ ಪಿತನಾರು
ಎಂಬ ಶೀಹರಿಯ ಪಿತನಾರು ಅದರಿಂದ ಸ್ವ
ಯಂಭುಗಳೆಲ್ಲ ಅವತಾರ ||

 

ದೇವಕಿಯ ಗರ್ಭದಲಿ ದೇವನವತರಿಸಿದ
ಭಾವವನು ಬಲ್ಲ ವಿವೇಕಿಗಳು
ಈ ವಸುಧೆಯೊಳಗೆ ಕೃಷ್ಣಗೆ ಜನ್ಮವ
ಆವ ಪರಿಯಲ್ಲಿ ನುಡಿವೆಯೋ ||

 

ಆವಳಿಸುವಾಗ ಯಶೋದಾದೇವಿಗೆ
ದೇವ ತನ್ನೊಳಗೆ ಹುದುಗಿದ್ದ
ಭುವನವನೆಲ್ಲ ತೋರಿದುದಿಲ್ಲವೇ
ಆ ವಿಷ್ಣು ಗರ್ಭದೊಳಡುಗುವನೆ ||

 

ಆನೆಯ ಮಾನದಲಿ ಅಡಗಿಸಿದವರುಂಟೆ
ಅನೇಕ ಕೋಟಿ ಅಜಾಂಡವ
ಅಣು ರೋಮಕೂಪದಲಿ ಆಳ್ದ ಶ್ರೀಹರಿಯ
ಜನನೀಜಠರವು ಒಳಗೊಂಬುದೆ ||

 

ಅದರಿಂದ ಕೃಷ್ಣನಿಗೆ ಜನ್ಮವೆಂಬುದು ಸಲ್ಲ
ಮದನನಿವನ ಕುಮಾರನು
ಕದನದಿ ಕಣೆಗಳ ಇವನೆದೆಗೆಸೆವನೆ
ಸುದತೇರಿಗಿವನಿಂತು ಸಿಲುಕುವನೆ ||

 

ಅದರಿಂದ ಕೃಷ್ಣನಿಗೆ ಪರನಾರೀಸಂಗವ ಕೋ
ವಿದರಾದ ಬುಧರು ನುಡಿವರೆ
ಸದರವೆ ಈ ಮಾತು ಸರ್ವವೇದಂಗಳು
ಮುದದಿಂದ ತಾವು ಸ್ತುತಿಸುವುವು ||

 

ಎಂದ ಭಾಗವತದ ಚೆಂದದ ಮಾತನು
ಮಂದಮಾನವ ಮನಸಿಗೆ
ತಂದುಕೊ ಜಗಕ್ಕೆ ಕೈವಲ್ಯವೀವ ಮು
ಕುಂದಗೆ ಕುಂದು ಕೊರತೆ ಸಲ್ಲ ||

 

ಹತ್ತು ವರ್ಷದ ಕೆಳಗೆ ಮಕ್ಕಳಾಟಿಕೆಯಲ್ಲಿ
ಚಿತ್ತ ಸ್ತ್ರೀಯರಿಗೆ ಎರಗುವದೆ
ಅರ್ತಿಯಿಂದರ್ಚಿಸಿದ ಗೋಕುಲದ ಕನ್ಯೆಯರ
ಸತ್ಯಸಂಕಲ್ಪ ಬೆರೆತಿದ್ದ ||

 

ಹತ್ತು ಮತ್ತಾರುಸಾಸಿರ ಸ್ತ್ರೀಯರಲ್ಲಿ
ಹತ್ತು ಹತ್ತೆನಿಪ ಕ್ರಮದಿಂದ
ಪುತ್ರರ ವೀರ್ಯದಲಿ ಸೃಷ್ಟಿಸಿದವರುಂಟೆ
ಅರ್ತಿಯ ಸೃಷ್ಟಿ ಹರಿಗಿದು ||

 

ರೋಮ ರೋಮಕೂಪ ಕೋಟಿ ವೃಕಂಗಳ
ನಿರ್ಮಿಸಿ ಗೋಪಾಲರ ತೆರಳಿಸಿದ
ನಮ್ಮ ಶ್ರೀಕೃಷ್ಣ ಮಕ್ಕಳ ಸೃಜಿಸುವ ಮ
ಹಿಮ್ಮೆ ಬಲ್ಲವರಿಗೆ ಸಲಹಲಿಕೆ ||

 

ಮಣ್ಣನೇಕೆ ಮೆದ್ದೆಯೆಂಬ ಯಶೋದೆಗೆ
ಸಣ್ಣ ಬಾಯೊಳಗೆ ಜಗಂಗಳ
ಕಣ್ಣಾರೆ ತೋರಿದ ನಮ್ಮ ಶ್ರೀಕೃಷ್ಣನ
ಘನ್ನತೆ ಬಲ್ಲವರಿಗೆ ಸಲಹಲಿಕೆ ||

 

ನಾರದ ಸನಕಾದಿ ಮೊದಲಾದ ಯೋಗಿಗಳು
ನಾರಿಯರಿಗೆ ಮರುಳಾಹರೆ
ಓರಂತೆ ಶ್ರೀಕೃಷ್ಣನಡಿಗಡಿಗೆರಗುವರೆ
ಆರಾಧಿಸುತ್ತ ಭಜಿಸುವರೆ ||

 

ಅಂಬುಜಸಂಭವ ತ್ರಿಯಂಬಕ ಮೊದಲಾದ
ನಂಬಿದವರಿಗೆ ವರವಿತ್ತ
ಸಂಭ್ರಮದ ಸುರರು ಎಳ್ಳಷ್ಟು ಕೋಪಕ್ಕೆ
ಇಂಬಿದ್ದರಿವನ ಭಜಿಸುವರೆ ||

 

ಆವನುಂಗುಷ್ಠವ ತೊಳೆದ ಗಂಗಾದೇವಿ
ಪಾವನಳೆನಿಸಿ ಮೆರೆಯಳೆ
ಜೀವನ ಸೇರುವ ಪಾಪವ ಕಳೆವಳು
ಈ ವಾಸುದೇವಗೆ ಎಣೆಯುಂಟೆ ||

 

ಕಿಲ್ಬಿಷವಿದ್ದರೆ ಅಗ್ರಪೂಜೆಯನು
ಸರ್ಬರಾಯರ ಸಭೆಯೊಳಗೆ
ಉಬ್ಬಿದ ಮನದಿಂದ ಧರ್ಮಜ ಮಾಡುವನೆ
ಕೊಬ್ಬದಿರೆಲೋ ಪರವಾದಿ ||

 

ಸಾವಿಲ್ಲದ ಹರಿಗೆ ನರಕಯಾತನೆ ಸಲ್ಲ
ಜೀವಂತರಿಗೆ ನರಕದಲಿ
ನೋವನೀವನು ನಿಮ್ಮ ಯಮದೇವನು
ಗೋವ ನೀ ಹರಿಯ ಗುಣವರಿಯ ||

 

ನರಕವಾಳುವ ಯಮಧರ್ಮರಾಯ ತನ್ನ
ನರಜನ್ಮದೊಳಗೆ ಪೊರಳಿಸಿ
ಮರಳಿ ತನ್ನರಕದಲಿ ಪೊರಳಿಸಿ ಕೊಲುವನು
ಕುರು ನಿನ್ನ ಕುಹಕ ಕೊಳದಲಿ ||

 

ಬೊಮ್ಮನ ನೂರು ವರ್ಷ ಪರಿಯಂತ ಪ್ರಳಯದಲಿ
ಸುಮ್ಮನೆಯಾಗಿ ಮಲಗಿಪ್ಪ
ನಮ್ಮ ನಾರಾಯಣಗೆ ಹಸಿ ತೃಷೆ ಜರಾಮರಣ ದು
ಷ್ಕರ್ಮದುಃಖಂಗಳು ತೊಡಸುವರೆ ||

 

ರಕ್ಕಸರಸ್ತ್ರಗಳಿಂದ ಗಾಯವಡೆಯದ
ಅಕ್ಷಯ ಕಾಯದ ಶ್ರೀಕೃಷ್ಣ
ತುಚ್ಛ ಯಮಭಟರ ಶಸ್ತ್ರಕಳಕುವನಲ್ಲ
ಹುಚ್ಚ ನೀ ಹರಿಯ ಗುಣವರಿಯ ||

 

ಕಿಚ್ಚ ನುಂಗಿದನು ನಮ್ಮ ಶ್ರೀಕೃಷ್ಣನು
ತುಚ್ಛ ನರಕದೊಳು ಅನಲನಿಗೆ
ಬೆಚ್ಚುವನಲ್ಲ ಅದರಿಂದವಗೆ ನರಕ
ಮೆಚ್ಚುವರಲ್ಲ ಬುಧರೆಲ್ಲ ||

 

ಮನೆಯಲ್ಲಿ ಕ್ಷಮೆಯ ತಾಳ್ದ ವೀರ ಭಟ
ರಣರಂಗದಲಿ ಕ್ಷಮಿಸುವನೆ
ಅಣುವಾಗಿ ನಮ್ಮ ಹಿತಕೆ ಮನದೊಳಗಿನ ಕೃಷ್ಣ
ಮುನಿವ ಕಾಲಕ್ಕೆ ಮಹತ್ತಾಹ ||

 

ತಾಯ ಪೊಟ್ಟೆಯಿಂದ ಮೂಲ ರೂಪವ ತೋರಿ
ಆಯುಧ ಸಹಿತ ಪೊರವಂಟ
ನ್ಯಾಯಕೋವಿದರು ಪುಟ್ಟಿದನೆಂಬರೆ
ಬಾಯಿಗೆ ಬಂದಂತೆ ಬಗಳದಿರು ||

 

ಉಟ್ಟ ಪೀತಾಂಬರ ತೊಟ್ಟ ಭೂಷಣಂಗಳು
ಇಟ್ಟ ನವರತ್ನದ ಕಿರೀಟವು
ಮೆಟ್ಟಿದ ಕುರುಹ ಎದೆಯಲ್ಲಿ ತೋರಿದ ಶ್ರೀ
ವಿಠ್ಠಲ ಪುಟ್ಟಿದನೆನಬಹುದೆ ||

 

ಋಷಭ್ಹಂಸಮೇಷಮಹಿಷಮೂಷಿಕವಾಹನವೇರಿ ಮಾ
ನಿಸರಂತೆ ಸುಳಿವ ಸುರರೆಲ್ಲ
ಎಸೆವ ದೇವೇಶಾನರ ಸಹಸಕ್ಕೆ ಮಣಿದರು
ಕುಸುಮನಾಭನಿಗೆ ಸರಿಯುಂಟೆ ||

 

ಒಂದೊಂದು ಗುಣಗಳು ಇದ್ದಾವು ಇವರಲ್ಲಿ
ಸಂದಣಿಸಿವೇಕೋ ಬಹು ದೋಷ
ಕುಂದೆಳ್ಳಿಷ್ಟಿಲ್ಲದ ಮುಕುಂದನೆ ತನಗೆಂದು
ಇಂದಿರೆ ಪತಿಯ ನೆನೆದಳು ||

 

ಇಂತು ಚಿಂತಿಸಿ ರಮೆ ಸಂತ ರಾಮನ ಪದವ
ಸಂತೋಷ ಮನದಿ ನೆನೆವುತ್ತ
ಸಂತೋಷಮನದಿ ನೆನೆವುತ್ತ ತನ್ನ ಶ್ರೀ
ಕಾಂತನಿದ್ದೆಡೆಗೆ ನಡೆದಳು ||

 

ಕಂದರ್ಪಕೋಟಿಗಳ ಗೆಲುವ ಸೌಂದರ್ಯದ
ಚೆಂದವಾಗಿದ್ದ ಚೆಲುವನ
ಇಂದಿರೆ ಕಂಡು ಇವನೆ ತನಗೆ ಪತಿ
ಯೆಂದವನ ಬಳಿಗೆ ನಡೆದಳು ||

 

ಇತ್ತರದ ಸುರರ ಸುತ್ತ ನೋಡುತ್ತ ಲಕ್ಷ್ಮಿ
ಚಿತ್ತವ ಕೊಡದೆ ನಸುನಗುತ
ಚಿತ್ತವ ಕೊಡದೆ ನಸುನಗುತ ಬಂದು ಪುರು
ಷೋತ್ತಮನ ಕಂಡು ನಮಿಸಿದಳು ||

 

ನಾನಾ ಕುಸುಮಗಳಿಂದ ಮಾಡಿದ ಮಾಲೆಯ
ಶ್ರೀನಾರಿ ತನ್ನ ಕರದಲ್ಲಿ
ಪೀನಕಂಧರದ ತ್ರಿವಿಕ್ರಮರಾಯನ ಕೊರ
ಳೀನ ಮೇಲಿಟ್ಟು ನಮಿಸಿದಳು ||

 

ಉಟ್ಟ ಪೊಂಬಟ್ಟೆಯು ತೊಟ್ಟಾಭರಣಂಗಳು
ಇಟ್ಟ ನವರತ್ನದ ಮುಕುಟವು
ದುಷ್ಟಮರ್ದನವೆಂಬ ಕಡೆಯ ಪೆಂಡೆಗಳ
ವಟ್ಟಿದ್ದ ಹರಿಗೆ ವಧುವಾದಳು ||

 

ಕೊಂಬು ಚೊಂಬು ಕಹಳೆಗಳು ತಾಳಮದ್ದಳೆಗಳು
ತಂಬಟೆ ಭೇರಿ ಪಟಹಗಳು
ಭೋಂ ಭೋಂ ಎಂಬ ಶಂಖ ಡೊಳ್ಳು ಮೌರಿಗಳು
ಅಂಬುಧಿಯ ಮನೆಯಲ್ಲೆಸೆದುವು ||

 

ಅರ್ಘ್ಯಪಾದ್ಯಾಚಮನ ಮೊದಲಾದ ಷೋಡಶಾ
ನರ್ಘ್ಯ ಪೂಜೆಯಿತ್ತನಳಿಯಂಗೆ
ಒಗ್ಗಿದ ಮನದಿಂದ ಧಾರೆಯೆರೆದನೆ ಸಿಂಧು
ಸದ್ಗತಿಯಿತ್ತು ಸಲಹೆಂದ ||

 

ವೇದೋಕ್ತ ಮಂತ್ರ ಪೇಳಿ ವಸಿಷ್ಠ ನಾರದ ಮೊದ
ಲಾದ ಮುನೀಂದ್ರರು ಮುದದಿಂದ
ವಧೂವರರ ಮೇಲೆ ಶೋಭನದಕ್ಷತೆಯನು
ಮೋದವೀವುತ್ತ ತಳಿದರು ||

 

ಸಂಭ್ರಮದಿಂದಂಬರದಿ ದುಂದುಭಿ ಮೊಳಗಲು
ತುಂಬುರು ನಾರದರು ಸ್ತುತಿಸುತ್ತ
ತುಂಬುರು ನಾರದರು ಸ್ತುತಿಸುತ್ತ ಪಾಡಿದರು ಪೀ
ತಾಂಬರಧರನ ಮಹಿಮೆಯ ||

 

ದೇವನಾರಿಯರೆಲ್ಲ ಬಂದೊದಗಿ ಪಾಠಕರು
ಓವಿ ಪಾಡುತ್ತ ಕುಣಿದರು
ದೇವತರುವಿನ ಹೂವಿನ ಮಳೆಗಳ
ಶ್ರೀವರನ ಮೇಲೆ ಕರೆದರು ||                                  ||೭೫||

 

ಮುತ್ತುರತ್ನಗಳಿಂದ ಕೆತ್ತಿಸಿದ ಹಸೆಯ ನವ
ರತ್ನಮಂಟಪದಿ ಪಸರಿಸಿ
ರತ್ನಮಂಟಪದಿ ಪಸರಿಸಿ ಕೃಷ್ಣನ
ಮುತ್ತೈದೆಯರೆಲ್ಲ ಕರೆದರು ||

 

ಶೇಷಶಯನನೇ ಬಾ ದೋಷದೂರನೆ ಬಾ
ಭಾಸುರಕಾಯ ಹರಿಯೆ ಬಾ
ಭಾಸುರಕಾಯ ಹರಿಯೆ ಬಾ ಶ್ರೀಕೃಷ್ಣ ವಿ
ಲಾಸದಿಂದೆಮ್ಮ ಹಸೆಗೆ ಬಾ ||

 

ಕಂಜಲೋಚನನೆ ಬಾ ಮಂಜುಳಮೂರ್ತಿಯೆ ಬಾ
ಕುಂಜರವರದಾಯಕನೆ ಬಾ
ಕುಂಜರವರದಾಯಕನೆ ಬಾ ಶ್ರೀಕೃಷ್ಣ ನಿ
ರಂಜನ ನಮ್ಮ ಹಸೆಗೆ ಬಾ ||

 

ಆದಿಕಾಲದಲ್ಲಿ ಆಲದೆಲೆಯ ಮೇಲೆ
ಶ್ರೀದೇವಿಯರೊಡನೆ ಪವಡಿಸಿದ
ಶ್ರೀದೇವಿಯರೊಡನೆ ಪವಡಿಸಿದ ಶ್ರೀಕೃಷ್ಣ
ಮೋದದಿಂದೆಮ್ಮ ಹಸೆಗೆ ಬಾ ||

 

ಆದಿಕಾರಣನಾಗಿ ಆಗ ಮಲಗಿದ್ದು
ಮೋದ ಜೀವರ ತನ್ನ ಉದರದಲಿ
ಮೋದ ಜೀವರ ತನ್ನುದರದಲಿ ಇಂಬಿಟ್ಟ ಅ
ನಾದಿ ಮೂರುತಿಯೇ ಹಸೆಗೆ ಬಾ ||

 

ಚಿನ್ಮಯನೆನಿಪ ನಿಮ್ಮ ಮನೆಗಳಲ್ಲಿ ಜ್ಯೋ
ತಿರ್ಮಯವಾದ ಪದ್ಮದಲಿ
ರಮ್ಮೆಯರೊಡಗೂಡಿ ರಮಿಸುವ ಶ್ರೀಕೃಷ್ಣ
ನಮ್ಮ ಮನೆಯ ಹಸೆಗೆ ಬಾ ||

 

ನಾನಾವತಾರದಲಿ ನಂಬಿದ ಸುರರಿಗೆ
ಆನಂದವೀವ ಕರುಣಿ ಬಾ
ಆನಂದವೀವ ಕರುಣಿ ಬಾ ಶ್ರೀಕೃಷ್ಣ
ಶ್ರೀನಾರಿಯರೊಡನೆ ಹಸೆಗೆ ಬಾ ||

 

ಬೊಮ್ಮನ ಮನೆಯಲ್ಲಿ ರನ್ನಪೀಠದಿ ಕುಳಿತು
ಒಮ್ಮನದಿ ನೇಹವ ಮಾಡುವ
ನಿರ್ಮಲ ಪೂಜೆಯ ಕೈಗೊಂಬ ಶ್ರೀಕೃಷ್ಣ ಪ
ರಮ್ಮ ಮೂರುತಿಯೆ ಹಸೆಗೆ ಬಾ ||

 

ಮುಖ್ಯಪ್ರಾಣನ ಮನೆಯಲ್ಲಿ ಭಾರತಿದೇವಿಯಾಗ
ಲಿಕ್ಕಿ ಬಡಿಸಿದ ರಸಾಯನವ
ಸಕ್ಕರೆಗೂಡಿದ ಪಾಯಸ ಸವಿಯುವ
ರಕ್ಕಸವೈರಿಯೆ ಹಸೆಗೆ ಬಾ ||

 

ರುದ್ರನ ಮನೆಯಲ್ಲಿ ರುದ್ರಾಣಿದೇವಿಯರು
ಭದ್ರಮಂಟಪದಿ ಕುಳ್ಳಿರಿಸಿ
ಸ್ವಾದ್ವನ್ನಂಗಳ ಬಡಿಸಲು ಕೈಗೊಂಡ
ಮುದ್ದು ನರಸಿಂಹ ಹಸೆಗೆ ಬಾ ||

 

ಗರುಡನ ಮೇಲೇರಿ ಗಗನಮಾರ್ಗದಲ್ಲಿ
ತರತರದಿ ಸ್ತುತಿಪ ಸುರಸ್ತ್ರೀಯರ
ಮೆರೆವ ಗಂಧರ್ವರ ಗಾನವ ಸವಿಯುವ
ನರಹರಿ ನಮ್ಮ ಹಸೆಗೆ ಬಾ ||

 

ನಿಮ್ಮಣ್ಣನ ಮನೆಯ ಸುಧರ್ಮ ಸಭೆಯಲ್ಲಿ
ಉಮ್ಮೆಯರಸ ನಮಿಸಿದ
ಧರ್ಮರಕ್ಷಕನೆನಿಪ ಕೃಷ್ಣ ಕೃಪೆಯಿಂದ ಪ
ರಮ್ಮ ಮೂರುತಿಯೆ ಹಸೆಗೆ ಬಾ ||

 

ಇಂದ್ರನ ಮನೆಗ್ಹೋಗಿ ಅದಿತಿಗೆ ಕುಂಡಲವಿತ್ತು
ಅಂದದ ಪೂಜೆಯ ಕೈಗೊಂಡು
ಅಂದದ ಪೂಜೆಯ ಕೈಗೊಂಡು ಸುರತರುವ
ಇಂದಿರೆಗಿತ್ತ ಹರಿಯೆ ಬಾ ||

 

ನಿಮ್ಮ ನೆನೆವ ಮುನಿಹೃದಯದಲಿ ನೆಲೆಸಿದ
ಧರ್ಮರಕ್ಷಕನೆನಿಸುವ
ಸಮ್ಮತವಾಗಿದ್ದ ಪೂಜೆಯ ಕೈಗೊಂಡ ನಿ
ಸ್ಸೀಮ ಮಹಿಮ ಹಸೆಗೆ ಬಾ ||

 

ಮುತ್ತಿನ ಸತ್ತಿಗೆ ನವರತ್ನದ ಚಾಮರ
ಸುತ್ತ ನಲಿವ ಸುರಸ್ತ್ರೀಯರ
ನೃತ್ಯವ ನೋಡುತ ಚಿತ್ರವಾದ್ಯಂಗಳ ಸಂ
ಪತ್ತಿನ ಹರಿಯೆ ಹಸೆಗೆ ಬಾ ||

 

ಎನಲು ನಗುತ ಬಂದು ಹಸೆಯ ಮೇಲೆ
ವನಿತೆ ಲಕ್ಷುಮಿಯೊಡಗೂಡಿ
ಅನಂತವೈಭವದಿ ಕುಳಿತ ಕೃಷ್ಣಗೆ ನಾಲ್ಕು
ದಿನದುತ್ಸವವ ನಡೆಸಿದರು ||

 

ಅತ್ತೇರೆನಿಪ ಗಂಗೆ ಯಮುನೆ ಸರಸ್ವತಿ ಭಾ
ರತಿ ಮೊದಲಾದ ಸುರಸ್ತ್ರೀಯರು
ಮುತ್ತಿನಕ್ಷತೆಯನು ಶೋಭಾನವೆನುತಲಿ ತಮ್ಮ
ಅರ್ತಿಯಳಿಯಗೆ ತಳಿದರು ||

 

ರತ್ನದಾರತಿಗೆ ಸುತ್ತಮುತ್ತನೆ ತುಂಬಿ
ಮುತ್ತೈದೆಯರೆಲ್ಲ ಧವಳದ
ಮುತ್ತೈದೆಯರೆಲ್ಲ ಧವಳದ ಪದನ ಪಾ
ಡುತ್ತಲೆತ್ತಿದರೆ ಸಿರಿವರಗೆ ||

 

ಬೊಮ್ಮ ತನ್ನರಸಿ ಕೂಡೆ ಬಂದೆರಗಿದ
ಉಮ್ಮೆಯರಸ ನಮಿಸಿದ
ಅಮ್ಮರರೆಲ್ಲರು ಬಗೆಬಗೆ ಉಡುಗೊರೆಗಳ
ರಮ್ಮೆಯರಸಗೆ ಸಲಿಸಿದರು ||

 

ಸತ್ಯಲೋಕದ ಬೊಮ್ಮ ಕೌಸ್ತುಭರತ್ನವನಿತ್ತ
ಮುಕ್ತಸುರರು ಮುದದಿಂದ
ಮುತ್ತಿನ ಕಂಠೀಸರವ ಮುಖ್ಯಪ್ರಾಣನಿತ್ತ
ಮಸ್ತಕದ ಮಣಿಯ ಶಿವನಿತ್ತ ||

 

ತನ್ನರಸಿ ಕೂಡೆ ಸವಿನುಡಿ ನುಡಿವಾಗ ವ
ದನ್ನದಲ್ಲಿದ್ದಗ್ನಿ ಕೆಡದಂತೆ
ವಹ್ನಿ ಪ್ರತಿಷ್ಠೆಯ ಮಾಡಿ ಅವನೊಳಗಿದ್ದ
ತನ್ನಾಹುತಿಯಿತ್ತ ಸುರರಿಗೆ ||

 

ಕೊಬ್ಬಿದ ಖಳರೋಡಿಸಿ ಅಮೃತಾನ್ನ ಊಟಕ್ಕೆ
ಉಬ್ಬಿದ ಹರುಷದಿ ಉಣಿಸಲು
ಉಬ್ಬಿದ ಹರುಷದಿ ಉಣಿಸಬೇಕೆಂದು ಸಿಂಧು
ಸರ್ಬರಿಗೆಡೆಯ ಮಾಡಿಸಿದ ||

 

ಮಾವನ ಮನೆಯಲ್ಲಿ ದೇವರಿಗೌತಣವ
ದಾನವರು ಕೆಡಿಸದೆ ಬಿಡರೆಂದು
ದಾನವರು ಕೆಡಿಸದೆ ಬಿಡರೆಂದು ಶ್ರೀಕೃಷ್ಣ
ದೇವ ಸ್ತ್ರೀವೇಷವ ಧರಿಸಿದ ||

 

ತನ್ನ ಸೌಂದರ್ಯದಿಂದುನ್ನತಮಯವಾದ ಲಾ
ವಣ್ಯದಿಂ ಮೆರೆವ ನಿಜ ಪತಿಯ
ಹೆಣ್ಣು ರೂಪವ ಕಂಡು ಕನ್ಯೆ ಮಹಲಕ್ಷುಮಿ ಇವ
ಗನ್ಯರೇಕೆಂದು ಬೆರಗಾದಳು ||

 

ಲಾವಣ್ಯಮಯವಾದ ಹರಿಯ ಸ್ತ್ರೀವೇಷಕ್ಕೆ
ಭಾವಕಿಯರೆಲ್ಲ ಮರುಳಾಗೆ
ಮಾವರ ಸುಧೆಯ ಕ್ರಮದಿಂದ ಬಡಿಸಿ ತನ್ನ
ಸೇವಕ ಸುರರಿಗುಣಿಸಿದ ||

 

ನಾಗನ ಮೇಲೆ ತಾ ಮಲಗಿದ್ದಾಗ
ಆಗಲೆ ಜಗವ ಜತನದಿ
ಆಗಲೆ ಜಗವ ಜತನದಿ ಧರಿಸೆಂದು
ನಾಗಬಲಿಯ ನಡೆಸಿದರು ||

 

ಕ್ಷುಧೆಯ ಕಳೆವ ನವರತ್ನದ ಮಾಲೆಯ
ಮುದದಿಂದ ವಾರಿಧಿ ವಿಧಿಗಿತ್ತ
ಚದುರ ಹಾರವ ವಾಯುದೇವರಿಗಿತ್ತ
ವಿಧುವಿನ ಕಲೆಯ ಶಿವಗಿತ್ತ ||

 

ಶಕ್ರ ಮೊದಲಾದ ದಿಕ್ಪಾಲಕರಿಗೆ
ಸೊಕ್ಕಿದ ಚೌದಂತ ಗಜಂಗಳ
ಉಕ್ಕಿದ ಮನದಿಂದ ಕೊಟ್ಟ ವರುಣದೇವ ಮದು
ಮಕ್ಕಳಾಯುಷ್ಯವ ಬೆಳೆಸೆಂದ ||

 

ಮತ್ತೆ ದೇವೇಂದ್ರಗೆ ಪಾರಿಜಾತವನಿತ್ತ
ಚಿತ್ತವ ಸೆಳೆವಪ್ಸರಸ್ತ್ರೀಯರ
ಹತ್ತುಸಾವಿರ ಕೊಟ್ಟ ವರುಣದೇವ ಹರಿ
ಭಕ್ತಿಯ ಮನದಲ್ಲಿ ಬೆಳೆಸೆಂದ ||

 

ಪೊಳೆವ ನವರತ್ನದ ರಾಶಿಯ ತೆಗೆತೆಗೆದು
ಉಳಿದಮರರಿಗೆ ಸಲ್ಲಿಸಿದ
ಉಳಿದ ಅಮರರಿಗೆ ಸಲ್ಲಿಸಿದ ಸಮುದ್ರ
ಕಳುಹಿದನವರ ಮನೆಗಳಿಗೆ ||

 

ಉನ್ನತ ನವರತ್ನಮಯವಾದ ಅರಮನೆಯ
ಚೆನ್ನೇಮಗಳಿಂದ ವಿರಚಿಸಿ
ತನ್ನ ಅಳಿಯನಿಗೆ ಸ್ಥಿರವಾಗಿ ಮಾಡಿಕೊಟ್ಟ
ಇನ್ನೊಂದು ಕಡೆಯಡಿ ಇಡದಂತೆ ||

 

ಹಯವದನ ತನ್ನ ಪ್ರಿಯಳಾದ ಲಕ್ಷುಮಿಗೆ
ಜಯವಿತ್ತ ಕ್ಷೀರಾಂಬುಧಿಯಲ್ಲಿ
ಜಯವಿತ್ತ ಕ್ಷೀರಾಂಬುಧಿಯಲ್ಲಿ ಶ್ರೀಕೃಷ್ಣ
ದಯದಿ ನಮ್ಮೆಲ್ಲರ ಸಲಹಲಿ ||

 

ಈ ಪದನ ಮಾಡಿದ ವಾದಿರಾಜಮುನಿಗೆ
ಶ್ರೀಪತಿಯಾದ ಹಯವದನ
ತಾಪವ ಕಳೆದು ತನ್ನ ಶ್ರೀಚರಣದ ಸ
ಮೀಪದಲ್ಲಿಟ್ಟು ಸಲಹಲಿ ||

 

ಇಂತು ಸ್ವಪ್ನದಲಿ ಕೊಂಡಾಡಿಸಿಕೊಂಡ ಲಕ್ಷ್ಮೀ
ಕಾಂತನ ಕಂದನೆನಿಸುವ
ಕಾಂತನ ಮೆಚ್ಚಿನ ವಾದಿರಾಜೇಂದ್ರಮುನಿ
ಪಂಥದಿ ಪೇಳಿದ ಪದವಿದು ||

 

ಶ್ರೀಯರಸ ಹಯವದನಪ್ರಿಯ ವಾದಿರಾಜ
ರಾಯ ರಚಿಸಿದ ಪದವಿದು
ಆಯುಷ್ಯ ಭವಿಷ್ಯ ದಿನದಿನಕೆ ಹೆಚ್ಚುವುದು ನಿಅ
ರಾಯಾಸದಿಂದ ಸುಖಿಪರು ||

 

ಬೊಮ್ಮನ ದಿನದಲ್ಲಿ ಒಮ್ಮೊಮ್ಮೆ ಈ ಮದುವೆ

ಕ್ರಮ್ಮದಿ ಮಾಡಿ ವಿನೋದಿಸುವ
ನಮ್ಮ ನಾರಾಯಣಗು ಈ ರಮ್ಮೆಗಡಿಗಡಿಗೂ ಅಸು
ರಮ್ಮೋಹನವೇ ನರನಟನೆ ||

 

ಮದುವೆಯ ಮನೆಯಲ್ಲಿ ಈ ಪದನ ಪಾಡಿದರೆ
ಮದುಮಕ್ಕಳಿಗೆ ಮುದವಹುದು
ವಧುಗಳಿಗೆ ಓಲೆಭಾಗ್ಯ ದಿನದಿನಕೆ ಹೆಚ್ಚುವುದು
ಮದನನಯ್ಯನ ಕೃಪೆಯಿಂದ ||

 

ಶೋಭಾನವೆನ್ನೀರೆ ಸುರರೊಳು ಸುಭಗನಿಗೆ
ಶೋಭಾನವೆನ್ನೀ ಸುಗುಣನಿಗೆ
ಶೋಭಾನವೆನ್ನೀರೆ ತ್ರಿವಿಕ್ರಮರಾಯಗೆ
ಶೋಭಾನವೆನ್ನೀ ಸುರಪ್ರಿಯಗೆ || ಶೋಭಾನೆ ||

ದಾಸ ಸಾಹಿತ್ಯ ಪ್ರಕಾರ
ಬರೆದವರು