ಸ್ಮರಿಸುವ ಜನಕೆಲ್ಲ

ಸ್ಮರಿಸುವ ಜನಕೆಲ್ಲ

( ರಾಗ ಸುರುಟಿ. ಆದಿ ತಾಳ) ಸ್ಮರಿಸುವ ಜನಕೆಲ್ಲ ಭವಭಯ ಪರಿತಾಪಗಳಿಲ್ಲ ||ಪ|| ಶರಣಾಗತಜನವತ್ಸಲನೆನಿಸಿದ ಕರಿಗಿರಿದುರ್ಗದ ನರಹರಿ ನಿನ್ನನು ||ಅ|| ಪೂರ್ವಸುಕೃತದಿಂದ, ಸುಜನಕೆ ತೋರ್ವೆ ನೀ ಮುದದಿಂದ ಸಾರ್ವ ಕಾಲದೊಳು ಮಹದಾನಂದದಿ ದುರ್ವಾಸರು ಪೂಜಿಪ ಮೂರುತಿ ನಿನ್ನ || ಕಾಶಿತೀರ್ಥದಿಂದ ಚಕ್ರ ಪ- ರಾಶರತೀರ್ಥದಿಂದ ಲೇಸಾದ ಮಾರುತಪಾದತೀರ್ಥ ನರ- ಕೇಸರಿ ತೀರ್ಥದಿಂದೊಪ್ಪುವ ನಿನ್ನನು || ನೀನಿಹ ಕ್ಷೇತ್ರದೊಳು ಸೇರಿಹ ವಾನರ ಪಕ್ಷಿಗಳು ಮಾನವಾದಿ ಬಹುಪ್ರಾಣಿ ಸಮೂಹಕೆ ಏನು ಪುಣ್ಯಫಲವಿರುವುದೊ ತಿಳಿಯದು || ಅತ್ತಿಯ ಮರದಲ್ಲಿ ಕಾಯ್ಗಳು ಹತ್ತಿರುವಂದದಲಿ ಮೊತ್ತಮೊತ್ತವಾದ ಬ್ರಹ್ಮಾಂಡ ನಿನ್ನೊಳು ಹತ್ತಿಕೊಂಡಿಪ್ಪುದನಂತಕೋಟಿಯೆಂದು || ಅಡವಿಯ ಮೃಗಗಳಿಗೆ ಬಹುಬಗೆ ಗಿಡಲತೆಮರಗಳಿಗೆ ಒಡೆಯ ನೀನಲ್ಲದೆ ಅನ್ನೋದಕಗಳ ಕೊಡುವರೆ ಮನುಜರು ನೀ ಗತಿ ಸಲಹೆಂದು || ಕ್ಷುದ್ರ ದೈತ್ಯರ ಗಂಡ ಕರುಣಸ- ಮುದ್ರತಿಮಿರಚಂಡ ರೌದ್ರದಿ ಅಸುರರ ಮರ್ದಿಸಿ ಲೋಕೋ- ಪದ್ರವ ಬಿಡಿಸಿದ ರುದ್ರಾಂತರ್ಗತ ನಿನ್ನ || ಭೂತಗ್ರಹಾದಿಗಳು ಸೋಕಿದ ಭೀತಿಜ್ವರಾದಿಗಳು ಚೇತೋಮುಖ ನಿನ್ನ ನೋಡಲು ಇನ್ನಾ ಪಾತಕವಳಿದು ಯಾತನೆ ಕಳೆವುದು || ಲಕ್ಷ್ಮೀ ಸಹಿತವಾಗಿ ಭಕ್ತರ ರಕ್ಷಿಸುವುದಕಾಗಿ ಲಕ್ಷಣಯುಕ್ತದಿ ಬಂದು ನಿಂದೆ ಶ್ರೀ ಲಕ್ಷುಮಿನರಸಿಂಹ ನಿನ್ನ ಚರಿತ್ರೆಯ || ಕರಿಗಿರಿ ನರಸಿಂಹ ಭಕ್ತರ ದುರಿತದಂತಿಸಿಂಹ ಪರಿಪಾಲಿಸು ನಾ ಮೊರೆಹೊಕ್ಕೆನು ನಿನ್ನ ಗುರುಪುರಂದರವಿಟ್ಠಲ ನಿನ್ನನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು