ವೆಂಕಟರಮಣ ವೇದಾಂತ

ವೆಂಕಟರಮಣ ವೇದಾಂತ

(ರಾಗ ಆರಭಿ. ಅಟ ತಾಳ) ವೆಂಕಟರಮಣ ವೇದಾಂತ ನಿನ್ನಯ ಪಾದ ಪಂಕಜ ಕಂಡ ಮೇಲೆ ಮಂಕು ಮಾನವರ ಬೇಡಿಸುವುದುಚಿತವೆ ಶಂಖಚಕ್ರಾಂಕಿತನೆ ||ಪ|| ಕ್ಷೀರ ಸಾಗರವ ಪೊಂದಿದವ ಮಥಿಸಿದ ನೀರು ಮಜ್ಜಿಗೆ ಕಾಣನೆ? ಚಾರು ಕಲ್ಪವೃಕ್ಷದಡಿಯಲ್ಲಿ ಕುಳಿತವಗೆ ದೋರೆ ತಿಂತ್ರಿಣಿ ಬಯಕೆಯೆ? ಸಾರ್ವ ಭೂಪಾಲನ ಸೂನು ಎನಿಸಿದವಗೆ ಸೂರೆಗೂಳಿನ ತಿರುಕೆ ? ನಾರಿಲಕ್ಷ್ಮೀಕಾಂತ ನಿನ್ನ ಪೊಂದಿದವಗೆ ದಾರಿದ್ರ್ಯದಟ್ಟುಳಿಯೆ? ಸುರ ನದಿಯಲಿ ಮಿಂದು ಶುಚಿಯಾದ ಮೇಲಿನ್ನು ದುರಿತಗಳಟ್ಟುಳಿಯೆ ? ಪರಮ ಪುರುಷ ನಿನ್ನ ಪೊಂದಿದ್ದ ದಾಸರ್ಗೆ ಅರಿಗಳ ಭೀತಿಯುಂಟೆ ? ಗರುಡನ ಮಂತ್ರವ ಕಲಿತು ಜಪಿಸುವಗೆ ಉರಗನ ಹಾವಳಿಯೆ ? ಹರಿ ಪಕ್ಕದೊಳು ಮನೆ ಕಟ್ಟಿದ ನರನಿಗೆ ಕರಿಗಳ ಭೀತಿಯುಂಟೆ ? ಪರಮ ಪುರುಷ ಗುಣ ಪೂರ್ಣ ನೀನಹುದೆಂದು ಮರೆಹೊಕ್ಕೆ ಕಾಯೊ ಎನ್ನ ಉರಗಾದ್ರಿವಾಸ ಶ್ರೀ ಪುರಂದರ ವಿಟ್ಠಲ ಪರಬ್ರಹ್ಮ ನಾರಾಯಣ
ದಾಸ ಸಾಹಿತ್ಯ ಪ್ರಕಾರ
ಬರೆದವರು