ಹಣ್ಣು ಕೊಂಬರು ಬನ್ನಿ

ಹಣ್ಣು ಕೊಂಬರು ಬನ್ನಿ

( ರಾಗ ಶಂಕರಾಭರಣ. ಅಟ ತಾಳ) ಹಣ್ಣು ಕೊಂಬರು ಬನ್ನಿ, ಹರಿದಾಸರು ಚಿಣ್ಣ ಬಾಲಕೃಷ್ಣನೆಂಬೊ ಹೆಸರಿನ ಹಣ್ಣು ||ಪ|| ಅಜನ ಪಡೆದ ಹಣ್ಣು ಗಜವ ಸಲಹಿದ ಹಣ್ಣು ತ್ರಿಜಗಾದಿ ಗುರುವಿಗೆ ತೋರ್ದ ಹಣ್ಣು ತ್ರಿಜಗವಂದಿತ ಪಾಲನೆಂಬೊ ಮಾವಿನ ಹಣ್ಣು ಸುಜನ ಗಂಧಿಯರೆ ನೀವು ಕೊಳಬನ್ನಿರಮ್ಮಯ್ಯ || ಮುದ್ದು ಸುರಿವ ಹಣ್ಣು ಕ್ಷುದ್ರ ಹರಿಸುವ ಹಣ್ಣು ಕದ್ದು ಬೆಣ್ಣೆಯ ಮೆದ್ದ ಕಳ್ಳ ಹಣ್ಣು ಒದ್ದು ಮಾವನ ಕೊಂದು ಮಾತೆಯಪ್ಪಿದ ಹಣ್ಣು ಮುದ್ದುಕೃಷ್ಣನೆಂಬೋ ಹಣ್ಣು ಕೊಳಬನ್ನಿರಮ್ಮಯ್ಯ || ಮುನ್ನೊಬ್ಬಜಾಮಿಳನ ಪಾಪ ಅಳಿದ ಹಣ್ಣು ಕನ್ನೆಯರಭಿಮಾನ ಕಾಯ್ದ ಹಣ್ಣು ಪನ್ನಗಶಾಯಿ ಪಾಲ್ಗಡಲೊಡೆಯನೆಂಬೊ ಹಣ್ಣು ಚೆನ್ನ ಕೃಷ್ಣನೆಂಬೊ ಹಣ್ಣು ಕೊಳಬನ್ನಿರಮ್ಮಯ್ಯ || ಎರಡೆಂಟುಸಾವಿರ ಗೋಪೀರಾಳಿದ ಹಣ್ಣು ಕರೆದರೆ ಕಂಭದಿಂದ ಓ ಎಂದ ಹಣ್ಣು ಮರುಗುವ ಧ್ರುವಗೆ ಉನ್ನತ ಮಾಡಿದ ಹಣ್ಣು ಪುರಂದರವಿಠಲನೆಂಬೊ ಹಣ್ಣು ಕೊಳಬನ್ನಿರಮ್ಮಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು