ಶೋಭಾನ ಶೋಭಾನವೆ

ಶೋಭಾನ ಶೋಭಾನವೆ

( ರಾಗ ಸೌರಾಷ್ಟ್ರ ಅಟತಾಳ) ಶೋಭಾನ ಶೋಭಾನವೆ ||ಪ|| ಭೂದೇವಿಯರಸ ವೆಂಕಟರಾಯಗೆ ಶೋಭಾನ ಶೋಭಾನವೆ || ಅಂದು ಕ್ಷೀರಾಂಬುನಿಧಿ ಮೊದಲಾಗಿ ಇಂದಿರೆ ಹರುಷದಿಂದುದಿಸಿ ಬಂದು ಕಂದರ್ಪ ಕೋಟಿ ಲಾವಣ್ಯಮೂರುತಿಯಾದ ಮಂದಾರಮಾಲೆಯ ಹಾಕಿದ ದೇವಗೆ || ಜನಕನ ಮನೆಯಲ್ಲಿ ರಾಜಾಧಿರಾಜರು ಎಣಿಕೆಯಿಲ್ಲದಲೆ ಬರುತಿರಲು ಸನಕಾದಿವಂದ್ಯನ ಕಂಡು ಸಂತೋಷದಿ ಜಾನಕಿ ಮಾಲೆಯ ಹಾಕಿದ ರಾಮಗೆ || ರುಕುಮನು ಶಿಶುಪಾಲಗನುಜೆಯೀಯುವನೆಂದು ಸಕಲರಾಯರಲ್ಲಿ ಬಂದಿರಲಾಗಿ ಭಕುತವತ್ಸಲನನ್ನು ಕಂಡು ಸಂತೋಷದಿ ರುಕುಮಿಣಿ ಮಾಲೆಯ ಹಾಕಿದ ಕೃಷ್ಣಗೆ || ಸತ್ಯಭಾಮೆಯು ನೀಲೆ ಭದ್ರೆ ಕಾಳಿಂದಿಯು ಮಿತ್ರವಿಂದೆಯು ಲಕ್ಷಣೆಯು ಜಾಂಬವತಿ ಮತ್ತೆ ಆ ಸೋಳಸಾಹಸ್ರಕನ್ನಿಕೆಯರ ಪ್ರತ್ಯಕ್ಷವಾಳಿದ ಕಲ್ಯಾಣನಿಗೆ || ಪದುಮದೇಶದಲೊಬ್ಬ ದೇವಾಂಗನೆಯ ಪದುಮಮುಖಿ ಶ್ರುತಿಹೃತಿಯ ಪದುಮನಾಭ ಪುರಂದರವಿಠಲಗೆ ಪದುಮಾವತಿಪ್ರಿಯ ಶ್ರೀನಿವಾಸಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು