ದಾಸ ಶ್ರೇಷ್ಟರು ಕಂಡ ಉಡುಪಿಯ ಶ್ರೀಕೃಷ್ಣ - ಸಂಕ್ಷೀಪ್ತ ಪರಿಚಯ - ವಿವರಣೆ

ದಾಸ ಶ್ರೇಷ್ಟರು ಕಂಡ ಉಡುಪಿಯ ಶ್ರೀಕೃಷ್ಣ - ಸಂಕ್ಷೀಪ್ತ ಪರಿಚಯ - ವಿವರಣೆ

ಹರಿದಾಸರ ಮೂಲಸ್ಪೂರ್ತಿ ಪುರುಷ ಮಧ್ವಾಚಾರ್ಯರು. ಕೃಷ್ಣಾ ಎಂದು ಉಡುಪಿ ಶ್ರೀಕೃಷ್ಣನನ್ನು ತೋಳ್ತಕ್ಕೆಯಲ್ಲಿ ಬಿಗಿದಪ್ಪಿದ ಇವರ ಭಕ್ತಿಯನ್ನು ಕಂಡು ನಂತರದ ಹರಿದಾಸರೆಲ್ಲರೂ ಶ್ರೀಕೃಷ್ಣನ ಭಕ್ತಿಯೆಂಬ ಪ್ರೀತಿಯ ಮಹಾಪೂರವನ್ನೇ ಹರಿಸಿದರು. 'ಮಜ್ಜಿಗೆಯೊಳಗಿನ ಬೆಣ್ಣೆಯಂತೆ' ಭಕ್ತಿಗೂ ಭಾವಕ್ಕೂ ಅನ್ಯೋನ್ಯ ನಂಟು. ಭಕ್ತಿಯ ಪರಕಾಷ್ಠೆಯಲ್ಲಿ ಕರಗಿ, ಕೃಷ್ಣನಲ್ಲೇ ಪರಮಾನಂದವನ್ನು ಕಂಡವರು ಹರಿದಾಸರು. ಇವರಲ್ಲಿ ಮಹಿಳಾ ಹರಿದಾಸರು ಕೂಡಾ ಶ್ರೀಕೃಷ್ಣನ ಮಹಿಮೆಯನ್ನು ಹಾಡಿ ಹೊಗಳಿ ಉತ್ತುಂಗಕ್ಕೇರಿಸಿದರು. ನವವಿಧ ಭಕ್ತಿ ಸಂಕೀರ್ತನೆಯಿಂದ ಶ್ರೀಕೃಷ್ಣನನ್ನು ಅವರು ಹೇಗೆ ಓಲೈಸಿದರು? ತುಂಟ ಕೃಷ್ಣನನ್ನು ಹೇಗೆ ಸಂಭಾಳಿಸಿದರು? ಆಯ್ದ ಹರಿದಾಸರ ಭಕ್ತಿರಸದಿಂದ ಜಿನುಗಿದ ಭಾವಬಿಂದುವೇ ಈ ಲೇಖನ. ಇದನ್ನು ಸಾದರ ಪಡಿಸಿದವರು ವಿಶ್ವದ ನಾನಾ ಭಾಗಗಳಲ್ಲಿ ದಾಸ ಸಾಹಿತ್ಯವನ್ನು ಮೂರು ದಶಕಗಳಿಂದ ಪ್ರಸಾರ ಮಾಡುತ್ತಾ ಭಕ್ತಿ ಪ್ರಚಾರದ ಕಾರ್ಯದಲ್ಲಿ ತೊಡಗಿಸಿಕೊಂಡ ಡಾ| ಅರಳುಮಲ್ಲಿಗೆ ಪಾರ್ಥಸಾರಥಿಯವರು. ಇವರ ಈ ಲೇಖನವು ೨೦೦೬, ಜನವರಿ ೧೯ರ ತರಂಗದಲ್ಲಿ ಪ್ರಕಟವಾಗಿತ್ತು. ಅದರ ಸಂಕ್ಷೀಪ್ತ ವಿವರಣೆ ಮತ್ತು ಹಲವಾರು ಹರಿದಾಸ ಶ್ರೇಷ್ಟರು ತಾವು ಕಂಡ ಉಡುಪಿಯ ಶ್ರೀಕೃಷ್ಣನನ್ನು ಹಾಡಿ, ಹೊಗಳಿ, ಕುಣಿದಾಡಿದ್ದರ ವಿವರಣೆ. ಡಾ| ಪಾರ್ಥಸಾರಥಿಯವರು ಪರಿಚಯಿಸಿದ ಹರಿದಾಸರಲ್ಲಿ ಪ್ರಮುಖರು ೧.ಶ್ರೀಪಾದರಾಯರು ೨.ಶ್ರೀ ವ್ಯಾಸರಾಯರು ೩.ಶ್ರೀಪುರಂದರದಾಸರು ೪.ಕನಕದಾಸರು ೫.ಪ್ರಸನ್ನ ವೆಂಕಟದಾಸರು ೬.ಶ್ರೀವಿಜಯದಾಸರು ೭. ಶ್ರೀ ಜಗನ್ನಾಥ ದಾಸರು ೮. ವರಾಹ ತಿಮ್ಮಪ್ಪದಾಸರು (ಎಕ್ಕಾರು ದಾಸರು) ೯. ಪಂಗನಾಮದ ತಿಮ್ಮಣ್ಣದಾಸರು (ಅಂಕಿತ ನಾಮ ವೇಣುಗೋಪಾಲ ವಿಠಲದಾಸರು) ೧೦. ಹರಪ್ಪನ ಹಳ್ಳಿ ಭೀಮವ್ವ (ಅಂಕಿತ ನಾಮ ಭೀಮೇಶ) ೧೧.ಸುರಪುರದ ಆನಂದದಾಸರು (ಅಂಕಿತ ನಾಮ ಕಮಲೇಶ ವಿಠಲ) ೧೨. ಪ್ರಸನ್ನ ತೀರ್ಥರು ೧೩. ಗುರು ಜಗನ್ನಾಥದಾಸರು ೧೪. ವರಕವಿ ಶ್ಯಾಮಸುಂದರ ವಿಠ್ಠಲದಾಸರು ೧೫.ಗುರುಗೋವಿಂದ ವಿಠಲದಾಸರು ೧೬. ಹೊಳೆನರಸಿಪುರುದ ಭೀಮರಾಯರು (ಪಾಂಡವ ನವನೀತಧರ ಶ್ರೀಕೃಷ್ಣ ವಿಠಲ ಅಂಕಿತ) ಹೀಗೆ ತಮ್ಮ ಹೃದಯಚೈತನ್ಯನಾದ, ಕಣ್ಮಣಿಯಾದ ಉಡುಪಿಯ ಶ್ರೀಕೃಷ್ಣನನ್ನು ನೂರಾರು ಹರಿದಾಸರು ಭಕ್ತಿಪುಳಕಿತರಾಗಿ ಹಾಡಿದ್ದಾರೆ. ಡಾ|ಪಾರ್ಥಸಾರಥಿಯವರು ಪರಿಚಯಿಸಿದ ಎಲ್ಲಾ ದಾಸರ ಸಂಕ್ಷೀಪ್ತ ವಿವರಗಳನ್ನು ಒಂದೊಂದಾಗಿ ಮುಂದೆ ಪ್ರಕಟಿಸುವೆನು.